ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನ: ಗೋಕಾಕ ಸಜ್ಜು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 13:40 IST
Last Updated 25 ಫೆಬ್ರುವರಿ 2021, 13:40 IST
ಗೋಕಾಕದ ನ್ಯೂ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ನಡೆಯಲಿರುವ ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಹಾದ್ವಾರ ಸಿದ್ಧವಾಗಿದೆ
ಗೋಕಾಕದ ನ್ಯೂ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ನಡೆಯಲಿರುವ ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಹಾದ್ವಾರ ಸಿದ್ಧವಾಗಿದೆ   

ಗೋಕಾಕ: ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೋಕಾವಿ ನಾಡು ಸಜ್ಜಾಗಿದೆ.

ನಗರದ ಪ್ರಮುಖ ರಸ್ತೆ ನಾಕಾ ನಂ. 1ರಿಂದ ಪೊಲೀಸ್ ಸಂಕೀರ್ಣ (ಡಿವೈಎಸ್ಪಿ ಕಚೇರಿ)ವರೆಗಿನ ಮುಖ್ಯ ರಸ್ತೆಯ ವಿಭಜಕಗಳು ವರ್ಣರಂಜಿತ ಕಟೌಟ್‌ಗಳಿಂದ ರಾರಾಜಿಸುವ ಮೂಲಕ ಸಾಹಿತ್ಯಾಸಕ್ತರನ್ನು ಸೆಳೆಯುತ್ತಿವೆ. ಫೆ. 27ರಂದು ಇಲ್ಲಿನ ನ್ಯೂ ಇಂಗ್ಲಿಷ್‌ ಶಾಲೆ ಆವರಣದಲ್ಲಿ ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಸಾವಿರಕ್ಕೂ ಅಧಿಕ ಸಾಹಿತ್ಯಾಸಕ್ತರಿಗೆ ಸಭಾಮಂಟಪದಲ್ಲಿ ಆಸನಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಊಟೋಪಚಾರದ ವ್ಯವಸ್ಥೆಗೂ ಸಂಘಟಕರು ಆದ್ಯತೆ ನೀಡಿದ್ದಾರೆ.

ADVERTISEMENT

ಬಸವೇಸ್ವರ ವೃತ್ತಿಂದ ಗೋಕಾಕ ಫಾಲ್ಸ್ ಕಡೆಗೆ ಹೋಗುವ ಮುಖ್ಯ ರಸ್ತೆಯ ಎಡಬದಿಗೆ ಹೊಂದಿಕೊಂಡಿರುವ ಮೈದಾನದಲ್ಲಿ ಭವ್ಯ ಸಭಾಮಂಟಪದ ನಿರ್ಮಾಣವಾಗಿದೆ. ಪ್ರಧಾನ ವೇದಿಕೆಗೆ ‘ಕಲಾಶ್ರೀ ನಿಂಗಯ್ಯಸ್ವಾಮಿ ಪೂಜಾರಿ’ ಮತ್ತು ಸಭಾಮಂಟಪಕ್ಕೆ ‘ರಂಗಕರ್ಮಿ ಬಸವಣ್ಣೆಪ್ಪ ಹೊಸಮನಿ’ ಮತ್ತು ಮಹಾದ್ವಾರಗಳಿಗೆ ‘ಚಿತ್ರಕಲಾವಿದ ಶಂಕರ ಮುಂಗರವಾಡಿ’ ಮತ್ತು ‘ಚುಟುಕು ಕವಿ ಟಿ.ಸಿ. ಮೊಹರೆ’ ಎಂದು ನಾಮಕರಣ ಮಾಡಲಾಗಿದೆ.

ಅಧ್ಯಕ್ಷ ಡಾ.ಸಿ.ಕೆ. ನಾವಲಗಿ ಅವರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಮುಂಜಾನೆ 8ಕ್ಕೆ ಧ್ವಜಾರೋಹಣ, 8.30ಕ್ಕೆ ಬಸವೇಶ್ವರ ವೃತ್ತದಿಂದ ಎನ್ಇಎಸ್ ಶಾಲಾ ಆವರಣದಲ್ಲಿ ರಂಗಕರ್ಮಿ ಬಸವಣ್ಣೆಪ್ಪ ಹೊಸಮನಿ ಸಭಾಮಂಟಪದವರೆಗೆ ನಾಡದೇವಿ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ ನೀಡಲಿದ್ದಾರೆ.

ಬೆಳಿಗ್ಗೆ 10ಕ್ಕೆ ಸಮ್ಮೇಳನವನ್ನು ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸುವರು. ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸವರು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ವಹಿಸುವರು. ನಿಕಟಪೂರ್ವ ಅಧ್ಯಕ್ಷ ಮಹಾಲಿಂಗ ಮಂಗಿ, ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮೊದಲಾದವರು ಭಾಗವಹಿಸುವರು. ಮಧ್ಯಾಹ್ನ 12.30ರಿಂದ ಗೋಷ್ಠಿಗಳು ನಡೆಯಲಿವೆ. ಸಂಜೆ ಸಮಾರೋಪ ಸಮಾರಂಭವಿದೆ. ಚಲನಚಿತ್ರ ನಟಿ ಭಾವನಾ ಮುಖ್ಯ ಆಕರ್ಷಣೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.