ADVERTISEMENT

ಬೆಂಕಿ ತಗುಲಿ 20 ಕಣಕಿ ಬಣವಿಗಳು ಭಸ್ಮ: ₹ 1 ಕೋಟಿ ಹಾನಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 5:35 IST
Last Updated 28 ಮಾರ್ಚ್ 2023, 5:35 IST
ಬೈಲಹೊಂಗಲ ಸಮೀಪದ ಇಂಚಲ ಗ್ರಾಮದಲ್ಲಿ ಸೋಮವಾರ ಬೆಂಕಿ ತಗುಲಿ ಕಣಕಿ ಬಣವಿಗಳು ಭಸ್ಮವಾದವು
ಬೈಲಹೊಂಗಲ ಸಮೀಪದ ಇಂಚಲ ಗ್ರಾಮದಲ್ಲಿ ಸೋಮವಾರ ಬೆಂಕಿ ತಗುಲಿ ಕಣಕಿ ಬಣವಿಗಳು ಭಸ್ಮವಾದವು   

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಸಮೀಪದ ಇಂಚಲ ಗ್ರಾಮದಲ್ಲಿ ಸೋಮವಾರ ಬೆಂಕಿ ತಗುಲಿ 20 ಕಣಕಿ ಬಣವಿಗಳು ಭಸ್ಮವಾಗಿವೆ. ಒಂದು ಟ್ರ್ಯಾಕ್ಟರ್‌ ಹಾಗೂ ಕೃಷಿ ಯಂತ್ರೋಪಕರಣಗಳು ಸುಟ್ಟಿವೆ. ಇದರಿಂದ ₹ 1 ಕೋಟಿಗೂ ಹೆಚ್ಚು ಹಾನಿಯಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಬಿಳಿಜೋಳ, ಗೋವಿನ ಜೋಳ ಮತ್ತಿತರ ಬೆಳೆಗಳ ರಾಶಿ ಮುಗಿಸಿದ ರೈತರು ಗ್ರಾಮದ ಹೊರವಲಯದಲ್ಲಿ ಒಂದೇ ಕಡೆ ಬಣವಿ ಒಟ್ಟಿದ್ದರು. ಸೋಮವಾರ ಮಧ್ಯಾಹ್ನ ಒಂದು ಬಣವಿಗೆ ಬೆಂಕಿ ಹೊತ್ತಿಕೊಂಡಿತು. ಜನ ಅದನ್ನು ತಡವಾಗಿ ಗಮನಿಸಿದ್ದರಿಂದ ಉಳಿದ ಬಣವಿಗಳಿಗೂ ವ್ಯಾಪಿಸಿತು. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಗೊತ್ತಾಗಿಲ್ಲ.

ಬೆಳಗಾವಿ, ಗೋಕಾಕ, ಸವದತ್ತಿ, ಬೈಲಹೊಂಗಲ ಅಗ್ನಿ ಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಲು ಯತ್ನಿಸಿದರು. ಅಷ್ಟರೊಳಗೆ ಬಣವಿಗಳು ಪೂರ್ಣ ಸುಟ್ಟುಹೋದವು. ಪಕ್ಕದ ಮನೆಗಳಿಗೆ ಬೆಂಕಿ ತಾಗದಂತೆ ಸಿಬ್ಬಂದಿ ಎಚ್ಚರಿಕೆ ವಹಿಸಿದರು.

ADVERTISEMENT

ಬಣವಿಗಳ ಬಳಿಯೇ ನಾಲ್ಕು ಎತ್ತುಗಳನ್ನು ಕಟ್ಟಲಾಗಿತ್ತು. ಬೆಂಕಿ ಬಿದ್ದಿದ್ದನ್ನು ಗಮನಿಸಿದ ಬಿಸಿಎಂ ಹಾಸ್ಟೆಲ್‌ ವಿದ್ಯಾರ್ಥಿಗಳು, ಸ್ಥಳಕ್ಕೆ ಧಾವಿಸಿ ಎತ್ತುಗಳ ಹಗ್ಗ ಬಿಚ್ಚಿ ದೂರ ಓಡಿಸಿದರು. ವಿದ್ಯಾರ್ಥಿಗಳ ಪ್ರಜ್ಞೆಯಿಂದ ಎತ್ತುಗಳ ಪ್ರಾಣ ಉಳಿಯಿತು. ಆರು ತಾಸು ಕಾರ್ಯಾಚರಣೆಯ ಬಳಿಕ ಬೆಂಕಿ ಹತೋಟಿಗೆ ಬಂದಿತು ಎಂದು ಅಗ್ನಿಶಾಮಕ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.