ADVERTISEMENT

ಗೋಕಾಕ ಸ್ವಾತಂತ್ರ್ಯ ಭಾರತದ ಅಂಗವಲ್ಲವೇ?: ಅಶೋಕ ಪೂಜಾರಿ

ಪ್ರತಿಭಟನೆಗೆ ರಮೇಶ ಬೆಂಬಲಿಗರಿಂದ ಅಡ್ಡಿ: ಆರೋಪ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 14:37 IST
Last Updated 17 ಸೆಪ್ಟೆಂಬರ್ 2019, 14:37 IST
ಅಶೋಕ ಪೂಜಾರಿ
ಅಶೋಕ ಪೂಜಾರಿ   

ಬೆಳಗಾವಿ: ‘ಗೋಕಾಕ ತಾಲ್ಲೂಕು ಸ್ವಾತಂತ್ರ್ಯ ಭಾರತದ ಅಂಗವೋ ಅಥವಾ ಒಂದು ಕುಟುಂಬದ ಸರ್ವಾಧಿಕಾರಿ ಧೋರಣೆಯ ಜಾಗವೋ ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಬೇಕು’ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಆಗ್ರಹಿಸಿದರು.

‘ಆ ತಾಲ್ಲೂಕಿನ ದನದ ಓಣಿ ಪ್ರದೇಶಕ್ಕೆ ವಿದ್ಯುತ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ, ಸೋಮವಾರ ಹಮ್ಮಿಕೊಂಡಿದ್ದ ಪಾದಯಾತ್ರೆ ಮತ್ತು ಪ್ರತಿಭಟನೆಗೆ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಬೆಂಬಲಿಗರು ಅಡ್ಡಿಪಡಿಸಿದರು’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಅಲ್ಲಿನ ಜನರೊಂದಿಗೆ ತಹಶೀಲ್ದಾರ್‌ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಅಲ್ಲಿಗೆ ಬಂದ ಕೆಲವರು ರಮೇಶ ಜಾರಕೊಹೊಳಿ ಹಾಗೂ ಅವರ ಅಳಿಯ ಅಂಬಿರಾವ್‌ ಪಾಟೀಲಗೆ ಜಿಂದಾಬಾದ್‌, ಅಶೋಕ ಪೂಜಾರಿ ಗೋ ಬಾಕ್ ಎಂಬ ಘೋಷಣೆಗಳನ್ನು ಕೂಗಿದರು. ನಮ್ಮ ಮೇಲೆ ಹಲ್ಲೆ ನಡೆಸುವ ಸಂಚು ರೂಪಿಸಿದ್ದರು’ ಎಂದು ದೂರಿದರು.

ADVERTISEMENT

‘ಪಾದಯಾತ್ರೆಗೆ ಪೊಲೀಸರ ಅನುಮತಿ ಪಡೆದರೆ ಸಾಲದು. ನಮ್ಮ ಅನುಮತಿ ಪಡೆಯಬೇಕು ಎಂಬ ಉದ್ದಟತನದ ಮಾತುಗಳನ್ನು ಆಡಿದರು. ಹೀಗೆ ಅಡ್ಡಿಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.

‘ನಮ್ಮ ಮೇಲೆ ದೌರ್ಜನ್ಯ ನಡೆದರೂ ಪೊಲೀಸರು ಕ್ರಮ ಜರುಗಿಸಲಿಲ್ಲ. ಈ ದೌರ್ಜನ್ಯದ ರಾಜಕಾರಣ ಇನ್ನೆಷ್ಟು ದಿನ? ಬೆದರಿಕೆ ತಂತ್ರಗಳಿಗೆ ಹೆದರುವುದಿಲ್ಲ. ದೌರ್ಜನ್ಯದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ. ರಮೇಶ ದಬ್ಬಾಳಿಕೆಯ ರಾಜಕಾರಣ ಬಿಡಬೇಕು. ಜನ ವಿರೋಧಿ
ಧೋರಣೆ ಬಹುಕಾಲ ಉಳಿಯುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಶಾಮಾನಂದ ಪೂಜಾರಿ, ದಸ್ತಗೀರ ಪಹೇಲ್ವಾನ, ಲಕ್ಷ್ಮಣ ಕರಮೂಸಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.