ADVERTISEMENT

ಆರೋಗ್ಯ ಸೇವೆ: ಕೆಎಲ್‌ಇ ಪಾತ್ರ ದೊಡ್ಡದು

ಹೋಮ್ ನರ್ಸಿಂಗ್ ಸೇವೆ ಉದ್ಘಾಟನೆ, ವೈದ್ಯರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 14:12 IST
Last Updated 1 ಜುಲೈ 2019, 14:12 IST
ಬೆಳಗಾವಿಯ ಕೆಎಲ್‌ಇ ಚಾರಿಟಬಲ್ ಆಸ್ಪತ್ರೆಯ ರಕ್ತಭಂಡಾರವನ್ನು ಶಾಸಕ ಅಭಯ ಪಾಟೀಲ ಸೋಮವಾರ ಉದ್ಘಾಟಿಸಿದರು
ಬೆಳಗಾವಿಯ ಕೆಎಲ್‌ಇ ಚಾರಿಟಬಲ್ ಆಸ್ಪತ್ರೆಯ ರಕ್ತಭಂಡಾರವನ್ನು ಶಾಸಕ ಅಭಯ ಪಾಟೀಲ ಸೋಮವಾರ ಉದ್ಘಾಟಿಸಿದರು   

ಬೆಳಗಾವಿ: ‘ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದುತ್ತಿರುವ ನಗರದ ನಾಗರಿಕರ ಆರೋಗ್ಯ ರಕ್ಷಣೆಯಲ್ಲಿ ಕೆಎಲ್ಇ ಸಂಸ್ಥೆಯ ಕೊಡುಗೆ ಅಪಾರವಾಗಿದೆ’ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.

ಇಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಸೋಮವಾರ ನಡೆದ ವೈದ್ಯರ ದಿನಾಚರಣೆ ಹಾಗೂ ರಕ್ತಭಂಡಾರ, ಔಷಧಾಲಯ, ಹೋಮ್ ನರ್ಸಿಂಗ್‌ ಸೇವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಗರಗಳು ಬೆಳೆದಂತೆ ಜನಸಂಖ್ಯೆ ಅಧಿಕವಾಗುತ್ತಿದೆ. ಅದೇ ರೀತಿ ಅಭಿವೃದ್ಧಿ ಯೋಜನೆಗಳು, ಆರ್ಥಿಕ ಚಟುವಟಿಕೆಗಳು ಕೂಡ ಹೆಚ್ಚುತ್ತಿವೆ. ರೋಗಗಳ ಸಂಖ್ಯೆಯೂ ವೃದ್ಧಿಸುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯ ಸೇವೆ ನೀಡುವಲ್ಲಿ ಕರ್ನಾಟಕ ಮಾತ್ರವಲ್ಲದೇ ದೇಶ–ವಿದೇಶಗಳಲ್ಲೂ ಕೆಎಲ್‌ಇ ಹೆಸರುವಾಸಿಯಾಗಿದೆ. ಇದು ಹೆಮ್ಮೆಯ ಸಂಗತಿ’ ಎಂದರು.

ADVERTISEMENT

ಕೆಎಲ್ಇ ಸಂಸ್ಥೆ ನಿರ್ದೇಶಕ ಡಾ.ವಿ.ಎಸ್. ಸಾಧುನವರ ಮಾತನಾಡಿ, ‘ದಕ್ಷಿಣ ಭಾಗದಲ್ಲಿರುವ ಆರ್ಥಿಕವಾಗಿ ಹಿಂದುಳಿದವರ ಆರೋಗ್ಯ ರಕ್ಷಣೆ ಉದ್ದೇಶದಿಂದ ಚಾರಿಟಬಲ್ ಆಸ್ಪತ್ರೆಯನ್ನು ಕೆಎಲ್‌ಇ ಸಂಸ್ಥೆಯ ಶತಮಾನೋತ್ಸವ ಅಂಗವಾಗಿ ಸ್ಥಾಪಿಸಲಾಯಿತು. ಈ ಉದ್ದೇಶವನ್ನು ಇಲ್ಲಿನ ವೈದ್ಯರು ಅಕ್ಷರಶಃ ನೆರವೇರಿಸಿದ್ದಾರೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಸಿ. ಧಾರವಾಡ ಮಾತನಾಡಿದರು. ಹಿರಿಯ ಸರ್ಜನ್ ಡಾ.ಅಶೋಕ ಗೋದಿ, ಡಾ.ವಿಜಯಲಕ್ಷ್ಮಿ ಕುಲಗೋಡ ಅವರನ್ನು ಸನ್ಮಾನಿಸಲಾಯಿತು.

ಕೆಎಲ್‌ಇ ಹೋಮಿಯೋಪಥಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎ. ಉಡಚನಕರ, ಹಿರಿಯ ವೈದ್ಯ ಡಾ.ಅಶೋಕ ಪಾಂಗಿ, ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ರಕ್ತಭಂಡಾರ ಅಧಿಕಾರಿ ಡಾ.ವೀರಗೆ, ಸಾಮಾಜಿಕ ಕಾರ್ಯಕರ್ತ ವಿಜಯ ಮೋರೆ, ಮುಖಂಡರಾದ ಸಂಜಯ ಸವ್ವಾಶೇರಿ, ರಮೇಶ ಸೊಂಟಕ್ಕಿ, ದೀಪಕ ಮುಚ್ಚಂಡಿ, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಗುರುನಾಥ ಶಿಂಧೆ, ಮಾಜಿ ಅಧ್ಯಕ್ಷ ಪ್ರಭಾಕರ ಕುಲಕರ್ಣಿ ಇದ್ದರು.

ಹಿರಿಯ ವೈದ್ಯ ಡಾ.ಬಿ.ಎಸ್. ಮಹಾಂತಶೆಟ್ಟಿ ಸ್ವಾಗತಿಸಿದರು. ಅರುಣ ನಾಗಣ್ಣವರ ನಿರೂಪಿಸಿದರು. ಡಾ. ಕಿಶೋರ ಬಂಡಗಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.