ADVERTISEMENT

ಲಾಕ್ ಡೌನ್: ಎರಡು ತಿಂಗಳ ಪಡಿತರ ಒಮ್ಮೆಲೇ ವಿತರಣೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 14:06 IST
Last Updated 28 ಮಾರ್ಚ್ 2020, 14:06 IST

ಬೆಳಗಾವಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನ್ವಯ ಹಾಗೂ ಈಗಾಗಲೇ ಸರ್ಕಾರವು ಘೋಷಿಸಿರುವಂತೆ ಏಪ್ರಿಲ್‌ ಮತ್ತು ಮೇ ತಿಂಗಳ ಪಡಿತರವನ್ನು ಒಟ್ಟಿಗೆ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

‘ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಗೆ ಎರಡು ತಿಂಗಳ ಸೇರಿ 70 ಕೆ.ಜಿ ಅಕ್ಕಿ, ಆದ್ಯತಾ (ಬಿಪಿಎಲ್) ಪಡಿತರ ಚೀಟಿಗೆ ಪ್ರತಿ ಘಟಕಕ್ಕೆ 10 ಕೆಜಿ ಅಕ್ಕಿ ನೀಡಲಾಗುವುದು. 4 ಕೆಜಿ ಗೋಧಿ ನೀಡಲಾಗುವುದು’ ಎಂದು ಹೇಳಿದ್ದಾರೆ.

‘ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸಲು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಇರುವ ನ್ಯಾಯಬೆಲೆ ಅಂಗಡಿಕಾರರು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಹಾಗೂ ಮಧ್ಯಾಹ್ನ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಾಮಾಜಿಕ ಅಂತರ ಇಟ್ಟುಕೊಂಡು ಪಡಿತರ ವಿತರಿಸಲು ಕ್ರಮವಹಿಸಬೇಕು. ಪ್ರತಿ ಮಂಗಳವಾರ ರಜೆಯ ದಿನ ಮತ್ತು ರಾಷ್ಟ್ರೀಯ ರಜೆಯ ದಿನಗಳನ್ನು ಹೊರತುಪಡಿಸಿ ಪಡಿತರ ವಿತರಣೆಯನ್ನು ತಿಂಗಳ ಪೂರ್ತಿ ಮಾಡಬೇಕು’ ಎಂದು ಸೂಚಿಸಿದರು.

ADVERTISEMENT

‘ಪಡಿತರ ಚೀಟಿದಾರರಿಗೆ ಯಾವುದೇ ರೀತಿಯಾಗಿ ನ್ಯಾಯಬೆಲೆ ಅಂಗಡಿಕಾರರಿಂದ ತೊಂದರೆಯಾದಲ್ಲಿ 1967 ಟೋಲ್‍ಫ್ರಿ ಸಂಖ್ಯೆಗೆ ಕರೆ ಮಾಡಿ ದೂರನ್ನು ದಾಖಲಿಸತಕ್ಕದ್ದು ಮತ್ತು ಜಿಲ್ಲೆಯ ನ್ಯಾಯಬೆಲೆ ಅಂಗಡಿಕಾರರು ಸರ್ಕಾರ ನೀಡುತ್ತಿರುವ ಪಡಿತರ ವಸ್ತುಗಳನ್ನು ಹೊರತುಪಡಸಿ ಬೇರೆ ವಸ್ತುಗಳನ್ನು ವಿತರಣೆ ಮಾಡತಕ್ಕದ್ದಲ್ಲ’ ಎಂದರು.

‘ಯಾವುದೇ ಕಾರಣಕ್ಕೂ ಪ್ರತಿ ಪಡಿತರ ಚೀಟಿದಾರರಿಂದ ನೆಪ ಹೇಳಿ ಇಂಟರ್ನೆಟ್ ಮತ್ತಿತರ ವೆಚ್ಚವನ್ನು ವಸೂಲಿ ಮಾಡತಕ್ಕದ್ದಲ್ಲ. ಒಂದು ವೇಳೆ ಈ ರೀತಿ ದೂರುಗಳು ಬಂದಲ್ಲಿ ಆಯಾ ತಾಲ್ಲೂಕಿನ ಕಾರ್ಯನಿರ್ವಾಹಕ ಸಿಬ್ಬಂದಿಗಳನ್ನೆ ನೇರ ಹೊಣೆ ಮಾಡಿ, ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.