ಬೆಳಗಾವಿ: ತಾಲ್ಲೂಕಿನ ಗೌಂಡವಾಡ ಗ್ರಾಮದಲ್ಲಿ ಜೂನ್ 18ರಂದು ನಡೆದ ಗಲಭೆ ಹಾಗೂ ಕೊಲೆ ಪ್ರಕರಣದಲ್ಲಿ ಬಂಧಿತರಾದ 25 ಮಂದಿಯಲ್ಲಿ, ಮೂವರು ಮಹಿಳೆಯರು ಹಾಗೂ ಒಬ್ಬ ವ್ಯಕ್ತಿಗೆ ಶನಿವಾರ ಜಾಮೀನು ದೊರಕಿದೆ.
ಗೌಂಡವಾಡ ನಿವಾಸಿಗಳಾದ ಶಶಿಕಲಾ ಉರೂಫ್ ಅನಿತಾ ಆನಂದ ಕುಟ್ರೆ, ಲಕ್ಷ್ಮಿ ವೆಂಕಟೇಶ ಕುಟ್ರೆ, ಸಂಗೀತಾ ಸಂಜಯ ಕುಟ್ರೆ ಹಾಗೂ ವೆಂಕಟೇಶ ವೈಜು ಕುಟ್ರೆ ಜಾಮೀನು ಮೇಲೆ ಬಿಡುಗಡೆಯಾದವರು.
ದೇವಸ್ಥಾನಕ್ಕೆ ಸೇರಿದ್ದು ಎನ್ನಲಾದ 27 ಎಕರೆ ಜಮೀನಿಗೆ ಸಂಬಂಧಿಸಿದಂತೆ ಗೌಂಡವಾಡ ಗ್ರಾಮದಲ್ಲಿ ಜೂನ್ 18ರ ರಾತ್ರಿ ಗಲಭೆ ನಡೆದಿತ್ತು. ದೇವಸ್ಥಾನದ ಜಮೀನನ್ನು ಕೆಲವರು ಉಳುಮೆ ಮಾಡುತ್ತಿದ್ದಾರೆ, ಅದನ್ನು ಬಿಡಿಸಿ ದೇವಸ್ಥಾನಕ್ಕೇ ಕೊಡಬೇಕು ಎಂದು ಸತೀಶ ಪಾಟೀಲ (37) ಹೋರಾಟ ನಡೆಸಿದ್ದರು.
ಇದೇ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಸತೀಶ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಗ್ರಾಮದಲ್ಲಿ 20 ವಾಹನಗಳು ಹಾಗೂ ನಾಲ್ಕು ಬಣವಿಗಳಿಗೆ ಬೆಂಕಿ ಹಚ್ಚಲಾಗಿತ್ತು.
ಕೊಲೆ, ಗಲಭೆಗೆ ಸಂಬಂಧಿಸಿದಂತೆ ಕಾಕತಿ ಠಾಣೆ ಪೊಲೀಸರು 25 ಮಂದಿಯನ್ನು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಎ.ಹರೀಶ್ ಅವರು ನಾಲ್ವರಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ವಕೀಲರಾದ ಪ್ರವೀಣ ಎ. ಕರೋಶಿ, ಮೋಹನ ಎಲ್. ಮಾವಿನಕಟ್ಟಿ, ಪರಶುರಾಮ ಎನ್. ತಾರಿಹಾಳ ಅವರು ವಾದ ಮಂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.