ADVERTISEMENT

ಗೋಕಾಕ| ನದಿಗಳಲ್ಲಿ ಹೆಚ್ಚಿದ ಹರಿವು: ಕಾರ್ಗತ್ತಲಲ್ಲಿ ಕಾಳಜಿ ಕೇಂದ್ರ ಸೇರಿದ ಬದುಕು

ಸಂತೋಷ ಈ.ಚಿನಗುಡಿ
Published 21 ಆಗಸ್ಟ್ 2025, 2:35 IST
Last Updated 21 ಆಗಸ್ಟ್ 2025, 2:35 IST
ಗೋಕಾಕ ನಗರದ ಕುಂಬಾರ ಗಲ್ಲಿಗೆ ಹೊಂದಿಕೊಂಡ ಖಬರಸ್ಥಾನ್‌ವರೆಗೂ ಮಂಗಳವಾರ ರಾತ್ರಿ ಘಟಪ್ರಭೆ ಪ್ರವಾಹ ಬಂದಿತು 
ಪ್ರಜಾವಾಣಿ ಚಿತ್ರ
ಗೋಕಾಕ ನಗರದ ಕುಂಬಾರ ಗಲ್ಲಿಗೆ ಹೊಂದಿಕೊಂಡ ಖಬರಸ್ಥಾನ್‌ವರೆಗೂ ಮಂಗಳವಾರ ರಾತ್ರಿ ಘಟಪ್ರಭೆ ಪ್ರವಾಹ ಬಂದಿತು  ಪ್ರಜಾವಾಣಿ ಚಿತ್ರ   

ಗೋಕಾಕ: ಮಂಗಳವಾರ ರಾತ್ರಿ ಊಟ ಮಾಡಿ ನೆಮ್ಮದಿಯಿಂದ ಮಲಗಿದ್ದ ಜನ ಏಕಾಏಕಿ ದಿಗಿಲುಗೊಂಡರು. ‘ಹೊಳೆ ಬರಲಾಕತ್ತದ ಎದ್ದೇಳ್ರಿ’ ಎಂಬ ಕೂಗು ಕೇಳಿ ತಡಬಡಿಸಿ ಎದ್ದರು. ಕೈಗೆ ಸಿಕ್ಕ ಗೃಹಸಾಮಗ್ರಿ, ದಾಖಲೆ ಪತ್ರ, ಪಠ್ಯಪುಸ್ತಕಗಳನ್ನು ಎತ್ತಿಕೊಂಡು ಹೊರಟರು. ಹಾಯಾದ ನಿದ್ದೆಯಲ್ಲಿದ್ದ ಪುಟಾಣಿ ಮಕ್ಕಳು ಬುಧವಾರ ಬೆಳಿಗ್ಗೆ ಕಣ್ಣು ಬಿಟ್ಟಾಗ ಕಾಳಜಿ ಕೇಂದ್ರದಲ್ಲಿದ್ದರು.

ಮಧ್ಯರಾತ್ರಿ ಏಕಾಏಕಿ ಉಕ್ಕೇರಿದ ಘಟಪ್ರಭೆಯ ನೀರು ಇಲ್ಲಿನ ಕುಂಬಾರ ಗಲ್ಲಿ, ಉಪ್ಪಾರ ಗಲ್ಲಿ, ಡೋಹರ ಗಲ್ಲಿ,ಬೋಜಗಾರ ಗಲ್ಲಿ, ದಾಳಂಬರಿತೋಟ, ಹಳೆ ದನಗಳ ಪೇಟೆ, ಮಟನ್ ಮಾರ್ಕೆಟ್ ಪ್ರದೇಶಕ್ಕೆ‌ ನುಗ್ಗಿದೆ. ಬುಧವಾರ ಬೆಳಕಾಗುವಷ್ಟರಲ್ಲಿ 200 ಮನೆಗಳು ಜಲಾವೃತವಾಗಿವೆ.

ನಾಲ್ಕು ‌ದಿನಗಳಿಂದ ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳ ಜಲಾನಯನ ಪ್ರದೇಶದಲ್ಲಿ ಧಾರಾಕಾರ ‌ಮಳೆ‌ ಸುರಿದಿದೆ. ಇದರೊಂದಿಗೆ ಬೆಳಗಾವಿ ಬಳಿಯ ಬಳ್ಳಾರಿನಾಲೆ ನೀರು, ಮಹಾರಾಷ್ಟ್ರ ಪಶ್ಚಿಮ ಘಟ್ಟದ ನೀರು ಸೇರಿದೆ. ಹಿಡಕಲ್ ಜಲಾಶಯದಿಂದ 36 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದೆಲ್ಲವೂ ಸೇರಿ‌ ಗೋಕಾಕ ಬಳಿಯ ಲೋಳಸೂರ ಸೇತುವೆ ಬಳಿ 66 ಕ್ಯೂಸೆಕ್ ನೀರು ಹರಿಯುತ್ತಿದೆ.

ADVERTISEMENT

ಬುಧವಾರ ಮಳೆ ತುಸು ಬಿಡುವು ನೀಡಿತ್ತಾದರೂ ಜಲಾಶಯದ ಹೊರಹರಿವನ್ನು ಏಕಾಏಕಿ ಹೆಚ್ಚಿಸಿದ್ದರಿಂದ ಪ್ರವಾಹ ಪರಿಸ್ಥಿತಿ ತಲೆದೋರಿದೆ.

ಘಟಪ್ರಭೆ ನೀರು ಮನೆಯಂಗಳಕ್ಕೆ ಬರುತ್ತಿದ್ದಂತೆಯೇ ಜನ ಸುರಕ್ಷಿತ ಸ್ಥಳಕೆ ಧಾವಿಸಿದರು. ಕೈಗೆ ಸಿಕ್ಕ ಪಾತ್ರೆ, ಗ್ಯಾಸ್, ಸಿಲಿಂಡರ್, ಬಟ್ಟೆ, ಹಾಸಿಗೆ, ಕಟ್ಟಿಕೊಂಡು, ಪುಟ್ಟ ಮಕ್ಕಳನ್ನು ಎತ್ತಿಕೊಂಡು ಬಂದ ಜನ, ಶಾಲೆಯಲ್ಲಿ ತೆರೆದ ಕಾಳಜಿ ಕೇಂದ್ರ ಸೇರಿದರು. ಊಟ, ವಸತಿ, ಶೌಚಾಲಯ, ಆರೋಗ್ಯ ಸೌಕರ್ಯ ಇಲ್ಲಿ ಕಲ್ಪಿಸಲಾಗಿದೆ.

‘ಪ್ರಜಾವಾಣಿ’ ‍ಪ್ರತಿನಿಧಿ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದಾಗ ಆಧಾರ್‌ ಕಾರ್ಡುಗಳನ್ನು ಕೈಯಲ್ಲಿ ಹಿಡಿದುಕೊಂಡ ಮಹಿಳೆಯರು ಹೆಸರು ನೋಂದಣಿಗೆ ಮುಗಿಬಿದ್ದಿದ್ದರು. ಚುನಾವಣೆ ವೇಳೆ ಮತ ಹಾಕಲು ಇದೇ ಶಾಲೆಯಲ್ಲಿ ಸಾಲಾಗಿ ನಿಂತಿದ್ದ ಜನ, ಈಗ ಸಂತ್ರಸ್ತರಾಗಿ ನಿಂತಿದ್ದಾರೆ.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ ಕಾಳಜಿ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಂತೆ ಸಂತ್ರಸ್ತ ಮಹಿಳೆಯರು ಒಕ್ಕೊರಲಿನಿಂದ ಧ್ವನಿ ಎತ್ತಿದರು‌. ‘ಇನ್ನೆಷ್ಟು ವರ್ಷ ಬರೀ ಪರಿಹಾರ ನೀಡುತ್ತೀರಿ? ಎಷ್ಟು ವರ್ಷ ಸಮಾಧಾನ ಹೇಳಿ ಹೋಗುತ್ತೀರಿ? ನಮ್ಮನ್ನು ಸ್ಥಳಾಂತರಿಸಿ ಶಾಶ್ವತ ನೆರಳು ಮಾಡಿ ಕೊಡಿ’ ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಕಾಲಿಗೆ ಬಿದ್ದ ಮಹಿಳೆಯೊಬ್ಬರು, ‘ಪ್ರತಿ ವರ್ಷ ಈ ಗೋಳು ನಮಗೆ ತಪ್ಪಿದ್ದಲ್ಲ. ಮಕ್ಕಳಿಗೆ ಬಹಳ ಕಷ್ಟವಾಗುತ್ತಿದೆ. ಕರುಣೆ ತೋರಿಸಿ ಬೇರೆ ಎಲ್ಲಾದರೂ ನೆರಳು ಮಾಡಿ ಕೊಟ್ಟರೆ ಸಾಕು’ ಎಂದು ಅಂಗಲಾಚಿದರು.

ಗೋಕಾಕದ ಮುನ್ಸಿಪಲ್‌ ಸರ್ಕಾರಿ ಶಾಲೆಯಲ್ಲಿ ತೆರೆದ ಕಾಳಜಿ ಕೇಂದ್ರದಲ್ಲಿ ಬುಧವಾರ ಆಶ್ರಯ ಪಡೆದ ಕುಟುಂಬ ಪ್ರಜಾವಾಣಿ ಚಿತ್ರ
ಶಾಶ್ವತವಾಗಿ ಸ್ಥಳಾಂತರಿಸಿ ಎಂದು ಪ್ರವಾಹಪೀಡಿತರು ಕೇಳಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಈಗ ಪ್ರವಾಹ ಪರಿಸ್ಥಿತಿ ನಿರ್ವಹಣೆ ಸೂಕ್ತವಾಗಿ ನಡೆದಿದೆ
ಮೊಹಮ್ಮದ್‌ ರೋಷನ್‌, ಜಿಲ್ಲಾಧಿಕಾರಿ
ಪ್ರವಾಹದ ಜಂಜಾಟದಲ್ಲೇ ನಮ್ಮ ಇಡೀ ಜೀವನ ಕಳೆಯಿತು. ಮಕ್ಕಳಾದರೂ ನೆಮ್ಮದಿಯಿಂದ ಇರಬೇಕು. ನಮ್ಮನ್ನು ಸ್ಥಳಾಂತರಿಸಿ ಎಂದು ಗೋಗರೆದರೂ ಕೇಳಿಸಿಕೊಳ್ಳುವವರೇ ಇಲ್ಲ
ನೂರ್‌ಜಹಾನ್‌ ಬೋಜಗಲ್ಲ, ನೆರೆ ಸಂತ್ರಸ್ತೆ
ಎಲ್ಲಿಯಾದರೂ ನೆರಳು ಮಾಡಿಕೊಡಿ ಎಂದು ಸಚಿವ ಸತೀಶ ಜಾರಕಿಹೊಳಿ ಶಾಸಕ ರಮೇಶ ಜಾರಕಿಹೊಳಿ ಅವರಿಗೂ ಮನವಿ ಮಾಡಿದ್ದೇವೆ. ಅವರು ಕಿವಿಗೊಡುತ್ತಿಲ್ಲ
ಜಯಶ್ರೀ, ನೆರೆ ಸಂತ್ರಸ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.