ಬೈಲಹೊಂಗಲ: 'ಹಿಂದೂ ಸಂಸ್ಕೃತಿ, ಪರಂಪರೆ, ಆಚರಣೆಗಳಿಗೆ ಐತಿಹಾಸಿಕ ಹಿನ್ನಲೆ ಇದೆ. ದೇವಾನು ದೇವತೆಗಳ ತೇಜಸ್ಸಿನಿಂದ ಧರ್ಮದ ಸಂರಕ್ಷಣೆಯಾಗಿದೆ. ಅಂತಹ ಪವಿತ್ರ ಹಿಂದೂ ಧರ್ಮದ ಆಚರಣೆ, ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ' ಎಂದು ಶಾಖಾ ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ವಿಶ್ವಹಿಂದೂ ಪರಿಷತ್, ಭಜರಂಗದಳ ತಾಲ್ಲೂಕು ಘಟಕದಿಂದ ನವರಾತ್ರಿ ದಸರಾ ಉತ್ಸವ ಅಂಗವಾಗಿ ಮಂಗಳವಾರ ನಡೆದ ದುರ್ಗಾಮಾತಾ ದೌಡ್ ಕಾರ್ಯಕ್ರಮದಲ್ಲಿ ಗ್ರಾಮದೇವಿಯರಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
'ನಮ್ಮ ಹಿಂದೂಗಳ ರಕ್ತದಲ್ಲಿ, ಧರ್ಮದಲ್ಲಿ, ಸರ್ವಧರ್ಮ ಸಮಭಾವ ಇದೆ. ಹಿಂದೂಗಳು, ಮುಸ್ಲಿಮರು ಒಟ್ಟಾಗಿ ಬದುಕಿ, ಬಾಳಿ ಸಾಮರಸ್ಯದ ಜಗತ್ತು ನಿರ್ಮಾಣ ಮಾಡಬೇಕು. ಸಮಾಜದಲ್ಲಿರುವ ಅನೀತಿ, ಅನ್ಯಾಯ ಖಂಡಿಸಿ ಹಿಂದೂ ಧರ್ಮ ಪ್ರತಿಷ್ಠಾಪನೆ ಕಾರ್ಯ ಮಾಡಬೇಕು' ಎಂದರು.
ಗ್ರಾಮದೇವಿ ದೇವಸ್ಥಾನದಿಂದ ಆರಂಭವಾದ ದೌಡ್ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಾಳಿ ದುರ್ಗಮ್ಮ ದೇವಿ ದೇವಸ್ಥಾನಕ್ಕೆ ಬಂದು ತಲುಪಿತು. ರಸ್ತೆಯುದ್ದಕ್ಕೂ ಮಕ್ಕಳು, ಯುವಕರು, ಹಿರಿಯರು ತಲೆಗೆ ಕೇಸರಿ ಬಣ್ಣದ ಟೊಪ್ಪಿಗೆ ತೊಟ್ಟು ನವದುರ್ಗೆಯರಿಗೆ, ವಿಶ್ವಗುರು ಬಸವಣ್ಣ, ಶಿವಾಜಿ ಮಹಾರಾಜರಿಗೆ ಜಯಘೋಷ ಹಾಕಿದರು.
ಸಂಘಟನೆಯ ತಾಲ್ಲೂಕು ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಉಪಾಧ್ಯಕ್ಷ ಶಿವಾನಂದ ಬಡ್ಡಿಮನಿ, ಪುರಸಭೆ ಅಧ್ಯಕ್ಷ ರಾಜು ಜನ್ಮಟ್ಟಿ, ಮಾಜಿ ಅಧ್ಯಕ್ಷ ಬಾಬು ಕುಡಸೋಮಣ್ಣವರ, ಮುಖಂಡರಾದ ಮಹಾಂತೇಶ ತುರಮರಿ, ಮಡಿವಾಳಪ್ಪ ಹೋಟಿ, ಸೋಮನಾಥ ಸೊಪ್ಪಿಮಠ, ಶ್ರೀಶೈಲ ಯಡಳ್ಳಿ, ಗುರು ಮೆಟಗುಡ್ಡ, ವಿರುಪಾಕ್ಷ ವಾಲಿ, ಮಹಾಂತೇಶ ಹೊಸೂರ, ಗಂಗಪ್ಪ ಗುಗ್ಗರಿ, ಆದಿತ್ಯಾ ಪಾಟೀಲ, ನಾಗರಾಜ ಮರಕುಂಬಿ, ಸುಭಾಸ ತುರಮರಿ, ಅಶೋಕ ಸವದತ್ತಿ, ವಿವೇಕಾನಂದ ಪೂಜಾರ, ಮಲ್ಲಿಕಾರ್ಜುನ ಏಣಗಿಮಠ, ಸಂತೋಷ ಹುಣಶೀಕಟ್ಟಿ, ಆನಂದ ಹಿರೇಮಠ, ಬಸವರಾಜ ದೊಡಮನಿ, ರವಿ ವನ್ನೂರ, ಚಂದ್ರು ಉಂಡಿ, ಈರಣ್ಣ ಮೆಳ್ಳಿಕೇರಿ, ಮಹಾಂತೇಶ ಹಣಸಿ, ರವಿ ಹುಲಕುಂದ, ನೂರಾರು ಯುವಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.