ಗೋಕಾಕ (ಬೆಳಗಾವಿ ಜಿಲ್ಲೆ): ‘ಹಬ್ಬಗಳು ಮನುಷ್ಯನ ಪ್ರಗತಿಗೆ ಪೂರಕವಾಗಿದ್ದರೂ ಕೆಲವು ಆಚರಣೆಗಳು ಮೂಢನಂಬಿಕೆಗೆ ಪ್ರಚೋದನೆ ನೀಡುತ್ತಿವೆ. ಇದನ್ನು ಹೋಗಲಾಡಿಸಲು ನಾಗರ ಪಂಚಮಿಯಂದು ಮಠದಿಂದ ಹಾಲನ್ನು ರೋಗಿಗಳಿಗೆ ವಿತರಿಸುವ ಮೂಲಕ ಬಸವ ಪಂಚಮಿಯನ್ನಾಗಿ ಆಚರಿಸಲಾಗುತ್ತಿದೆ’ ಎಂದು ಸಾಹಿತಿ ಡಾ. ಸಿ.ಕೆ ನಾವಲಗಿ ಹೇಳಿದರು.
ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶೂನ್ಯ ಸಂಪಾದನ ಮಠದಿಂದ ಗುರುವಾರ ನಾಗರ ಪಂಚಮಿ ಹಬ್ಬದ ನಿಮಿತ್ತ ಬಡ ರೋಗಿಗಳಿಗೆ ಹಾಲು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹುತ್ತಕ್ಕೆ ಹಾಲು ಸುರಿದು ಅವೈಜ್ಞಾನಿಕವಾಗಿ ಆಚರಣೆಗೆ ಜನರು ಮುಂದಾಗುತ್ತಾರೆ. ಇದರಿಂದ ಅಪಾರ ಪ್ರಮಾಣ ಹಾಲು ವ್ಯರ್ಥವಾಗುತ್ತಿದೆ. ನಮ್ಮ ರಾಜ್ಯವೊಂದರಲ್ಲೇ ಪ್ರತಿ ವರ್ಷ ಅಪೌಷ್ಟಿಕತೆಯಿಂದ ಸಾವಿರಾರು ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಹಾಲನ್ನು ವ್ಯರ್ಥ ಮಾಡುವ ಬದಲಿಗೆ ಮಕ್ಕಳಿಗೆ ಮತ್ತು ಬಡವರಿಗೆ ಕೊಟ್ಟರೆ ಅದು ಅಮೃತವಾಗುತ್ತದೆ. ಈ ಕುರಿತು ಜನರು ಚಿಂತಿಸಬೇಕು’ ಎಂದರು.
'ಬಡ ಮಕ್ಕಳು, ಅನಾಥರು ಹಾಗೂ ಆಸ್ಪತ್ರೆಯಲ್ಲಿನ ಬಡ ರೋಗಿಗಳಿಗೆ ಈ ಹಾಲು ಹಂಚುವ ಮೂಲಕ ಶೂನ್ಯ ಸಂಪಾದನಮಠದ ಶ್ರೀಗಳು ಅರ್ಥಪೂರ್ಣವಾಗಿ ಹಬ್ಬ ಆಚರಿಸುತ್ತಿರುವುದು ಬದಲಾವಣೆಯ ಸಂಕೇತವಾಗಿದೆ. ಎಲ್ಲರೂ ಮೂಢನಂಬಿಕೆಯಿಂದ ಹೋರ ಬರಬೇಕು’ ಎಂದು ಹೇಳಿದರು.
ಶೂನ್ಯ ಸಂಪಾದನಮಠದ ಮುರುಘಾಜೇಂದ್ರ ಸ್ವಾಮೀಜಿ, ಆಸ್ಪತ್ರೆಯ ಸಿಎಂಒ ಡಾ.ರವೀಂದ್ರ ಅಂಟಿನ, ಮಲ್ಲಿಕಾರ್ಜುನ ಈಟಿ, ಮಹಾಂತೇಶ ಕುರಬೇಟ, ಬಸನಗೌಡ ಪಾಟೀಲ, ಬಸವರಾಜ ಹತ್ತರಕಿ, ಬಸವರಾಜ ಖಾನಪ್ಪನ್ನವರ, ಮೈಲಾರಲಿಂಗ ಉಪ್ಪಿನ, ಎಸ್.ಕೆ. ಮಠದ, ವೀಣಾ ಹಿರೇಮಠ, ಶಕುಂತಲಾ ಕಟ್ಟಿ, ರಾಜೇಶ್ವರಿ ಬೆಟ್ಟದಗೌಡರ, ಸೇವಂತಾ ಮುಚ್ಚಂಡಿಹಿರೇಮಠ, ಆರ್.ಎಲ್. ಮಿರ್ಜಿ, ಮಹಾದೇವಿ ಕಿರಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.