ಮುಗಳಖೋಡ: ಇಲ್ಲಿನ ನಿವಾಸಿ ಎರಡು ಮಕ್ಕಳ ತಾಯಿ ಶಿವಲೀಲಾ ಪಾರ್ವತಿ (ಶೇಗುಣಸಿ) ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್ಸಿಯು) ಸ್ನಾತಕೋತ್ತರ ಪದವಿ ಇಂಗ್ಲಿಷ್ ವಿಭಾಗದಲ್ಲಿ ಚಿನ್ನದ ಪದಕ ಪಡೆದು ಗಮನಸೆಳೆದಿದ್ದಾರೆ.
ಬೆಳಗಾವಿಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸತೀಶ ಜಾರಕಿಹೊಳಿ ಪ್ರದಾನ ಮಾಡಿದರು. ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಇದ್ದರು.
ಬೆಳಗಾವಿ ತಾಲ್ಲೂಕಿನ ಅರಳಿಕಟ್ಟಿಯವರಾದ ಅವರು, ಪಿಯು ಬಳಿಕ ಇಲ್ಲಿನ ಇಂಗ್ಲಿಷ್ ಉಪನ್ಯಾಸಕ ರಾಜಶೇಖರ ಶೇಗುಣಸಿ ಅವರನ್ನು 2012ರ ಏ. 15ರಂದು ವಿವಾಹವಾದರು. ಈ ದಂಪತಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ. ಶಿಕ್ಷಣ ಮುಂದುವರಿಸಬೇಕು ಎನ್ನುವ ಪತ್ನಿಯ ಆಸೆಗೆ ಪತಿ ನೀರೆರೆದರು. ಬಳಿಕ ಶಿಕ್ಷಣ ಮುಂದುವರಿಸಿದ ಶಿವಲೀಲಾ ಡಾ.ಸಿ.ಬಿ. ಕುಲಿಗೋಡ ಪದವಿ ಕಾಲೇಜಿನಲ್ಲಿ ಇಂಗ್ಲಿಷ್, ಇತಿಹಾಸ, ಸಮಾಜವಿಜ್ಞಾನ ವಿಷಯ ತೆಗೆದುಕೊಂಡು ಬಿ.ಎ. ಪದವಿ ಪಡೆದರು. ಹೆಚ್ಚಿನ ಅಂಕ ಗಳಿಸಿ, ಇಂಗ್ಲಿಷ್ ಮತ್ತು ಇತಿಹಾಸ ವಿಷಯಗಳಲ್ಲಿ 2 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದರು. ಆರ್ಸಿಯುನಲ್ಲಿ ಸ್ನಾತಕೋತ್ತರ ಕೋರ್ಸ್ಗೆ ದಾಖಲಾಗಿದ್ದರು.
ಅವರು ಡಾ.ಸಿ.ಬಿ. ಕುಲಿಗೋಡ ಪದವಿ ಕಾಲೇಜಿನ ಒಂದೂವರೆ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ. ‘ಕೆಪಿಎಸ್ಸಿ ಮತ್ತು ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಬೇಕೆಂಬ ಗುರಿ ಇದೆ. ತಂದೆ, ತಾಯಿ ಹಾಗೂ ಪತಿಯ ಸಹಕಾರದಿಂದ ಉನ್ನತ ಶಿಕ್ಷಣ ಹೊಂದಲು ಸಾಧ್ಯವಾಯಿತು’ ಎನ್ನುತ್ತಾರೆ ಅವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.