ಬೆಳಗಾವಿ: ‘ವಿವಿಧ ಸಹಕಾರ ಸೊಸೈಟಿಗಳ ಸಹಯೋಗದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಸೆ. 4ರಿಂದ 7ರವರೆಗೆ ‘ಗಣೇಶೋತ್ಸವ’ ಕಾರ್ಯಕ್ರಮವನ್ನು ಕಿರ್ಲೋಸ್ಕರ್ ರಸ್ತೆಯ ವಾಜ್ಞಯ ಚರ್ಚಾ ಮಂಡಳದಲ್ಲಿ ಆಯೋಜಿಸಲಾಗಿದೆ’ ಎಂದು ಶ್ರೀಮಾತಾ ಕೋ–ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಮನೋಹರ ದೇಸಾಯಿ ತಿಳಿಸಿದರು.
‘ಶ್ರೀಮಾತಾ ಕೋ–ಆಪ್ ಕ್ರೆಡಿಟ್ ಸೊಸೈಟಿ, ರಾಜಮಾತಾ ಮಹಿಳಾ ವಿವಿಧೋದ್ದೇಶ ಸೊಸೈಟಿ, ಸಿಟಿ, ಭಕ್ತಿ ಹಾಗೂ ಸಮರ್ಥ ಅರ್ಬನ್ ಕೋ–ಆಫ್ ಕ್ರೆಡಿಟ್ ಸೊಸೈಟಿಗಳ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.
‘ಸೆ. 4ರಂದು ಸಂಜೆ 4ಕ್ಕೆ ಉದ್ಘಾಟನೆ ನೆರವೇರಲಿದೆ. ಮರಾಠಿ ಗೀತೆಗಳ ಗಾಯನ ಕಾರ್ಯಕ್ರಮವನ್ನು ಸುರ ಝೇಂಕಾರ ತಂಡದವರು ಪ್ರಸ್ತುತಪಡಿಸುವರು. 5ರಂದು ಸಂಜೆ 4ಕ್ಕೆ ಖಾನಾಪುರದ ಸುಭಾಷ ಕಲಾಲ ನೇತೃತ್ವದ ‘ಸುರ ಸಂಗಮ’ ತಂಡದವರು ಹಳೆಯ ಹಾಡುಗಳನ್ನು ಹಾಡುವರು. ಸೆ. 6ರಂದು ಸಂಜೆ 4ಕ್ಕೆ ಕೊಲ್ಹಾಪುರದ ರಾಹುಲ ಕುಲಕರ್ಣಿ ಹಾಸ್ಯ ಕಾರ್ಯಕ್ರಮವಿದೆ’ ಎಂದು ಹೇಳಿದರು.
‘ಸೆ. 7ರಂದು ಸಂಜೆ 4ಕ್ಕೆ ನ್ಯೂ ಗೂಡ್ಸ್ಶೆಡ್ ರಸ್ತೆಯಲ್ಲಿರುವ ಶ್ರೀಮಾತಾ ಸೊಸೈಟಿ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಮಾಜಸೇವಕ ಸುರೇಂದ್ರ ಅನಗೋಳಕರ, ಸಾಹಿತಿ ಬಸವಂತ ಬಾಬು ಶಹಾಪುರಕರ, ಕೃಷಿಕ ಕಲ್ಲಪ್ಪ ಪಾಂಡು ತರಳೆ, ಉದ್ಯಮಿ ಸಂಜಯ ರುಕುಮಣ್ಣ ಮೋರೆ, ನಾಟ್ಯ ಕಲಾವಿದೆ ಅಂಕಿತಾ ಸದಾನಂದ ಕದಮ, ಸಾಮಾಜಿಕ ಸಂಸ್ಥೆ ನಿಯತಿ ಪ್ರತಿಷ್ಠಾನ, ಶ್ರಮಸೇವೆಗಾಗಿ ನಗರಪಾಲಿಕೆಯ ಶವವಾಹಿನಿಯ ಐವರು ಚಾಲಕರು, ಕಲಾವಿದ ಯೋಗಿ ಜೆ. ಬಿರಾದರ ಮತ್ತು ಕ್ರೀಡಾ ಪ್ರತಿಭೆ ನಿಶಾನ್ ಮನೋಹರ ಕದಂ ಅವರಿಗೆ ‘ರತ್ನ’ ಪ್ರಶಸ್ತಿಗಳನ್ನು ನೀಡ ಗೌರವಿಸಲಾಗುವುದು’ ಎಂದರು.
‘ಸತತ 19 ವರ್ಷಗಳಿಂದ ಉತ್ಸವ ಆಯೋಜಿಸುತ್ತಿದ್ದೇವೆ. ಈ ಬಾರಿ ಪ್ರವಾಹದಿಂದ ಭಾರಿ ಹಾನಿಯಾಗಿರುವುದರಿಂದಾಗಿ ಸರಳವಾಗಿ ನಡೆಸುತ್ತಿದ್ದೇವೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಉತ್ಸವ ಸಮಿತಿಯಿಂದ ತಲಾ ₹ 50ಸಾವಿರ ನೀಡಿದ್ದೇವೆ’ ಎಂದು ತಿಳಿಸಿದರು.ಆಯೋಜಕರಾದ ಚಂದ್ರಕಾಂತ ಪಾಟೀಲ, ಶಿವಶಂಕರ ಬಾಳೇಕುಂದ್ರಿ, ಮಹೇಶ ವಸ್ತ್ರದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.