ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)
ಸವದತ್ತಿ: ‘ಕಳೆದ ಬಾರಿಯ ಮುಂಗಾರು ಹಂಗಾಮಿನ ಬೆಳೆ ವಿಮೆ ಇದುವರೆಗೂ ರೈತರಿಗೆ ಪಾವತಿಯಾಗಿಲ್ಲ. ವಿಮೆ ಕಂತಿನ ಹಣ ಕಟ್ಟುವುದನ್ನು ರೈತರು ಬಿಟ್ಟಲ್ಲ. ಸಮಯಕ್ಕೆ ಸರಿಯಾಗಿ ವಿಮೆಪಾವತಿಸದೇ ವಿಳಂಬ ಧೋರಣೆಯಿಂದಾಗಿ ಕಳೆದೊಂದು ವರ್ಷದ ಅವಧಿಯಲ್ಲಿ 17 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂಬ ದೂರು ರೈತರಿಂದ ಕೇಳಿಬಂದಿದೆ.
ತಾಲ್ಲೂಕಿನಾದ್ಯಂತ ಸುಮಾರು 7 ಸಾವಿರ ರೈತರು ಬೆಳೆ ವಿಮೆ ಪಾವತಿಸಿದ್ದಾರೆ. ರಾಜ್ಯ ಸರ್ಕಾರ ರೈತರಿಗೆ ₹2 ಸಾವಿರ ಪಾವತಿಸುತ್ತಿದೆ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಆರಂಭವಾಗಲಿದ್ದು ಮೇ ತಿಂಗಳಿನಲ್ಲಿ ಆರಂಭವಾಗಲಿದ್ದು ಮೇ 2 ನೇ ವಾರದ ನಂತರ ಮಳೆ ಅವಲಂಬನೆ ರೈತರು ಬಿತ್ತನೆ ಚುರುಕುಗೊಳಿಸಲಿದ್ದಾರೆ. ಇದರಲ್ಲಿ ವಾಡಿಕೆಯನುಸಾರ ಹೆಸೆರು, ಗೋವಿನಜೋಳ, ಹತ್ತಿ ಬೆಳೆಗಳನ್ನು ಬೆಳೆಯುತ್ತಾರೆ. ಸದ್ಯಕ್ಕೆ ಕೃಷಿ ಚಟುವಟಿಕೆ ಕಡಿಮೆಯಿದ್ದು ತೋಟಗಾರಿಕೆಯ ತರಕಾರಿ ಬೆಳೆ ಮಾತ್ರ ಚಾಲ್ತಿಯಲ್ಲಿವೆ. ನೀರಿನ ಲಭ್ಯತೆ ಮೇರೆಗೆ ಶೇಂಗಾ, ಕಬ್ಬು ಬೆಳೆಗಳು ಇಲ್ಲಿ ಕಾಣಸಿಗುತ್ತವೆ.
‘ಬೆಳೆ ವಿಮೆ ಸರಿಯಾಗಿ ಬಾರದ್ದಕ್ಕೆ ವಿಮೆ ಪಾವತಿಸುವುದನ್ನೇ ಬಿಟ್ಟಿದ್ದೇವೆ. ಸವದತ್ತಿ ನಗರದ ಸಾಕಷ್ಟು ರೈತರಿಗೆ ವಿಮೆ ಪಾವತಿಯಾಗುತ್ತಿಲ್ಲ. ರೈತರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ವಿಮೆ ತುಂಬಿದ ಬಳಿಕ ನೀರಾವರಿ ಜಮೀನು ಹಾಗೂ ಇತರೆ ಕಾರಣ ಹೇಳಿ ಪಾವತಿಸುತ್ತಿಲ್ಲ. ಬೆಳೆ ಬಾರದಿದ್ದರೂ ಸಹಿತ ಹಣ ಪಾವತಿಯಾಗದ ಕಾರಣ ರೈತ ಆತ್ಮಹತ್ಯೆ ನಡೆದಿವೆ. ಪಕ್ಕದ ತಾಲ್ಲೂಕುಗಳಾದ ನವಲಗುಂದ, ನರಗುಂದ ಪಾವತಿಯಾಗುವ ಬೆಳೆ ವಿಮೆ ನಮ್ಮ ಕ್ಷೇತ್ರದಲ್ಲಿ ಆಗುತ್ತಿಲ್ಲ. ಒಟ್ಟಾರೆ ಸವದತ್ತಿ ತಾಲೂಕು ಬೆಳೆ ವಿಮೆಯಿಂದ ವಂಚಿತವಾಗಿದೆ’ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಬಿಜ್ಜೂರ ದೂರಿದರು.
‘ಮಲಪ್ರಭಾ ಯೋಜನೆಯಲ್ಲಿ ನೀರಾವರಿ ಜಮೀನೆಂದು ಪರಿಗಣಿಸಲಾಗುತ್ತಿದೆ. ನೀರಾವರಿ ಆಗದೇ ಇರುವ ಜಮೀನುಗಳೂ ಸಹಿತ ನೀರಾವರಿಗೊಳಪಟ್ಟಿವೆ ಎಂಬ ಪಹಣಿಯಲ್ಲಿ ನಮೂದಾದ ಕಾರಣ ಬೆಳೆ ವಿಮೆ ಸಿಗುತ್ತಿಲ್ಲ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.