
ರಾಮದುರ್ಗ: ತಾಲ್ಲೂಕಿನ ಲಿಂಗದಾಳ ಗ್ರಾಮದ ದಲಿತರಿಗೆ ಸ್ಮಶಾನ ಇದ್ದರೂ ಸ್ಮಶಾನಕ್ಕೆ ಹೋಗಲು ದಾರಿ ಇಲ್ಲದೇ ಸಮಸ್ಯೆಯಿಂದ ಉಂಟಾಗಿದ್ದ ಬಿಗುವಿನ ವಾತಾವರಣವನ್ನು ಸಹಜ ಸ್ಥಿತಿಗೆ ಮರಳಿದೆ.
ಲಿಂಗದಾಳ ಗ್ರಾಮದ ದಲಿತ ವ್ಯಕ್ತಿಯೊಬ್ಬರು ಶುಕ್ರವಾರ ನಿಧನರಾಗಿದ್ದರು. ಶನಿವಾರ ಶವಸಂಸ್ಕಾರಕ್ಕೆಂದು ಕೇರಿಯ ಜನ ಖಾಸಗಿಯವರ ಹೊಲದೊಳಗಿಂದ ದಾಟಿ ಹೋಗುವಾಗ ಹೊಲದ ಮಾಲೀಕರು ತಕರಾರು ಮಾಡಿದ್ದರು. ಇದರಿಂದ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು, ಪಂಚಾಯಿತಿ ಅಧಿಕಾರಿಗಳು, ಪೊಲೀಸರು ಒಟ್ಟಾಗಿ ಸೇರಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಸ್ಮಶಾನಕ್ಕೆ ಹೋಗಲು ವಹಿವಾಟಿನ ದಾರಿ ಮಾತ್ರ ಇದೆ. ಹೊಲದ ಮಾಲೀಕರು ಒಪ್ಪಿಗೆ ಸೂಚಿಸಿದರೆ ಮಾತ್ರ ಹೋಗಬಹುದು. ಇಲ್ಲದಿದ್ದರೆ ಅವಕಾಶ ನೀಡುವುದಿಲ್ಲ ಎಂದು ಹೊಲದ ಮಾಲೀಕರು ತಕರಾರು ಮಾಡಿದ್ದರು.
ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ಸಿಪಿಐ ವಿನಾಯಕ ಬಡಿಗೇರ ಅವರ ಸಮಯ ಪ್ರಜ್ಞೆಯಿಂದ ಗ್ರಾಮದಲ್ಲಿ ಉಂಟಾಗಬಹುದಿದ್ದ ಸಮಸ್ಯೆನ್ನು ಸಲೀಸಾಗಿ ತಿಳಿಗೊಳಿಸಿದರು.
ಲಿಂಗದಾಳ ಗ್ರಾಮದ ಪರಿಶಿಷ್ಟರಿಗೆ ಸ್ಮಶಾನದ ಸಮಸ್ಯೆ ಇಲ್ಲ. ಸ್ಮಶಾನಕ್ಕೆ ಹೋಗಲು ದಾರಿ ಇಲ್ಲ. ಅಲ್ಲಿ ವಹಿವಾಟಿನ ದಾರಿ ಮಾತ್ರ ಇದೆ. ಅಲ್ಲಿಂದ ಹೋಗಲು ಮಾಲೀಕರನ್ನು ಪರಿಶಿಷ್ಟರು ಕೇಳಿಲ್ಲ. ಅದಕ್ಕಾಗಿ ಸಮಸ್ಯೆ ಎದುರಾಗಿತ್ತು. ಎರಡೂ ಗುಂಪಿನವರು ರಾಮದುರ್ಗಕ್ಕೆ ಕರೆಯಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ತಿಳಿಸಿದರು.
ಸ್ಮಶಾನ ಮತ್ತು ಸ್ಮಶಾನದ ದಾರಿ ಒದಗಿಕೊಡಬೇಕಿರುವುದು ತಾಲ್ಲೂಕು ದಂಡಾಧಿಕಾರಿಗಳು. ಎರಡೂ ಹೊಲಗಳಲ್ಲಿ ಒಂದಿಷ್ಟು ಜಮೀನು ಪಡೆದು ರೈತರಿಗೆ ಪರಿಹಾರ ನೀಡಬೇಕು. ಅಂದಾಗ ದಾರಿ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಸಿಪಿಐ ವಿನಾಯಕ ಬಡಿಗೇರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.