ADVERTISEMENT

ವಿದ್ಯುತ್‌ ಶುಲ್ಕ ಕಟ್ಟದಿರಲು ನೇಕಾರರು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 14:35 IST
Last Updated 9 ಜೂನ್ 2023, 14:35 IST
   

ಬೆಳಗಾವಿ: ಮಗ್ಗಗಳ ವಿದ್ಯುತ್‌ ದರ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ವಿದ್ಯುತ್‌ ಶುಲ್ಕ ಪಾವತಿಸದಿರಲು ತಾಲ್ಲೂಕಿನ ಸುಳೇಭಾವಿ, ಮಾರಿಹಾಳ, ಮೋದಗಾ, ಪಂತ ಬಾಳೇಕುಂದ್ರಿ ಮತ್ತು ಸಾಂಬ್ರಾದ ನೇಕಾರರು ತೀರ್ಮಾನಿಸಿದ್ದಾರೆ. ಈ ಸಂಬಂಧ ತಾಲ್ಲೂಕಿನ ಸುಳೇಭಾವಿಯಲ್ಲಿ ಸಭೆ ಕೂಡ ನಡೆಸಿದ್ದಾರೆ.

‘ಉಚಿತವಾಗಿ ವಿದ್ಯುತ್‌ ಕೊಡುವುದಾಗಿ ಕಾಂಗ್ರೆಸ್ ಘೋಷಿಸಿದ್ದು ಸಂತಸದ ಸಂಗತಿ. ಆದರೆ, ಮಗ್ಗಗಳಿಗೆ ಒದಗಿಸುವ ತ್ರಿಫೇಸ್‌ ವಿದ್ಯುತ್‌ ದರ ಹೆಚ್ಚಿಸಿ ನೇಕಾರರನ್ನು ಸಂಕಷ್ಟಕ್ಕೆ ತಳ್ಳಿದೆ. ಜಿಎಸ್‌ಟಿ, ಕೊರೊನಾ ಮತ್ತಿತರ ಕಾರಣಗಳಿಂದ ಮೊದಲೇ ತೊಂದರೆಗೆ ಸಿಲುಕಿದ ನಮ್ಮನ್ನು ಬೀದಿಗೆ ತಂದು ನಿಲ್ಲಿಸಿದೆ’ ಎಂದು ಮುಖಂಡ ನಾರಾಯಣ ಲೋಕರೆ ತಿಳಿಸಿದ್ದಾರೆ.

‘ತ್ರಿಫೇಸ್ ವಿದ್ಯುತ್‌ನ ಪ್ರತಿ ಎಚ್‌ಪಿಗೆ ನಿಗದಿತ ದರ ₹80 ಇತ್ತು. ಈಗ ಅದನ್ನು ₹140ಕ್ಕೆ ಹೆಚ್ಚಿಸಿದೆ. ಪ್ರತಿ ಯೂನಿಟ್‌ಗೆ ವಿಧಿಸುತ್ತಿದ್ದ ಶುಲ್ಕವನ್ನು ₹57 ಪೈಸೆಯಿಂದ ₹2.55ಕ್ಕೆ ಏರಿಸಲಾಗಿದೆ. ಇದರೊಂದಿಗೆ ತೆರಿಗೆ ಮೊತ್ತವೂ ಹೆಚ್ಚಿದೆ. ಇದನ್ನು ಖಂಡಿಸಿ ಜೂನ್‌ 12ರಂದು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಕೂಡ ನಡೆಸುತ್ತೇವೆ’ ಎಂದು ಮುಖಂಡ ಬಾಬು ವಾಗೇರಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.