ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲ್ಲೂಕಿನ ವಿವಿಧೆಡೆ ಹಾಗೂ ಕುಲವಳ್ಳಿ ಕಂದಾಯ ಗ್ರಾಮ ವ್ಯಾಪ್ತಿಯಲ್ಲಿ ರೈತರು ಅನೇಕ ವರ್ಷಗಳಿಂದ ಸರ್ಕಾರಿ ಜಮೀನು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಆ ಭೂಮಿಯ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಸುವರ್ಣ ವಿಧಾನಸೌಧ ಬಳಿ ಡಿ. 18ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಾಂತ ರೈತ ಸಂಘದ ಮುಖಂಡ ಎನ್.ಎಸ್. ನಾಯಕ ತಿಳಿಸಿದರು.
‘ಕುಲವಳ್ಳಿ ಗ್ರಾಮದಲ್ಲಿ ಈ ಹಿಂದೆ ಇನಾಮ್ ಭೂಮಿ ಇತ್ತು. ಆದರೆ, 1953ರಲ್ಲಿ ಇನಾಮ್ ರದ್ದತಿಯ ಕಾನೂನಿನ ಪ್ರಕಾರ ಇದು ರದ್ದಾಗಿದೆ’ ಎಂದು ಹೇಳಿದರು.
‘ಉಳುವವನೇ ಭೂಮಿಯ ಒಡೆಯ ಎಂಬ ಕಾನೂನಿನ ಅಡಿಯಲ್ಲಿ ಭೂಸುಧಾರಣೆ ಕಾನೂನು ಜಾರಿಗೆ ಬಂದರೂ ಕೆಲವು ತೊಂದರೆಗಳಿಂದಾಗಿ, ಭೂಮಿಯ ಮಂಜೂರಾತಿಯಿಂದ 2ಸಾವಿರಕ್ಕೂ ಹೆಚ್ಚು ಮಂದಿ ವಂಚಿತರಾಗಿದ್ದಾರೆ’ ಎಂದರು.
‘ಹೋರಾಟದ ಫಲವಾಗಿ ಕುಲವಳ್ಳಿಗೆ ಭೇಟಿ ನೀಡಿದ್ದ ಹಿಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು, ಸಾಗುವಳಿದಾರರು ಅರ್ಜಿ ಸಲ್ಲಿಸಲು (ನಮೂನೆ 57) ಸಹಕರಿಸಿದ್ದರು. ಆದರೆ, ಪಹಣಿ ಪತ್ರಿಕೆಯಲ್ಲಿ ಬೇನಾಮಿ ಹೆಸರುಗಳು ದಾಖಲಾಗಿವೆ. ಇತ್ತ ಸರ್ಕಾರ ಗಮನಹರಿಸಬೇಕು. ಹಿಂದಿನಿಂದಲೂ ಸಾಗುವಳಿ ಮಾಡಿಕೊಂಡು ಬಂದಿರುವವರಿಗೆ ನೆರವಾಗಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ನಾಗಪ್ಪ ಅಸಲನ್ನವರ, ಈರಪ್ಪ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.