ಅಥಣಿ: ಇಲ್ಲಿನ ಎಪಿಎಂಸಿಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವರು ಸಂಕೇಶ್ವರ–ವಿಜಯಪುರ ರಾಜ್ಯ ಹೆದ್ದಾರಿ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.
ಮುಖಂಡ ಮಹಾದೇವ ಮಡಿವಾಳ ಮಾತನಾಡಿ, ‘ತಾಲ್ಲೂಕಿನಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಗೋವಿನಜೋಳಕ್ಕೆ ಸೂಕ್ತ ಬೆಲೆ ಇಲ್ಲದೆ ರೈತರು ಪರದಾಡುವಂತಾಗಿದೆ. ಕೆಲವು ದಲ್ಲಾಳಿಗಳು ಅತಿ ಕಡಿಮೆ ಬೆಲೆಗೆ ಕೊಂಡುಕೊಳ್ಳುವುದರಿಂದ ಕೃಷಿಕರಿಗೆ ನಷ್ಟ ಆಗುತ್ತಿದೆ. ಸರ್ಕಾರವು ಖರೀದಿ ಪ್ರಕ್ರಿಯೆ ಪ್ರಾರಂಭ ಮಾಡಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಮಧ್ಯವರ್ತಿಗಳು ತಮ್ಮಿಷ್ಟದಂತೆ ಬೆಲೆ ಕೊಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಖರೀದಿ ಕೇಂದ್ರಗಳನ್ನು ತ್ವರಿತವಾಗಿ ಆರಂಭಿಸಿ, ಅನುಕೂಲ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.
ತಹಶೀಲ್ದಾರ್ ದುಂಡಪ್ಪ ಕೋಮಾರ ಮನವಿ ಸ್ವೀಕರಿಸಿ ಕ್ರಮದ ಭರವಸೆ ನೀಡಿದರು.
ನಿಂಗಪ್ಪ ಸವದಿ, ಪಿಂಟು ಕಬಾಡಗಿ, ಮುರುಗೆಪ್ಪ ಹೊನವಾಡ, ಲಕ್ಕಪ್ಪ ಪೂಜಾರಿ, ಅಡಿವೆಪ್ಪ ಆಜೂರ, ರಮೇಶ ಮಡಿವಾಳ, ಶಾಂತಾ ಕೋಳಿ, ಬಿ. ಮುಲ್ಲಾ, ಪಾರ್ವತಿ ಕೋಳಿ, ದುಂಡಪ್ಪ ತನಂಗಿ, ಮಹಾದೇವ ಮಗದುಮ್, ಮಹಾದೇವ ಬರ್ಲಿ, ಪ್ರಕಾಶ ಕುಲಕರ್ಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.