ಸವದತ್ತಿ (ಬೆಳಗಾವಿ ಜಿಲ್ಲೆ): ಕೊರೊನಾ ಆರ್ಭಟದ ನಡುವೆ ತಾಲ್ಲೂಕಿನ ಹೀರೆಕುಂಬಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಉಂಟಾಗಿದೆ. ಈ ಆಸ್ಪತ್ರೆಯನ್ನೇ ಅವಲಂಬಿಸಿರುವ ಸುತ್ತಮುತ್ತಲಿನ ಗ್ರಾಮಗಳ 28ಸಾವಿರ ಜನ ಚಿಕಿತ್ಸೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
2017ರಿಂದ ಈವರೆಗೂ ಈ ಕೇಂದ್ರಕ್ಕೆ ಕಾಯಂ ವೈದ್ಯಾಧಿಕಾರಿ ನೇಮಕವಾಗಿಲ್ಲ. ಕೋವಿಡ್ ಪರೀಕ್ಷೆಯ ಜೊತೆ ಇತರಚಟುವಟಿಕೆಗಳನ್ನು ಸಿಬ್ಬಂದಿಯೇ ನಡೆಸಿದ್ದಾರೆ. ಗುತ್ತಿಗೆ ಆಧಾರದ ಮೇಲಿದ್ದ ವೈದ್ಯರು ಸೇರಿದಂತೆ ಮೂವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಾರಣ ಚಿಕಿತ್ಸೆ ನೀಡುವವರಿಲ್ಲ. ಪರಿಣಾಮ ಹಿರೇಕುಂಬಿ, ಹಂಚಿನಾಳ, ಧಡೇರಕೊಪ್ಪ, ಚಿಕ್ಕುಂಬಿ, ಆಚಮಟ್ಟಿ, ಚುಳಕಿ ಗ್ರಾಮ ಪಂಚಾಯಿತಿಗಳ ಜನರು ಆತಂಕಗೊಂಡಿದ್ದಾರೆ.
ಜ್ವರ, ನೆಗಡಿ ಮೊದಲಾದ ಸಾಮಾನ್ಯ ಕಾಯಿಲೆಗೆ ಚಿಕಿತ್ಸೆ ನೀಡಲು ಸಿಬ್ಬಂದಿಗಳಿಲ್ಲ ಮತ್ತು ವೈದ್ಯರೂ ಇಲ್ಲದಂತಾಗಿದೆ. ಶೀಘ್ರವಾಗಿ ನೇಮಕ ಮಾಡುವಂತೆ ಗ್ರಾಮ ಪಂಚಾಯಿತಿ ಸದಸ್ಯರು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಲ್ಲಿ ಮನವಿ ಮಾಡಿದ್ದಾರೆ.
ವೈದ್ಯಾಧಿಕಾರಿ, ಎಫ್ಡಿಸಿ ಸೇರಿದಂತೆ 20 ಹುದ್ದೆಗಳಿವೆ. ಈಗ 11 ಹುದ್ದೆಗಳು ಭರ್ತಿಯಾಗಿವೆ. ಮುಖ್ಯವಾದ ವೈದ್ಯಾಧಿಕಾರಿ ಹುದ್ದೆಯೇ ಖಾಲಿ ಇದೆ. ಸಂಕಷ್ಟ ಎದುರುಸುತ್ತಿರುವ ಸಂದರ್ಭದಲ್ಲಿ ಜನತೆಯ ಪರದಾಟ ತಪ್ಪಿಸುವ ಜವಾಬ್ದಾರಿಯನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ವಹಿಸಬೇಕು ಎನ್ನುವುದು ಜನರ ಆಗ್ರಹವಾಗಿದೆ. ಕೊರೊನಾ ನಿಯಂತ್ರಣದ ಜೊತೆಗೆ ಆಸ್ಪತ್ರೆ ಬಲಗೊಳಿಸುವ ಕಾರ್ಯವೂ ನಡೆಯಬೇಕು ಎನ್ನುವುದು ಅವರ ಒತ್ತಾಯವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.