ಹಿರೇಬಾಗೇವಾಡಿ: ಕಳಪೆ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ ಎಂದು ಆರೊಪಿಸಿ ಸ್ಥಳೀಯ ರೈತರು ಇಲ್ಲಿನ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಮಂಗಳವಾರ ಟ್ರ್ಯಾಕ್ಟರ್ ತಂದು ನಿಲ್ಲಿಸಿ ಸುಮಾರು ಮೂರು ಗಂಟೆಗಳ ಕಾಲ ಪ್ರತಿಭಟಸಿ ಕೂಡಲೇ ತಮಗಾದ ನಷ್ಟ ಭರಿಸಬೇಕೆಂದು ಆಗ್ರಹಿಸಿದರು.
ರೈತ ಸಂಪರ್ಕ ಕೇಂದ್ರದಿಂದ ವಿತರಿಸಲಾಗಿದ್ದ ‘ವರುಣ ಕಂಪನಿಯ ಕೆಡಿಎಸ್-726‘ ಸೊಯಾಬಿನ್ ಬಿತ್ತನೆ ಬೀಜಗಳು ರೈತರ ಜಮೀನುಗಳಲ್ಲಿ ಸರಿಯಾಗಿ ಬಿತ್ತನೆಯಾಗದೇ ಈ ಭಾಗದ ಸಾಕಷ್ಟು ರೈತರು ನಷ್ಟ ಅನುಭವಿಸುವಂತಾಗಿದೆ. ರಸಗೊಬ್ಬರ, ಕೂಲಿ, ಟ್ರ್ಯಾಕ್ಟರ್ ಬಾಡಿಗೆ ಎಲ್ಲವೂ ಸೇರಿ ಎಕರೆಗೆ 10ರಿಂದ 15 ಸಾವಿರ ರೂ ಖರ್ಚಾಗಿದ್ದು ಈ ಹಾನಿಯನ್ನು ಸರಿಪಡಿಸಬೇಕು. ದೇಶದ ಬೆನ್ನೆಲಬು ರೈತನ ಬೆನ್ನು ಮೂಳೆ ಮುರಿದಿದೆ ಎಂದರು. ಸದ್ಯ ಬಿತ್ತನೆ ಹಂಗಾಮು ಇದ್ದು ಕೂಡಲೇ ಬೇರೆ ಬಿತ್ತನೆ ಬೀಜಗಳನ್ನು ಒದಗಿಸಿ ಪರಿಹಾರ ಕೂಡ ನೀಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಕೃಷಿ ಅಧಿಕಾರಿ ಸಿ.ಎಸ್.ನಾಯಿಕ ಮಾತನಾಡಿ, ಧಾರವಾಡ ಕೃಷಿ ವಿದ್ಯಾಲಯದ ವಿಜ್ಞಾನಿಗಳು ಈಗಾಗಲೇ ರೈತರ ಜಮೀನುಗಳಿಗೆ ತೆರಳಿ ಬೀಜ ಮೊಳಕೆ ಪರೀಕ್ಷೆ ಮಾಡಿದ್ದಾರೆ. ಬುಧವಾರ ಹಿರಿಯ ಕೃಷಿ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ರೈತರಿಗೆ ಸ್ಪಷ್ಟನೆ ನಿಡಲಿದ್ದಾರೆ ಎಂದು ಹೇಳಿದರು.
ಸುರೇಶ ಗುರುವಣ್ಣವರ, ರಾಜಶೇಖರ ಸಾಲಿಮನಿ, ಅಡಿವೆಪ್ಪ ತೋಟಗಿ, ಸತೀಶ ಮಾಳಗಿ, ಆನಂದ ನಂದಿ, ದಾನಗೌಡ ಪಾಟೀಲ, ರಘು ಪಾಟೀಲ, ಮಲಗೌಡ ಪಾಟೀಲ, ಶಿವನಗೌಡ ದೊಡ್ಡಗೌಡರ, ಶಿವಾನಂದ ನಾವಲಗಟ್ಟಿ, ಈಶ್ವರ ಜಮಖಂಡಿ, ಉಮೇಶ ರೊಟ್ಟಿ ಮಹಾಂತೇಶ ಪಡಗಲ್, ಮಂಜು ರೊಟ್ಟಿ,ಮಹಾಂತೇಶ ಹಳಮನಿ, ಮಂಜುನಾಥ ಇಟಗಿ, ರಾಜನಗೌಡ ಪಾಟೀಲ, ಶೇಖರ ಹುಲಮನಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.