ಹುಕ್ಕೇರಿ: ಪಟ್ಟಣದ ಕೋರ್ಟ್ ಸರ್ಕಲ್ ಬಳಿ ಪ್ರಾರಂಭಗೊಂಡ ಇಂದಿರಾ ಕ್ಯಾಂಟೀನ್ ಸೋಮವಾರ ವಿವಿಧ ಗ್ರಾಮಗಳಿಂದ ಬಂದಿದ್ದ ಗ್ರಾಹಕರಿಗೆ ವರದಾನವಾಗಿ ಕಂಡಿತು.
ಬೆಳಿಗ್ಗೆ ₹5 ದರದಲ್ಲಿ 300 ಜನರಿಗೆ ಶಿರಾ ಉಪ್ಪಿಟ್ಟು ವಿತರಿಸಲಾಯಿತು. ಸುದ್ದಿ ಹರಡುತ್ತಿದ್ದಂತೆ ಮಧ್ಯಾಹ್ನದ ಊಟದ ಹೊತ್ತಿಗೆ ಬೇರೆ ಬೇರೆ ಗ್ರಾಮಗಳಿಂದ ಬಂದಿದ್ದ ಜನರು ₹10 ಕೊಟ್ಟು ಅನ್ನ, ತರಕಾರಿ ಸಾಂಬಾರು ಮತ್ತು ಮೊಸರು ಸವೆದರು.
ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ:
ಊಟ ಸವಿದ ಸ್ಥಳೀಯ ಎಸ್.ಕೆ.ಪಿಯು ಕಾಲೇಜಿನ ವಿದ್ಯಾರ್ಥಿಗಳು ಇದೇ ಊಟ ಹೊಟೇಲುಗಳಲ್ಲಿ ತೆಗೆದುಕೊಂಡಿದ್ದರೇ ₹40 ಕೊಡಬೇಕಿತ್ತು. ಇಂದಿರಾ ಕ್ಯಾಂಟೀನ್ನಲ್ಲಿ ₹10 ದರದಲ್ಲಿ ಉತ್ತಮ ಊಟ ಸಿಕ್ಕಿತಲ್ಲದೇ ₹30 ಉಳಿಯಿತು ಎಂದು ಹರ್ಷ ವ್ಯಕ್ತಪಡಿಸಿದರು.
ತಾಲ್ಲೂಕಿನ ಅವರಗೋಳ ಗ್ರಾಮದ ಅತ್ತೆ ಸೊಸೆಯರಾದ ಸವಿತಾ ಬೆಳವಿ ಮತ್ತು ಸುಶೀಲಾ ಬೆಳವಿ ಮಧ್ಯಾಹ್ನದ ಊಟ ಸವಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ತಿಳಿಸಿದರು.
ಗೋಕಾಕದಲ್ಲಿ 4 ವರ್ಷದ ಮತ್ತು ಸವದತ್ತಿಯಲ್ಲಿ 1 ವರ್ಷ ಇಂದಿರಾ ಕ್ಯಾಂಟೀನ್ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ ಗೋಪಾಲ ಕೋಟೂರ್, ‘ಸೋಮವಾರದಿಂದ ಪ್ರಾರಂಭಗೊಂಡ ಕ್ಯಾಂಟಿನಿಗೆ ಜನರು ಉತ್ತಮ ಸ್ಪಂದನೆ ನೀಡುತ್ತಿದ್ದಾರೆ. ಜನರ ಅನುಕೂಲಕ್ಕಾಗಿ ಸೆಲ್ಪ ಸ್ಟ್ಯಾಂಡಿಂಗ್ ವ್ಯವಸ್ಥೆ, ಕೈತೊಳೆಯುವ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.
ನಿಯಮಾನುಸಾರ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಊಟ ಮತ್ತು ರಾತ್ರಿ ಊಟಕ್ಕೆ ತಲಾ 300 ಪ್ಲೇಟ್ ಕೊಡಲಾಗುವುದು. ವಾರದಲ್ಲಿ ಯಾವ ದಿನ ಯಾವ ಆಹಾರ ಕೊಡಲಾಗುವುದು ಎಂಬ ಮಾಹಿತಿ ಅಂಟಿಸಲಾಗಿದೆ. ಸಾರ್ವಜನಿಕರಿಂದ ಹಳೆಯ ದರದಂತೆ ಹಣ ಪಡೆಯಲಾಗುವುದು ಎಂದರು.
ಹತ್ತ ರೂಪಾಯಿಗೆ ಏನ್ ಬರತೇತ್ರಿ? ಇಂದಿರಾ ಕ್ಯಾಂಟೀನ್ ತೆರೆದಿದ್ದರಿಂದ ಅನುಕೂಲ ಆಗೆತ್ರಿ. ಊಟಾನು ಬಾಳ ಚಲೊ ಐತ್ರಿಸುರೇಖಾ ಸದಾಶಿವ ತುಕ್ಕಾನಟ್ಟಿ ನೇರ್ಲಿ ಗ್ರಾಮಸ್ಥರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.