ಬೆಳಗಾವಿ: ಗೋಕಾಕ ತಾಲ್ಲೂಕಿನ ಬಡಿಗವಾಡ, ದುರದುಂಡಿ, ಪಾಮಲದಿನ್ನಿ ಹಾಗೂ ಮಲ್ಲಾಪೂರ ಪಿ.ಜಿ. ಗ್ರಾಮಗಳ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸುವ, ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ ನಾಲೆಯ ಸಮೀಪದ ರಸ್ತೆ ಕುಸಿದಿದೆ.
‘ನಾಲ್ಕು ತಿಂಗಳಿಂದಲೂ ದುರಸ್ತಿ ಆಗಿಲ್ಲ. ನೀರಾವರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ವಕೀಲ ಮಲ್ಲಿಕಾರ್ಜುನ ಚೌಕಶಿ ದೂರಿದ್ದಾರೆ.
‘107 ಕಿ.ಮೀ. ಉದ್ದದ ಘಟಪ್ರಭಾ ಎಡದಂಡೆ ಕಾಲುವೆಗೆ ಶನಿವಾರ 2,400 ಕ್ಯುಸೆಕ್ ನೀರು ಹರಿಬಿಡಲಾಗುತ್ತಿದ್ದು, ಎರಡು ಕಡೆಗಳಲ್ಲಿ (5ನೇ ಕಿ.ಮೀ. ಹಾಗೂ 7ನೇ ಕಿ.ಮೀ.) ನಾಲೆ ಪಕ್ಕದ ರಸ್ತೆ ಶಿಥಿಲಗೊಂಡಿದೆ. ಒಂದು ವೇಳೆ ಅದು ಒಡೆದರೆ ಹೊಲಗಳು ಮತ್ತು ಮನೆಗಳು ಮುಳುಗಿ ಜನರು ಬೀದಿಗೆ ಬೀಳುತ್ತಾರೆ. ಆ ರಸ್ತೆಯಲ್ಲಿ ನಿತ್ಯ ನೂರಾರು ರೈತರು ಸಂಚರಿಸುತ್ತಾರೆ. ಈಗ ಲಾಕ್ಡೌನ್ ಕಾರಣಕ್ಕೆ ಪೋಲಿಸರ ಕಣ್ಣು ತಪ್ಪಿಸಲು ಸಾಕಷ್ಟು ಜನ ಇದೇ ಮಾರ್ಗ ಅವಲಂಬಿಸಿದ್ದಾರೆ. ರಸ್ತೆ ಒಡೆದಿರುವ ಕುರಿತು ಯಾವುದೇ ಸೂಚನಾ ಫಲಕ ಹಾಕಿಲ್ಲ. ಬ್ಯಾರಿಕೇಡ್ ಕೂಡ ಇಟ್ಟಿಲ್ಲ. ಯಾರಾದರೂ ಅಪ್ಪಿತಪ್ಪಿ ಬಿದ್ದರೆ ಸಾವು ನಿಶ್ಚಿತ. ಅಧಿಕಾರಿಗಳು ಇತ್ತ ಗಮನಹರಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.