ಮೂಡಲಗಿ: ‘ರೈತರು ಸಾವಯವ ಪದ್ಧತಿಯಲ್ಲಿ ಕಬ್ಬು ಬೆಳೆಯುವುದರಿಂದ ಪರಿಸರ ಮತ್ತು ಸಮಾಜಕ್ಕೆ ಬಹುದೊಡ್ಡ ಕೊಡುಗೆಯಾಗುತ್ತದೆ’ ಎಂದು ಸಮೀರವಾಡಿ ಸಕ್ಕರೆ ಕಾರ್ಖಾನೆ ಮಾಲೀಕ ಸಮೀರ ಸೋಮೈಯಾ ಹೇಳಿದರು.
ತಾಲ್ಲೂಕಿನ ಮೂಡಲಗಿಯ ಪ್ರಗತಿಪರ ರೈತ ಬಾಳಪ್ಪ ಬಿ. ಬೆಳಕೂಡ ಅವರ ತೋಟಕ್ಕೆ ಭೇಟಿ ನೀಡಿ ಕಬ್ಬಿನ ಬೆಳೆಯಲ್ಲಿ ಅವರು ಮಾಡಿರುವ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಅವರ ತೋಟದಲ್ಲಿನ ಎರೆಹುಳ ಗೊಬ್ಬರ ತೊಟ್ಟಿಗಳು, ಬಯೋಡೈಜಿಸ್ಟ್ ಘಟಕ, ದೇಸಿ ಆಕಳು, ಎಮ್ಮೆಗಳ ಕೊಟ್ಟಿಗೆ, ಜೀವಾಮೃತ ತಯಾರಿಕೆ ವೀಕ್ಷಿಸಿದರು.
‘ರೈತ ಬಾಳಪ್ಪ ಅವರು ಈ ಹಿಂದೆ ಒಂದು ಎಕರೆಗೆ 125 ಟನ್ ಇಳುವರಿ ಪಡೆದು ದಾಖಲೆ ಮಾಡಿದ್ದರು. ಈ ಬಾರಿ ಎಕರೆಗೆ 140 ಟನ್ ಇಳುವರಿ ತೆಗೆಯುವ ಅವರ ಗುರಿ ಮತ್ತು ಪರಿಶ್ರಮ ಮೆಚ್ಚುವಂತದ್ದು’ ಎಂದರು.
‘ಬಾಳಪ್ಪ ಅವರು ನೈಸರ್ಗಿಕ ಸಂಗತಿಗಳನ್ನು ಬಳಸಿ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುತ್ತಿರುವ ಕೃಷಿ ಪದ್ದತಿಯು ಮಾದರಿಯಾಗಿದೆ. ರೈತರು ಇಂಥ ಪದ್ದತಿಯನ್ನು ಅನುಸರಿಸಿ ಕೃಷಿಯಲ್ಲಿ ಮುಂದೆ ಬರಬೇಕು’ ಎಂದು ತಿಳಿಸಿದರು.
ರೈತ ಬಾಳಪ್ಪ ಬಿ. ಬೆಳಕೂಡ ಮಾತನಾಡಿ, ‘ಶ್ರದ್ಧೆ ಮತ್ತು ಪರಿಶ್ರಮದಿಂದ ಕೃಷಿ ಮಾಡಿದರೆ ಯಶಸ್ಸು ದೊರೆಯುತ್ತದೆ. ರೈತರು ಭೂಮಿಯೊಂದಿಗೆ ಹೆಚ್ಚು ನಿಕಟವಾಗಿರಬೇಕು’ ಎಂದು ಸಲಹೆ ನೀಡಿದರು.
ಮಾಧವ ಸಮೀರ ಸೋಮೈಯಾ, ಲ್ಯಾರಿ ವಾಕರ್, ಲೀಸಾ, ಸಮೀರವಾಡಿ ಗೋದಾವರಿ ಬೈಯೋರಿಫೈನರಿ ಕಾರ್ಯನಿರ್ವಾಹಕ ನಿರ್ದೇಶಕಿ ಸಂಗೀತಾ ಶ್ರೀವಾತ್ಸವ, ಕಾರ್ಯನಿರ್ವಾಹಕ ನಿರ್ದೇಶಕ ಬಾಲಚಂದ್ರ ಭಕ್ಷಿ, ಕೆಐಎಎಆರ್ ವಿಭಾಗದ ನಿರ್ದೇಶಕ ನಂದಕುಮಾರ, ಕಬ್ಬು ವಿಭಾಗದ ಮಹಾಪ್ರಬಂಧಕ ವಿ.ಎಸ್. ಕಣಬೂರ, ವಿಶ್ವನಾಥ ಭುಜನ್ನವರ, ಸಂದೀಪನ, ಅಶೋಕ ಕುಡಚಿ, ರವಿ ಖಾನಗೌಡ್ರ, ತಾಲ್ಲೂಕು ಕೃಷಿಕ ಸಮಾಜ ಅಧ್ಯಕ್ಷ ಅಶೋಕ ಗದಾಡಿ, ಶಂಕರ ಬೆಳಕೂಡ, ಬಸವರಾಜ ಬೆಳಕೂಡ, ಪ್ರಭು ಕಡಾಡಿ, ಚಿದಾನಂದ ಕುಂದನವರ, ರಾಜು ಕಡಲಗಿ, ಭೀಮಶಿ ಹೆಬ್ಬಾಳ, ಮಲ್ಲಪ್ಪ ಕುರಬೇಟ, ಉಮೇಶ ಪಾಟೀಲ, ಈರಣ್ಣ ಬೆಳಕೂಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.