ಪರಮಾನಂದವಾಡಿ/ ಖೇಮಲಾಪುರ: ಖೇಮಲಾಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಸಹಯೋಗದಲ್ಲಿ ಆರಂಭವಾದ ‘ಡಿಜಿಟಲ್–ಸಾಮಾನ್ಯ ಸೇವಾ ಕೇಂದ್ರ’ವನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಚೌಗಲಾ ಮತ್ತು ಪಿಕೆಪಿಎಸ್ ಅಧ್ಯಕ್ಷ ಸುನೀಲಗೌಡ ಪಾಟೀಲ ಶುಕ್ರವಾರ ಉದ್ಘಾಟಿಸಿದರು.
ಯೋಜನೆಯ ಚಿಕ್ಕೋಡಿ ಜಿಲ್ಲಾ ಘಟಕದ ಯೋಜನಾಧಿಕಾರಿ ಕೃಷ್ಣ ಟಿ. ಮಾತನಾಡಿ, ‘ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ಡಿಜಿಟಲ್ ಸೇವಾ ಕಾರ್ಯ ಅಗತ್ಯ ಮತ್ತು ಅನಿವಾರ್ಯವಾಗಿದೆ. ಇದನ್ನು ಮನಗಂಡು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಒಡಂಬಡಿಕೆ ಮಾಡಿಕೊಂಡು ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಕೇಂದ್ರಗಳ ಆರಂಭಕ್ಕೆ ಕ್ರಮ ವಹಿಸಿದ್ದಾರೆ’ ಎಂದು ತಿಳಿಸಿದರು.
‘ರಾಜ್ಯದಾದ್ಯಂತ 10ಸಾವಿರ ಕೇಂದ್ರಗಳ ಆರಂಭಕ್ಕೆ ತಯಾರಿಯಾಗಿದೆ. ಈವರೆಗೆ 6ಸಾವಿರ ಕೇಂದ್ರಗಳು ಆರಂಭಗೊಂಡಿವೆ’ ಎಂದು ಹೇಳಿದರು.
‘ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೆಲ ಸೇವೆಗಳು ಲಭ್ಯ ಇವೆ. ಮುಂದಿನ ದಿನಗಳಲ್ಲಿ 250 ಸೇವೆಗಳು ಹಂತ ಹಂತವಾಗಿ ಸಿಗುತ್ತವೆ. ಸರ್ಕಾರ ನಿಗದಿಪಡಿಸಿದ ಶುಲ್ಕ ಪಡೆಯಲಾಗುವುದು. ಕೆಲ ಸೇವೆಗಳು ಉಚಿತವಾಗಿ ಸಿಗಲಿವೆ’ ಎಂದರು.
ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸತ್ಯಪ್ಪ ಕವಟಕೊಪ್ಪ, ಸದಸ್ಯ ಸದಾಶಿವ ವಡಗಿ, ಮುಖಂಡರಾದ ಯಮನಪ್ಪ ಸಂಕೇಶ್ವರ, ಮಲ್ಲಪ್ಪ ಕಟಕಬಾಂವಿ, ಬಸವರಾಜ ನವಲ್ಯಾಳ, ಸಿದ್ದಪ್ಪ ದುಪದಾಳ, ಪರಮಾನಂದವಾಡಿ ವಲಯ ಮೇಲ್ವಿಚಾರಕ ಸಂತೋಷ್ ಮಾಳಿ, ಸೇವಾ ಪ್ರತಿನಿಧಿಗಳಾದ ಶಾಂತಾ ಬಡಿಗೇರ, ಕುಮಾರ ಚೌಗಲಾ, ಕೇಂದ್ರದ ನಿರ್ವಾಹಕಿ ಶಿಲ್ಪಾ ಐನಾಪುರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.