ADVERTISEMENT

‘ಚಲಿಸು ಕರ್ನಾಟಕ ಸೈಕಲ್ ಯಾತ್ರೆ’ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 14:44 IST
Last Updated 30 ನವೆಂಬರ್ 2020, 14:44 IST
ಕಿತ್ತೂರಲ್ಲಿ ಎಸ್. ಆರ್. ಹಿರೇಮಠ 'ಚಲಿಸು ಕರ್ನಾಟಕ ಯಾತ್ರೆ'ಗೆ ಸೋಮವಾರ ಚಾಲನೆ ನೀಡಿದರು
ಕಿತ್ತೂರಲ್ಲಿ ಎಸ್. ಆರ್. ಹಿರೇಮಠ 'ಚಲಿಸು ಕರ್ನಾಟಕ ಯಾತ್ರೆ'ಗೆ ಸೋಮವಾರ ಚಾಲನೆ ನೀಡಿದರು   

ಚನ್ನಮ್ಮನ ಕಿತ್ತೂರು: ಸ್ವಚ್ಛ, ಪ್ರಾಮಾಣಿಕ ಮತ್ತು ಜನಪರ ರಾಜಕಾರಣದ ಜಾಗೃತಿಗಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಆರಂಭಿಸಲಾದ ಚಲಿಸು ಕರ್ನಾಟಕ ಸೈಕಲ್ ಯಾತ್ರೆಗೆ ಸೋಮವಾರ ಇಲ್ಲಿ ಚಾಲನೆ ನೀಡಲಾಯಿತು.

ಸಮಾಜ ಪರಿವರ್ತನಾ ಸಮುದಾಯ ಮುಖ್ಯಸ್ಥ ಎಸ್.ಆರ್.ಹಿರೇಮಠ ಈ ಸೈಕಲ್ ಯಾತ್ರೆಗೆ ಬಾವುಟ ಬೀಸಿ ಚಾಲನೆ ನೀಡಿದರು.

ಅನಂತರ ಅವರು ಮಾತನಾಡಿ, ‘ಪ್ರಸ್ತುತ ಸಂದರ್ಭದಲ್ಲಿ ಪರ್ಯಾಯ ರಾಜಕಾರಣದ ದೊಡ್ಡ ಕೆಲಸವಾಗಬೇಕಿದೆ. ಪ್ರಾಮಾಣಿಕ, ದಕ್ಷ ಮತ್ತು ಜನಪರ ರಾಜಕಾರಣ ಮಾಡುವವರನ್ನು ಆಯ್ಕೆ ಮಾಡಬೇಡಿ ಕಳಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಶ್ರೀಮಂತ ಬಡವರ ಮಧ್ಯೆದ ಅಂತರ ಹೆಚ್ಚಿಸುವ, ಡಕಾಯಿತರಿಗೆ ರಕ್ಷಣೆ ನೀಡುವ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ (ಜೆಸಿಬಿ) ಅಳಿಸಿ ಜನಪರವಾದ ಪರ್ಯಾಯ ರಾಜಕಾರಣ ಉಳಿಸಬೇಕಾಗಿದೆ. ಈಗಿನ ಸರ್ಕಾರದ ತಪ್ಪುಗಳನ್ನು ಜನರಿಗೆ ತಲುಪಿಸಬೇಕಾಗಿದೆ’ ಎಂದು ಒತ್ತಿ ಹೇಳಿದರು.

‘ಸಂವಿಧಾನ ಮತ್ತು ಸಮತಾ ತತ್ವಗಳಿಗೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಸ್ವತಂತ್ರ ಭಾರತದ ಮೂಲಕ ಸ್ವರಾಜ್ಯದ ಕನಸು ಕಂಡವರಿಗೆ ಕುತ್ತು ಬಂದಿದೆ. ಸಾಮಾನ್ಯರು ಅರ್ಥಹೀನ ಜೀವನ ನಡೆಸಲು ಕಾರಣರಾದವರನ್ನು ಮನೆಗೆ ಕಳುಹಿಸಬೇಕಿದೆ’ ಎಂದು ಗುಡುಗಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಮಾತನಾಡಿ, ‘ಕೊರೊನಾ ಸೋಂಕಿನಿಂದಾಗಿ ರಾಜ್ಯ ಮತ್ತು ದೇಶ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ. ಇಂಥ ಸಮಯದಲ್ಲಿ ಶೇ 25ರಷ್ಟು ನೌಕರರು ನಿರುದ್ಯೋಗಿಗಳಾಗಿದ್ದಾರೆ. ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿದೆ. ಸ್ಯಾನಿಟೈಸರ್, ಮಾಸ್ಕ್ ಮತ್ತು ವೆಂಟಿಲೇಟರ್ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ತನಿಖೆಗಾಗಿ ಎಸಿಬಿಗೆ ದೂರು ಕೂಡಾ ಸಲ್ಲಿಸಲಾಗಿದೆ’ ಎಂದು ಹೇಳಿದರು.

‘ಕಿತ್ತೂರಿಂದ ಆರಂಭಗೊಂಡಿರುವ ಈ ಸೈಕಲ್ ಯಾತ್ರೆ ಅಣ್ಣಿಗೇರಿ, ಲಕ್ಕುಂಡಿ ಭಾನಾಪುರ, ಕೊಪ್ಪಳ, ಹೊಸಪೇಟೆ ಧರ್ಮಸಾಗರ, ತೋರಣಗಲ್ಲು ಮಾರ್ಗವಾಗಿ ಚಲಿಸಿ ಬಳ್ಳಾರಿಯಲ್ಲಿ ಸಮಾರೋಪಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.

ಎಚ್.ಎಂ.ವೆಂಕಟೇಶ, ನಿಂಗೇಗೌಡ ಎಸ್. ಎಚ್. ದಯಾನಂದ ನವಲಗುಂದ, ಮಂಜುನಾಥ ಜಕ್ಕಣ್ಣವರ ದೀಪಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.