ADVERTISEMENT

ಕೋಮುಸೌಹಾರ್ದದ ಕುರುಂದವಾಡ

ಪ್ರಾರ್ಥನಾ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

ಸುಧಾಕರ ಎಸ್.ತಳವಾರ, ಬೆಂಗಳೂರು
Published 10 ಸೆಪ್ಟೆಂಬರ್ 2019, 12:06 IST
Last Updated 10 ಸೆಪ್ಟೆಂಬರ್ 2019, 12:06 IST
10ಸಿಕೆಡಿ1 ಕುರುಂದವಾಡ ನಗರದ ಬೈರಕದಾರ ಪ್ರಾರ್ಥನಾ ಸ್ಥಳದಲ್ಲಿ ಸನ್ಮಿತ್ರ ಗಣೇಶೋತ್ಸವ ಮಂಡಳಿಯವರು ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ.
10ಸಿಕೆಡಿ1 ಕುರುಂದವಾಡ ನಗರದ ಬೈರಕದಾರ ಪ್ರಾರ್ಥನಾ ಸ್ಥಳದಲ್ಲಿ ಸನ್ಮಿತ್ರ ಗಣೇಶೋತ್ಸವ ಮಂಡಳಿಯವರು ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ.   

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ನೆರೆಯ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲ್ಲೂಕಿನ ಕುರುಂದವಾಡ ಪಟ್ಟಣದ 5 ಪ್ರಾರ್ಥನಾ ಸ್ಥಳಗಳಲ್ಲಿ ಗಣೇಶ ಮತ್ತು ಪೀರ್‌ ಪಂಜಾಗಳನ್ನು ಅಕ್ಕಪಕ್ಕ ಪ್ರತಿಷ್ಠಾಪಿಸಿ ಗೌರಿಗಣೇಶ ಮತ್ತು ಮೊಹರಂ ಹಬ್ಬವನ್ನು ಹಿಂದೂ –ಮುಸ್ಲಿಮರು ಸಂಭ್ರಮದಿಂದ ಆಚರಿಸುವ ಮೂಲಕ ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಿದ್ದಾರೆ.

ಕುರುಂದವಾಡದಲ್ಲಿ ಮರಾಠಾ ಮತ್ತು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜೈನ, ಲಿಂಗಾಯತ, ದಲಿತರು ಕೂಡ ನೆಲೆಸಿದ್ದಾರೆ. 1982ರಿಂದಲೂ ಹಿಂದೂ–ಮುಸ್ಲಿಮರು ಮಸೀದಿಯಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸುವ ಪರಂಪರೆ ಮುಂದುವರಿಸಿಕೊಂಡು ಬಂದಿದ್ದಾರೆ. ಅಲ್ಲಿನ ಐದು ಪ್ರಾರ್ಥನಾ ಸ್ಥಳಗಳಲ್ಲಿ ಪ್ರತಿ ವರ್ಷ ಗಣೇಶ ಹಬ್ಬ ಆಚರಿಸಲಾಗುತ್ತಿದೆ.

ಪ್ರಸಕ್ತ ವರ್ಷ ಗಣೇಶ ಚತುರ್ಥಿ ಮತ್ತು ಮೊಹರಂ ಹಬ್ಬಗಳು ಏಕಕಾಲಕ್ಕೆ ಬಂದಿರುವುದರಿಂದ ಪ್ರಾರ್ಥನಾ ಸ್ಥಳಗಳಲ್ಲಿ ಗಣೇಶ ಮೂರ್ತಿ ಮತ್ತು ಪೀರ್‌ ಪಂಜಾಗಳನ್ನು ಅಕ್ಕಪಕ್ಕದಲ್ಲಿ ಪ್ರತಿಷ್ಠಾಪಿಸಿ ಆಚರಿಸಲಾಗುತ್ತಿದೆ. ಮಾಳಭಾಗದಲ್ಲಿರುವ ಬೈರಕದಾರ, ಗೋಟನಪುರಗಲ್ಲಿಯ ಕುಡೇಖಾನ, ಕಾರಖಾನಾ ಪೀರ, ಡೆಪನ್ಪೂರ ಮತ್ತು ಶೇಳಕೆಗಲ್ಲಿಯ ಸೆಳಕೆಪೀರ್ ಪ್ರಾರ್ಥನಾ ಸ್ಥಳಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಸದ್ಭಾವನೆ ಮತ್ತು ವಿಜೃಂಭಣೆಯಿಂದ ಉತ್ಸವ ಆಚರಿಸಲಾಗುತ್ತಿದೆ. ಪಂತ ಮಂದಿರದಲ್ಲಿ ಗಣೇಶ ಮೂರ್ತಿ ಮತ್ತು ಪೀರ್‌ ಪಂಚಾ ಪ್ರತಿಷ್ಠಾಪಿಸಲಾಗಿದೆ.

ADVERTISEMENT

ಎರಡೂ ಕೋಮಿನವರು ಒಂದಾಗಿಯೇ ಪೂಜೆ, ಆರತಿ, ನೈವೇದ್ಯ ಸಲ್ಲಿಸುತ್ತಾರೆ. ಮುಸ್ಲಿಂ ಮಹಿಳೆಯರು ಗಣೇಶನ ಆರತಿ ಹಾಡುಗಳನ್ನು ನಿರರ್ಗಳವಾಗಿ ಹಾಡುತ್ತಾರೆ. ಪೂಜೆ ವೇಳೆ ಗಂಟೆ, ಡೋಲು ಮತ್ತು ತಾಷೆಗಳ ನಿನಾದ ಮೊಳಗುತ್ತದೆ. ಪೀರ್‌ ಪಂಜಾಗೂ ಅಷ್ಟೇ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ.

‘ಉತ್ಸವ ಸಂದರ್ಭದಲ್ಲಿ ಪ್ರಾರ್ಥನಾ ಸ್ಥಳದಲ್ಲಿಯೇ ಸತ್ಯನಾರಾಯಣ ಪೂಜೆ ಸಲ್ಲಿಸಿ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ. ಮಸೀದಿಯಲ್ಲಿ ಗಣೇಶೋತ್ಸವ, ಮೊಹರಂ ಮಾತ್ರವಲ್ಲದೇ ಶಿವಾಜಿ, ಹನುಮ ಜಯಂತಿಗಳನ್ನೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ’ ಎಂದು ಕಾರಖಾನಾ ಪೀರ್ ಗಣೇಶೋತ್ಸವ ಮಂಡಳಿ ಅಧ್ಯಕ್ಷ ಸಾದಿಕ್‌ ಉಸ್ಮಾನ್ ದಬಾಸೆ ಹೇಳುತ್ತಾರೆ.

‘ಗಣೇಶ ಉತ್ಸವ ಮಂಡಳಗಳಲ್ಲಿ ಹಿಂದೂ- ಮುಸ್ಲಿಂ ಇಬ್ಬರೂ ಸದಸ್ಯರಿರುತ್ತಾರೆ. ಕೆಲವು ಮಂಡಳಗಳಿಗೆ ಮುಸ್ಲಿಂ ಮುಖಂಡರೇ ಅಧ್ಯಕ್ಷರಾಗಿರುತ್ತಾರೆ. ಎರಡೂ ಹಬ್ಬಗಳಲ್ಲೂ ಶ್ರದ್ಧಾಭಕ್ತಿಯಿಂದ ಭಾಗವಹಿಸುತ್ತಾರೆ. ಎರಡೂ ಹಬ್ಬಗಳು ಏಕಕಾಲಕ್ಕೆ ಬಂದಿರುವುದರಿಂದ ಸಂಭ್ರಮ ಹೆಚ್ಚಾಗಿದೆ’ ಎಂದು ಕಲ್ಲಪ್ಪ ಕಬ್ಬೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.