ADVERTISEMENT

ಮತಯಂತ್ರಗಳಿಗೆ ಪೊಲೀಸರ ಸರ್ಪಗಾವಲು

ಸ್ಟ್ರಾಂಗ್‌ ರೂಂಗಳಿಗೆ ಮೂರು ಹಂತದ ಭದ್ರತೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 14:30 IST
Last Updated 6 ಡಿಸೆಂಬರ್ 2019, 14:30 IST

ಬೆಳಗಾವಿ: ಜಿಲ್ಲೆಯ ಗೋಕಾಕ, ಕಾಗವಾಡ ಹಾಗೂ ಅಥಣಿ ಮತ ಕ್ಷೇತ್ರಗಳಿಗೆ ಗುರುವಾರ ನಡೆದ ಉಪ ಚುನಾವಣೆಯಲ್ಲಿ ಬಳಸಲಾದ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ), ವಿವಿಪ್ಯಾಟ್‌ ಯಂತ್ರಗಳನ್ನು ಇಲ್ಲಿನ ಆರ್‌ಪಿಡಿ ಕಾಲೇಜಿನ ಸ್ಟ್ರಾಂಗ್‌ ರೂಂನಲ್ಲಿ ಬಿಗಿ ಭದ್ರತೆಯಲ್ಲಿ ಇಡಲಾಗಿದೆ.

ಮತಗಟ್ಟೆಗಳಿಂದ ತಾಲ್ಲೂಕು ಕೇಂದ್ರಗಳಿಗೆ ತಲುಪಿದ ಮತಯಂತ್ರಗಳನ್ನು ಪೊಲೀಸ್ ಭದ್ರತೆಯಲ್ಲಿ ಇಲ್ಲಿಗೆ ತರಲಾಯಿತು. ಸಂಬಂಧಿಸಿದ ಅಧಿಕಾರಿಗಳು, ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಅವುಗಳನ್ನು ಸ್ಟ್ರಾಂಗ್‌ ರೂಂನಲ್ಲಿಟ್ಟು ಬೀಗ ಹಾಕಲಾಯಿತು. ಡಿ. 9ರಂದು ಬೆಳಿಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ. ಅಲ್ಲಿವರೆಗೆ ಭದ್ರತಾ ಕೊಠಡಿಗೆ 3 ಹಂತಗಳ ಭದ್ರತೆಯನ್ನು ಮಾಡಲಾಗಿದೆ.

ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ಎಸ್ಪಿ ಲಕ್ಷ್ಮಣ ನಿಂಬರಗಿ, ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

‘ಸ್ಟ್ರಾಂಗ್‌ ರೂಂಗೆ ಮೂರು ಹಂತದ ಭದ್ರತೆ ಮಾಡಲಾಗಿದೆ. ಸಿಐಎಸ್‌ಎಫ್‌ನ 106 ಮಂದಿ, ನಂತರದ ಹಂತದಲ್ಲಿ ತಲಾ 30 ಮಂದಿ ಒಳಗೊಂಡ 4 ಕೆಎಸ್‌ಆರ್‌ಪಿ ತುಕಡಿಗಳು ಹಾಗೂ ಮೂರನೇ ಹಂತದಲ್ಲಿ ಪ್ರತಿ ಪಾಳಿಯಲ್ಲಿ 70 ಸಿವಿಲ್‌ ಪೊಲೀಸರನ್ನು ನಿಯೋಜಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ’ ಎಂದು ಪೊಲೀಸ್ ಆಯುಕ್ತ ಲೋಕೇಶ್‌ಕುಮಾರ್‌ ತಿಳಿಸಿದರು.

ಲೆಕ್ಕಾಚಾರ ಶುರು: ಗೆಲ್ಲುವವರಾರು, ಸೋಲುವವರಾರು ಎನ್ನುವ ಚರ್ಚೆಉಪ ಚುನಾವಣೆ ಕಂಡಿರುವ ಕ್ಷೇತ್ರಗಳಷ್ಟೇ ಅಲ್ಲದೇ ಜಿಲ್ಲೆಯಾದ್ಯಂತ ನಡೆದದೆ. ಗೆದ್ದರೆ ಯಾವ ಕಾರಣಕ್ಕೆ, ಸೋತರೆ ಯಾವ ಕಾರಣಕ್ಕೆ ಎನ್ನುವ ಅವಲೋಕನಗಳು ಹಾಗೂ ವಿಶ್ಲೇಷಣೆಗಳನ್ನು ಮತದಾರರು, ಕಾರ್ಯಕರ್ತರು ಮಾಡುತ್ತಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ನಡೆದ ಘಟನೆಗಳ ಬಗ್ಗೆಯೂ ಚರ್ಚೆಯಾಗುತ್ತಿದೆ.

ಕಣದಲ್ಲಿದ್ದ 28 ಅಭ್ಯರ್ಥಿಗಳು ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಶುಕ್ರವಾರ ತಮ್ಮ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹಾಗೂ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಯಾವ ಮತಗಟ್ಟೆಗಳಲ್ಲಿ ತಮಗೆ ಪ್ಲಸ್ ಆಗಬಹುದು, ಎಲ್ಲಿ ಮೈನಸ್‌ ಆಗಬಹುದು ಎಂಬಿತ್ಯಾದಿ ‘ವರದಿ’ಗಳನ್ನು ಈಗಾಗಲೇ ಸಿದ್ಧಪಡಿಸಿಕೊಂಡಿರುವ ಅವರು ಫಲಿತಾಂಶದ ಕುರಿತು ಸಮಾಲೋಚನೆಯನ್ನು ಅಭ್ಯರ್ಥಿಗಳು ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.