ADVERTISEMENT

ಚಿಂಚಲಿ: ಫುಟ್‌ಬಾಲ್‌ ಟೂರ್ನಿ ಸಮಾರೋಪ ನಾಳೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 16:33 IST
Last Updated 10 ಜನವರಿ 2021, 16:33 IST
ಚಿಂಚಲಿಯಲ್ಲಿ ನಡೆದ ಫುಟ್‌ಬಾಲ್ ಪಂದ್ಯದ ನೋಟ
ಚಿಂಚಲಿಯಲ್ಲಿ ನಡೆದ ಫುಟ್‌ಬಾಲ್ ಪಂದ್ಯದ ನೋಟ   

ಹಂದಿಗುಂದ: ಮಹಾಕಾಳಿ ಶಿಕ್ಷಣ ಸಂಸ್ಥೆ ಹಾಗೂ ಮಹಾಕಾಳಿ ಫುಟಬಾಲ್ ಅಕಾಡೆಮಿ ಆಶ್ರಯದಲ್ಲಿ ರಾಯಬಾಗ ತಾಲ್ಲೂಕಿನ ಚಿಂಚಲಿಯ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಪುರುಷರ ರಾಷ್ಟ್ರಮಟ್ಟದ ಫುಟ್‌ಬಾಲ್ ಟೂರ್ನಿಯ ಸಮಾರೋಪ ಸಮಾರಂಭ ಜ.11ರಂದು ಸಂಜೆ 5ಕ್ಕೆ ನಡೆಯಲಿದೆ.

ಕೆಎಂಎಫ್‌ ಅಧ್ಯಕ್ಷರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸುವರು. ವಿಧಾನಪರಿಷತ್ ಸದಸ್ಯ ವಿವೇಕರಾವ ಪಾಟೀಲ ಅಧ್ಯಕ್ಷತೆ ವಹಿಸುವರು. ಮಹಾದೇವ ಪಡೋಲಕರ, ಡಾ.ಸಿ.ಬಿ. ಕುಲಿಗೋಡ, ಮಹಾದೇವ ಗದಾಡಿ, ಶಿವರಾಜ ದರಿಗೋಣ, ಉಬೇದುಲ್ಲಾಖಾನ್, ಎಸ್. ಜಯಾನಂದ, ಸಾತಗೌಡ ಪಾಟೀಲ, ಅಣ್ಣಾಸಾಬ ದೇಸಾಯಿ, ಭೂಪಾಲ ಪುನೇಕರ, ಕುಮಾರ ಹಾರೂಗೇರಿ, ಜಗದೀಶ ಕಿತ್ತೂರೆ ಅತಿಥಿಗಳಾಗಿ ಪಾಲ್ಗೊಳ್ಳುವರು.

ವಿಧಾನಪರಿಷತ್ ಸದಸ್ಯ ಹಾಗೂ ಬೆಮುಲ್ ಅಧ್ಯಕ್ಷ ವಿವೇಕರಾವ ಪಾಟೀಲ ನೇತೃತ್ವದಲ್ಲಿ ಟೂರ್ನಿಯು ಶನಿವಾರದಿಂದ ಯಶಸ್ವಿಯಾಗಿ ನಡೆದಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ 400 ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಊಟ ಮತ್ತು ವಸತಿ ಸೌಕರ್ಯವನ್ನು ಅಚ್ಚುಕಟ್ಟಾಗಿ ಕಲ್ಪಿಸಲಾಗಿತ್ತು ಎಂದು ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದರು. ತಿಂಗಳಿನಿಂದ ಮೈದಾನ ನಿರ್ಮಾಣ ಮಾಡಲಾಗಿತ್ತು. ಟೂರ್ನಿಗೆ ₹ 20 ಲಕ್ಷದಿಂದ ₹ 30 ಲಕ್ಷ ವೆಚ್ಚವಾಗಿದೆ ಎಂದು ಸಂಘಟಕರು ತಿಳಿಸಿದರು. ಪಂದ್ಯಗಳನ್ನು ವೀಕ್ಷಿಸಲು ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿನ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬುವಲ್ಲಿ ಟೂರ್ನಿ ಯಶಸ್ವಿಯಾಯಿತು.

ADVERTISEMENT

‘ವಿವೇಕರಾವ ಪಾಟೀಲ ನೇತೃತ್ವದಲ್ಲಿ ರಾಷ್ಟ್ರಮಟ್ಟದ ಫುಟ್‌ಬಾಲ್ ಟೂರ್ನಿ ಯಶಸ್ವಿಯಾಗಿ ಆಯೋಜಿಸಿದ್ದು ಖುಷಿ ತಂದಿದೆ. ಇಲ್ಲಿ ಜಿಲ್ಲಾ ಮಟ್ಟದ ಕ್ರೀಡೆಗಳನ್ನು ಮಾತ್ರ ನೋಡಿದ್ದೆವು. ಹಳ್ಳಿಗಳಲ್ಲಿ ರಾಷ್ಟ್ರಮಟ್ಟದ ಕ್ರೀಡೆಗಳನ್ನು ನೋಡುವ ಭಾಗ್ಯ ದೊರೆತಿದ್ದು ಹೆಮ್ಮೆಯ ಸಂಗತಿ’ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಜಾಕೀರಹುಸೇನ ಮೌಲಾ ತರಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.