ADVERTISEMENT

ಬಿಜೆಪಿ ಜಿಲ್ಲಾ ಘಟಕದಿಂದ 47ನೇ ವರ್ಷದ ಕರಾಳ ದಿನಾಚರಣೆ

"ತುರ್ತು ಪರಿಸ್ಥಿತಿ ಹೇರಿದ್ದು ಸ್ವಾರ್ಥಕ್ಕೆ ಕನ್ನಡಿ"

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 9:01 IST
Last Updated 25 ಜೂನ್ 2022, 9:01 IST
ಬೆಳಗಾವಿಯಲ್ಲಿ ಶನಿವಾರ ಆಯೋಜಿಸಿದ್ದ 47ನೇ ವರ್ಷದ ಕರಾಳ ದಿನಾಚರಣೆಯಲ್ಲಿ ಎಂ.ಬಿ. ಝಿರಲಿ ಮಾತನಾಡಿದರು
ಬೆಳಗಾವಿಯಲ್ಲಿ ಶನಿವಾರ ಆಯೋಜಿಸಿದ್ದ 47ನೇ ವರ್ಷದ ಕರಾಳ ದಿನಾಚರಣೆಯಲ್ಲಿ ಎಂ.ಬಿ. ಝಿರಲಿ ಮಾತನಾಡಿದರು   

ಬೆಳಗಾವಿ: "ದೇಶದ ಸುರಕ್ಷತೆಗೆ ಧಕ್ಕೆ ಬಂದಾಗ ಹೇರುವಂಥ ತುರ್ತು ಪರಿಸ್ಥಿತಿಯ ಅಸ್ತ್ರವನ್ನು ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ಹೇರಿತ್ತು. ಕಾಂಗ್ರೆಸ್ಸಿಗರ ಮನಸ್ಥಿತಿಗೆ ಇದೇ ಸಾಕ್ಷಿ" ಎಂದು ಬೆಳಗಾವಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.

ನಗರದಲ್ಲಿ ಶನಿವಾರ ಪಕ್ಷದಿಂದ ಏರ್ಪಡಿಸಿದ್ದ 47ನೇ ವರ್ಷದ ಕರಾಳ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

"ನೈಸರ್ಗಿಕ ವಿಕೋಪ, ಯುದ್ಧಕಾಲ, ಅರ್ಥಿಕ ದಿವಾಳಿಯಿಂದ ಸಾರ್ವಜನಿಕ ಅಶಾಂತಿಯ ಪರಿಸ್ಥಿತಿ ಉಂಟಾದಾಗ ತುರ್ತುಪರಿಸ್ಥಿತಿ ಘೋಷಣೆ ಮಾಡುವುದು ಸಹಜ. ಆದರೆ, ಕಾಂಗ್ರೆಸ್ ತನ್ನ ಅಧಿಕಾರ ಕಳೆದುಕೊಳ್ಳವ ಭಯದಿಂದ ಇಂಥ ಕರಾಳ ಹೆಜ್ಜೆ ಇಟ್ಟಿದೆ" ಎಂದರು.

ADVERTISEMENT

'ತುರ್ತು ಪರಿಸ್ಥಿತಿಯುನ್ನು 1975ರ ಜೂನ್ 25ರಿಂದ 1977ರ ಮಾರ್ಚ್ 21ರವರೆಗೆ ಆ ಕರಾಳ ಕಾನೂನು ಜಾರಿಯಲ್ಲಿತ್ತು" ಎಂದರು.

ಪಕ್ಷದ ರಾಜ್ಯ ವಕ್ತಾರ ಎಂ.ಬಿ. ಝೀರಲಿ ಮಾತನಾಡಿ, "ಕಾನೂನು ಬಾಹಿರವಾಗಿ ಇಂದಿರಾ ಗಾಂಧಿ ಅವರ ಮಾತು ಕೇಳಿ ಆಗಿನ ರಾಷ್ಟ್ರಪತಿ ಫಕ್ರುದೀನ್ ಅಲಿ ಅಹ್ಮದ್ ಅವರು ತುರ್ತು ಪರಿಸ್ಥಿತಿ ಜಾರಿಗೆ ತಂದುರು. 21 ತಿಂಗಳ ಕಾಲ ಮುಂದುವರೆಸಿದರು. ಪ್ರಧಾನಮಂತ್ರಿ ಆಗಿದ್ದ ಇಂದಿರಾ ಅವರ ಸರ್ವಾಧಿಕಾರಿ ಆಡಳಿತದ ಕುರುಹು ಈ ಘಟನೆ" ಎಂದರು.

ಅಭಿಯಾನದ ರಾಜ್ಯ ಸಂಚಾಲಕ ಅರ್.ಎಸ್. ಮುತಾಲಿಕ ಮಾತನಾಡಿ, "ರಾಯಭರೇಲಿಯಲ್ಲಿ ಗೆದ್ದು ಬೀಗಿದ್ದ ಇಂದಿರಾ ಗಾಂಧಿಯವರ ಗೆಲುವನ್ನು ಅಲಹಾಬಾದ್ ಹೈಕೋರ್ಟ್ ಅಸಿಂಧುಗೊಳಿಸಿ ಆದೇಶ ಹೊರಡಿಸಿತ್ತು. ಅದನ್ನು ಸಹಿಸಿಕೊಳ್ಳದೆ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದರು. ಆಗ ಅಲಹಾಬಾದ್ ಹೈಕೋರ್ಟಿನ ತಿರ್ಪನ್ನೇ ಸುಪ್ರೀಂಕೋರ್ಟ್ ಎತ್ತಿ ಹಿಡಿದು, ಇಂದಿರಾ ಗಾಂಧಿಯವರಿಗೆ ಆರು ವರ್ಷ ಚುನಾವಣೆಯಲ್ಲಿ ಭಾಗವಹಿಸದಂತೆ ನಿಷೇಧ ಹೆರಿತು. ಆಗ ತಮ್ಮ ಸ್ವಾರ್ಥಸಾಧನೆಗಾಗಿ
ತುರ್ತುಪರಿಸ್ಥಿತಿ ಜಾರಿತಂದ ಕುಖ್ಯಾತಿಗೆ ಹೆಸರಾದರು. ಆ ಸಮಯದಲ್ಲಿ ಚುನಾವಣೆಗಳಿಗೆ ಬಹಿಷ್ಕಾರ ಹಾಕಿ, ನಾಗರಿಕ ಹಕ್ಕುಗಳನ್ನು ನಿಷೇಧಿಸಲಾಯಿತು. ಪತ್ರಿಕಾ ಸ್ವಾತಂತ್ರ್ಯ ಕಸಿದುಕೊಂಡು ದೇಶದ ಕಾನೂನುಗಳನ್ನು ಅಮಾನತ್ತಿನಲ್ಲಿಟ್ಟರು. ಪ್ರತಿರೋಧ ಒಡ್ಡಿದ ರಾಷ್ಟ್ರಪ್ರೇಮಿಗಳು ಜೈಲು ಶಿಕ್ಷೆ ಅನುಭವಿಸಬೇಕಾಯಿತು" ಎಂದೂ ವಿವರಿಸಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುಭಾಷ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಕೋಷಾಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ, ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ವೀರಭದ್ರ ಪೂಜೆರ,ಸಂತೋಷ ದೇಶನೂರ ಯಲ್ಲೆಶ್ ಕೊಲಕಾರ, ಮಾರುತಿ ಕೊಪ್ಪದ, ಡಾ.ಸೋನಾಲಿ ಸೋನೊಭರ್ತ, ರಂಜನಾ ಕೊಲಕಾರ, ಆನಂದ ಮೂಡಲಗಿ, ಉಮೇಶ ಪೂರಿ ಹಾಗೂ ಜಿಲ್ಲಾ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.