ಬೆಳಗಾವಿ: ತೋಟಗಾರಿಕೆ ಇಲಾಖೆಯಿಂದ ಇಲ್ಲಿನ ಅಶೋಕ ನಗರದಲ್ಲಿ ನಿರ್ಮಿಸಿರುವ ಪುಷ್ಪ ಹರಾಜು ಕೇಂದ್ರಗಳ ಮಳಿಗೆಗಳ ಉದ್ಘಾಟನೆಯನ್ನು ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಭಾನುವಾರ ನೆರವೇರಿಸಿದರು.
ನಂತರ ಮಾತನಾಡಿ, ‘ಈ ಮಳಿಗೆಗಳನ್ನು ರೈತರು ಹಾಗೂ ಹಂಚಿಕೆದಾರರಿಗೆ ಹಂಚಿಕೆ ಮಾಡಲಾಗಿದೆ. ಇದರಿಂದ ಅವರಿಗೆ ಉಪಯೋಗವಾಗಲಿದೆ’ ಎಂದು ತಿಳಿಸಿದರು.
ಇಲಾಖೆಯ ಉಪ ನಿರ್ದೇಶಕ ರವೀಂದ್ರ ಹಕಾಟಿ, ‘ಈ ಕೇಂದ್ರದಲ್ಲಿ 16 ಮಳಿಗೆಗಳಿದ್ದು ಅವುಗಳನ್ನು ಹಂಚಿಕೆ ಮಾಡಲಾಗಿದೆ. ಇನ್ನೂ ಬೇಡಿಕೆ ಇರುವುದರಿಂದ ಜಿಲ್ಲಾಧಿಕಾರಿ ಅನುಮತಿ ಪಡೆದು ತಾತ್ಕಾಲಿಕವಾಗಿ 10 ಮಳಿಗೆಗಳನ್ನು ತಾತ್ಕಾಲಿಕವಾಗಿ ಒದಗಿಸಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಅತ್ಯುತ್ತಮ ಕೇಂದ್ರವನ್ನಾಗಿ ರೂಪಿಸಲು ಯೋಜಿಸಲಾಗಿದೆ’ ಎಂದು ತಿಳಿಸಿದರು.
‘ಸುಸಜ್ಜಿತ ಪುಷ್ಪ ಹರಾಜು ಮಾರುಕಟ್ಟೆ ಸಿದ್ಧಗೊಂಡಿರುವುದರಿಂದ, ರೈತರು ಈ ಕೇಂದ್ರದಲ್ಲೇ ವ್ಯಾಪಾರ–ವಹಿವಾಟು ನಡೆಸಬೇಕು’ ಎಂದು ಕೋರಿದರು.
‘ಕಾಕತಿಯ ರೈತ ಉತ್ಪಾದಕ ಸಂಸ್ಥೆ ಮತ್ತು ಜಿಲ್ಲಾ ತೋಟಗಾರಿಕೆ ಸಂಘದ ಮೂಲಕ ಹೂವು ಬೆಳೆಗಾರರು ಮತ್ತು ಉದ್ಯಾನ ಅಭಿವೃದ್ಧಿಪಡಿಸುವ ಗ್ರಾಹಕರಿಗೆ ಬೇಕಾಗುವ ಸಸ್ಯ ಸಂರಕ್ಷಣಾ ಔಷಧಿಗಳು ಮತ್ತಿತರ ಪರಿಕರಗಳನ್ನು ರಿಯಾಯಿತಿ ದರದಲ್ಲಿ ನೀಡಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕಿರಣಕುಮಾರ ಉಪಾಳೆ, ಜಿಲ್ಲಾ ತೋಟಗಾರಿಕೆ ಸಂಘದ ಕಾರ್ಯದರ್ಶಿ ವಿ.ಎಚ್. ಲೆಂಗಡೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.