
ಖಾನಾಪುರ: ಪಟ್ಟಣದ ಮರಾಠಾ ಮಂಡಳ ಪದವಿ ಕಾಲೇಜು, ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ, ವಾಣಿಜ್ಯ ಶಿಕ್ಷಕರ ಮತ್ತು ಪದವೀಧರ ಸಂಘಗಳ ಸಮೂಹ ಸಂಘಗಳ ಸಹಭಾಗಿತ್ವದಲ್ಲಿ ತಾಲ್ಲೂಕಿನ ಅಶೋಕನಗರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆಯಲಾಗಿದೆ.
ಈ ಶಾಲೆಯಲ್ಲಿ ವರ್ಷ ಪೂರ್ತಿ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಸಮೂಹ ಸಂಘದ ಸಂಸ್ಥಾಪಕ ಹಾಗೂ ನಿವೃತ್ತ ಪ್ರಾಚಾರ್ಯ ಎಸ್.ಜಿ. ಸೊನ್ನದ ಹೇಳಿದರು.
ಶಾಲೆಯಲ್ಲಿ ಶುಕ್ರವಾರ ಸಂಘದ ವತಿಯಿಂದ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
‘ಅಶೋಕನಗರ ಶಾಲೆ ಪಿಎಂಶ್ರೀ ಯೋಜನೆಯಡಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಸುತ್ತಮುತ್ತ ದಟ್ಟ ಕಾನನ ಹೊಂದಿರುವ ಅಶೋಕನಗರ ಗ್ರಾಮದ ಈ ಶಾಲೆಯಲ್ಲಿ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ನೀಡಲಾಗುತ್ತಿದೆ. ಈ ಗ್ರಾಮದಲ್ಲಿ ಪ್ರೌಢಶಿಕ್ಷಣದ ಶಾಲೆ ಆರಂಭಿಸುವಂತೆ ಸಂಘದ ವತಿಯಿಂದ ಈ ಭಾಗದ ಶಾಸಕರನ್ನು ಮತ್ತು ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಜೆ.ಕೆ. ಬಾಗೇವಾಡಿ ಅಧ್ಯಕ್ಷತೆ ವಹಿಸಿದ್ದರು. ಈ ಶಾಲೆಗೆ ಪಿಎಂಶ್ರೀ ಯೋಜನೆ ಮಂಜೂರಾತಿಗಾಗಿ ಶ್ರಮಿಸಿದ ಮುಖ್ಯಾಧ್ಯಾಪಕ ಐ.ಬಿ. ವಸ್ತ್ರದ ಮತ್ತು ಮರಾಠಾ ಮಂಡಳ ಕಾಲೇಜಿನಿಂದ ಸೇವಾ ನಿವೃತ್ತಿ ಹೊಂದಿದ ಜೆ.ವಿ. ಬನೋಶಿ ಹಾಗೂ ಎನ್.ಎಸ್. ಪಾಟೀಲ ಅವರನ್ನು ಸತ್ಕರಿಸಲಾಯಿತು. ಸಸಿಗೆ ನೀರೆರೆಯುವ ಮೂಲಕ ಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು. ಶಾಲೆಯ ವಿದ್ಯಾರ್ಥಿನಿಯರ ಬಳಕೆಗಾಗಿ ಮರಾಠಾ ಮಂಡಳ ಕಾಲೇಜಿನಿಂದ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ವಿತರಿಸಲಾಯಿತು. ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಸಂತ ದೇಸಾಯಿ ಬಹುಮಾನ ವಿತರಿಸಿದರು. ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ಆಹ್ವಾನಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜೆ.ವಿ. ಬನೋಶಿ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ಸಂದೀಪ ಪಾಧ್ಯೆ ಸ್ವಾಗತಿಸಿದರು. ಐ.ಟಿ.ಬಡಿಗೇರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.