ADVERTISEMENT

ನವಲಿಹಾಳ: ಗಾಂಧಿ ಕುರುಹುಗಳು ವಿಲವಿಲ

90 ವರ್ಷಗಳ ಹಿಂದೆ ಮಹಾತ್ಮ ಕಾಲಿಟ್ಟ ಊರಿನಲ್ಲಿವೆ ಮನೆ, ಆಸ್ಪತ್ರೆ, ಬಾವಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 4:58 IST
Last Updated 1 ಅಕ್ಟೋಬರ್ 2025, 4:58 IST
ಚಿಕ್ಕೋಡಿ ತಾಲ್ಲೂಕಿನ ನವಲಿಹಾಳ ಗ್ರಾಮದಲ್ಲಿ 1934ರಲ್ಲಿ ಮಹಾತ್ಮ ಗಾಂಧೀಜಿ ವಾಸ್ತವ್ಯ ಇದ್ದ ಮನೆ
ಪ್ರಜಾವಾಣಿ ಚಿತ್ರ
ಚಿಕ್ಕೋಡಿ ತಾಲ್ಲೂಕಿನ ನವಲಿಹಾಳ ಗ್ರಾಮದಲ್ಲಿ 1934ರಲ್ಲಿ ಮಹಾತ್ಮ ಗಾಂಧೀಜಿ ವಾಸ್ತವ್ಯ ಇದ್ದ ಮನೆ ಪ್ರಜಾವಾಣಿ ಚಿತ್ರ   

ಚಿಕ್ಕೋಡಿ: ತಾಲ್ಲೂಕಿನ ನವಲಿಹಾಳದಲ್ಲಿ ಗಾಂಧೀಜಿ ವಾಸ್ತವ್ಯ ಹೂಡಿದ ಮನೆ, ಉಚಿತ ಆಸ್ಪತ್ರೆ ತೆರೆದ ಮನೆ ಹಾಗೂ ವಂತಿಗೆ ಸಂಗ್ರಹಿಸಿ ನಿರ್ಮಿಸಿದ ಬಾವಿ ಮುಂತಾದವುಗಳು ಅವಸಾನದ ಅಂಚಿನಲ್ಲಿವೆ. ಇದರ ಮಧ್ಯೆ ಮತ್ತೊಂದು ಗಾಂಧಿ ಜಯಂತಿ ಬಂದಿದ್ದು, ಈ ಸಂದರ್ಭದಲ್ಲಿ ಮಾತ್ರ ಈ ಐತಿಹಾಸಿಕ ಕುರುಹುಗಳ ನೆನಪಾಗುತ್ತದೆ.

9 ದಶಕಗಳ ಹಿಂದೆ ಸ್ವಾತಂತ್ರ್ಯ ಚಳವಳಿ ಕಟ್ಟಲು ಕರ್ನಾಟಕದಲ್ಲಿ ಮಹಾತ್ಮ ಗಾಂಧೀಜಿ ಪ್ರವಾಸ ಕೈಗೊಂಡಿದ್ದರು. 1934ರ ಮಾರ್ಚ್‌ 7 ಮತ್ತು 8ರಂದು ನವಲಿಹಾಳ ಗ್ರಾಮಕ್ಕೆ ಆಗಮಿಸಿದ್ದರು. ಆ ಹೆಜ್ಜೆ ಗುರುತಗಳು ಸರ್ಕಾರದ ನಿರ್ಲಕ್ಷ್ಯದಿಂದ ಮಾಸುತ್ತಿವೆ.

ಗ್ರಾಮದ ಹೊರವಲಯದ ಗುಜ್ಜರ ಮಾಳದಲ್ಲಿರುವ ಅಂದಿನ ಖ್ಯಾತ ವ್ಯಾಪಾರಿ ಅಕ್ಷಯಚಂದ್ ಗುಜ್ಜರ ಅವರಿಗೆ ಸೇರಿದ ಮನೆಯಲ್ಲಿ ಗಾಂಧೀಜಿ ಎರಡು ದಿನ ವಾಸ್ತವ್ಯ ಹೂಡಿದ್ದರು. ಆ ಮನೆಯನ್ನು ಗುಜ್ಜರ ಕುಟುಂಬವೂ ಬಳಸುತ್ತಿಲ್ಲ. ಹೀಗಾಗಿ ಮನೆ ಪಾಳು ಬಿದ್ದಿದ್ದು, ಗಾಂಧೀಜಿ ಫೋಟೊ ಮಾತ್ರ ಅನಾಥವಾಗಿ ಕಾಣುತ್ತದೆ.

ADVERTISEMENT

ಈ ಮನೆಗೆ ತೆರಳಲು ದಾರಿಯೂ ಇಲ್ಲ. ಆವರಣದಲ್ಲಿ ಮಾವಿನ ಸಸಿಯೊಂದನ್ನು ಗಾಂಧೀಜಿ ತಾವು ಭೇಟಿ ನೀಡಿದ ನೆನಪಿಗಾಗಿ ನೆಟ್ಟಿದ್ದು, ಇಂದು ಅದು ಹೆಮ್ಮೆರವಾಗಿ ಬೆಳೆದು ನಿಂತಿದೆ. ಆಗ ₹1,965 ಹಣ ಸಂಗ್ರಹಿಸಿ ಸೇದುವ ಬಾವಿ ಕೊರೆಯಿಸಿದ್ದು, ಇಂದಿಗೂ ಅದನ್ನು ಸ್ಥಳೀಯರು ‘ಗಾಂಧಿ ಬಾವಿ’ ಎಂದೇ ಕರೆಯುತ್ತಾರೆ.

ಗ್ರಾಮದ ಬಡವರಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಿಕೊಡಬೇಕೆಂಬ ಉದ್ದೇಶದಿಂದ ಇದೇ ಗ್ರಾಮದಲ್ಲಿ ಕೊಲ್ಹಾಪುರದ ರಾಜಾರಾಮ ಮಹಾರಾಜರು ಹಾಗೂ ಗಾಂಧೀಜಿ ‘ಮಿಷನ್ ಹಾಸ್ಪಿಟಲ್’ ಆರಂಭಿಸಿದ್ದರು. ಕಾಲಾಂತರದಲ್ಲಿ ಆ ಆಸ್ಪತ್ರೆ ಮೀರಜ್‌ಗೆ ಸ್ಥಳಾಂತರವಾಯಿತು. ಆಸ್ಪತ್ರೆ ಆರಂಭಿಸಿದ ಮನೆ ಈಗ ‘ದವಾಖಾನಿ ಮನೆ’ ಎಂಬ ಹೆಸರಿಗೆ ಉಳಿದಿದೆ.

ಇಷ್ಟೊಂದು ಮಹತ್ವ ಪಡೆದ ಊರಿನ ಕುರುಹುಗಳನ್ನು ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡಿದೆ. ಗ್ರಾಮಸ್ಥರಾದರೂ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ.

ಚಿಕ್ಕೋಡಿ ತಾಲ್ಲೂಕಿನ ನವಲಿಹಾಳ ಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ತಂಗಿದ್ದ ಮನೆಯ ಬಳಿಯಲ್ಲಿ ಮಾವಿನ ಸಸಿಯೊಂದನ್ನು ನೆಟ್ಟ ಕ್ಷಣ

ಶಿಕ್ಷಕ ವಿಶ್ವನಾಥ ಧುಮಾಳ ಅವರು ‘ನಮ್ಮೂರಲ್ಲಿ ಗಾಂಧೀಜಿ’ ಎಂಬ ಕಿರು ಹೊತ್ತಿಗೆ ಪ್ರಕಟಿಸಿದ್ದು, ಶಾಲಾ ಮಕ್ಕಳಿಗೆ ಹಾಗೂ ಸ್ಥಳೀಯರಿಗೆ ಉಚಿತವಾಗಿ ಹಂಚುವ ಮೂಲಕ ಇತಿಹಾಸ ಉಳಿಸಿದ್ದಾರೆ.

ಗಾಂಧೀಜಿ ನಮ್ಮ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು ಎಂಬುದೇ ಹೆಮ್ಮೆ. ಆ ಮನೆ ಬಾವಿ ಹಾಗೂ ಆಸ್ಪತ್ರೆಯನ್ನು ಸಂಬಂಧಿಸಿದವರು ರಕ್ಷಣೆ ಮಾಡಬೇಕು
ರೇಖಾ ಮೆಹತಾ (ಗುಜ್ಜರ) ಗಾಂಧೀಜಿ ವಾಸ್ತವ್ಯವಿದ್ದ ಮನೆಯ ಮಾಲೀಕ
90 ವರ್ಷಗಳ ಹಿಂದೆ ನವಲಿಹಾಳ ಗ್ರಾಮಕ್ಕೆ ಗಾಂಧೀಜಿ ಆಗಮಿಸಿದ್ದ ಕುರುಹುಗಳ ರಕ್ಷಣೆಯಾಗಬೇಕು. ಇದಕ್ಕೆ ಗಾಂಧಿ ಸ್ಮಾರಕ ನಿರ್ಮಾಣ ಮಾಡಬೇಕು
ಸಚಿನ ಹುಕ್ಕೇರಿ ಅಧ್ಯಕ್ಷ ಗ್ರಾಮ ಪಂಚಾಯಿತಿ ನವಲಿಹಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.