
ಮೂಡಲಗಿ: 'ದೇಶದಲ್ಲಿ ಅನ್ನ ನೀಡುವ ರೈತನಿಗೆ ಎಲ್ಲಿಯವರೆಗೆ ಶೋಷಣೆ ನಡೆಯುತ್ತದೆ ಅಲ್ಲಿಯವರೆಗೆ ದೇಶವು ಪ್ರಗತಿಯಾಗುವುದಿಲ್ಲ, ಶಾಂತಿ, ನೆಮ್ಮದಿ ಸಹ ಇರುವುದಿಲ್ಲ' ಎಂದು ಹಾರೂಗೇರಿಯ ಇಂಚಗೇರಿ ಮಠದ ಸಂತ, ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಹೇಳಿದರು.
ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಮಠದಲ್ಲಿ ಅಮಾವಾಸ್ಯೆ ನಿಮಿತ್ತ ಗುರುವಾರ ಸಂಜೆ ಜರುಗಿದ ಶಿವಾನುಭವಗೋಷ್ಠಿಯಲ್ಲಿ ಅತಿಥಿಯಾಗಿ ಮಾತನಾಡಿದ ಅವರು ರೈತರಿಗೆ ಯಾವುದೇ ರಾಜಕೀಯ ಪಕ್ಷ, ಜಾತಿ, ಧರ್ಮ ಎನ್ನುವುದು ಇರಬಾರದು. ಕೇವಲ ರೈತ ಧರ್ಮದ ತಾತ್ವಿಕತೆಯಲ್ಲಿ ಗಟ್ಟಿಯಾಗಿ ನಿಂತರೆ ಮಾತ್ರ ರೈತರಿಗೆ ಗೌರವ ದೊರೆಯುತ್ತದೆ ಎಂದರು.
ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿ ‘ಕಬ್ಬಿನ ಬೆಲೆ ನಿಗದಿಗಾಗಿ ಗುರ್ಲಾಪುರದಲ್ಲಿ ನ್ಯಾಯ ಸಮ್ಮತವಾಗಿ ನಡೆಸಿದ 10 ದಿನಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಇದು ಲಕ್ಷಾಂತರ ರೈತರ ಸ್ವಾಭಿಮಾನದ ಹೋರಾಟಕ್ಕೆ ದೊರೆತ ವಿಜಯವಾಗಿದೆ ಎಂದರು.
ಬೆಳಗಾವಿಯಲ್ಲಿ ನಡೆಯುವ ಚಳಿಗಾಳದ ಅಧೀವೇಶನದ ಸಂದರ್ಭದಲ್ಲಿ ಡಿ.11ರಂದು ರೈತರ ಹಲವಾರು ಬೇಡಿಕೆಗಳಿಗಾಗಿ ಸುವರ್ಣ ಸೌಧ ಬಳಿಯಲ್ಲಿ ಇಡೀ ರಾಜ್ಯದ 10 ಲಕ್ಷ ರೈತ ಜನರೊಂದಿಗೆ ಬೃಹತ್ ಹೋರಾಟ ಮಾಡಲಾಗುತ್ತಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ದುರದುಂಡೀಶ್ವರ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಶಿಕ್ಷಕ ತವನಪ್ಪ ಬಿಲ್ 'ನಿಜ ರಾಷ್ಟ್ರ ನಿರ್ಮಾತೃ ರೈತ' ವಿಷಯ ಕುರಿತು ಉಪನ್ಯಾಸ ನೀಡಿದರು. ರೈತ ಮುಖಂಡರಾದ ಶಶಿಕಾಂತ ಗುರೂಜಿ ಹಾಗೂ ಚೂನಪ್ಪ ಪೂಜೇರಿ ಅವರನ್ನು ಶ್ರೀಮಠದಿಂದ ಹಾಗೂ ಅಂಗಡಿ ಸಹೋದರರು ಸೇರಿದಂತೆ ರೈತ ಸಂಘಟನೆಯವರು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿದರು. ರೈತ ಮುಖಂಡರಾದ ಶ್ರೀಶೈಲ ಅಂಗಡಿ, ಗೋಪಾಲ ಕುಕನೂರ ಇದ್ದರು.
ಗಾಯಕ ಓಂಕಾರ ಕರಕಂಬಿ ಸುಶ್ರಾವ್ಯವಾಗಿ ವಚನ ಗಾಯನ ಮಾಡಿದರು. ಪ್ರೊ. ವಿ.ಕೆ. ನಾಯಿಕ ನಿರೂಪಿಸಿದರು. ಫುಲಗಡ್ಡಿ ಮತ್ತು ಹಾರುಗೊಪ್ಪದ ಸದ್ಭಕ್ತರಿಂದ ಅನ್ನದಾಸೋಹ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.