ADVERTISEMENT

ಬೆಳಗಾವಿ| ಮುಂದುವರಿದ ಧಾರಾಕಾರ ಮಳೆ: ಮನೆಗಳು ಜಲಾವೃತ, ಪರದಾಟ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 13:58 IST
Last Updated 7 ಆಗಸ್ಟ್ 2019, 13:58 IST
ಬೆಳಗಾವಿಯ ಮರಾಠಾ ಕಾಲೊನಿಯು ಜಲಾವೃತವಾಗಿದ್ದ ದೃಶ್ಯ
ಬೆಳಗಾವಿಯ ಮರಾಠಾ ಕಾಲೊನಿಯು ಜಲಾವೃತವಾಗಿದ್ದ ದೃಶ್ಯ   

ಬೆಳಗಾವಿ: ನಗರದಲ್ಲಿ ಧಾರಾಕಾರ ಮಳೆ ಮುಂದುವರಿ‌ದಿರುವುದರಿಂದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಹಲವು ಬಡಾವಣೆಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿದ್ದು, ಅಲ್ಲಿನ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮರಾಠಾ ಕಾಲೊನಿ, ಕಪಿಲೇಶ್ವರ ಕಾಲೊನಿ, ಸಮರ್ಥನಗರ, ಶಾಸ್ತ್ರಿನಗರ, ತಹಶೀಲ್ದಾರ್‌ ಗಲ್ಲಿ, ಓಂಕಾರ ನಗರ, ಹಳೇ ಬೆಳೆಗಾವಿ, ಖಾಸಬಾಗ್, ಶಾಂತಿ ಬಡಾವಣೆ, ಜಕ್ಕೇರಿ ಹೊಂಡ, ವಡಗಾವಿ ನೇಕಾರ ಕಾಲೊನಿ, ಸ್ವಾಮಿ ವಿವೇಕಾನಂದ ಕಾಲೊನಿ, ಶಾಂತಿ ನಗರ, ಮಣಿಯಾರ್ ಬಡಾವಣೆ, ಗಜಾನನ ಮಹಾರಾಜ ಬಡಾವಣೆ, ಶಿವಾಜಿನಗರ, ನಾನಾವಾಡಿ, ಕಾಂಗ್ರೆಸ್‌ ರಸ್ತೆ, ಎಂ.ಜಿ. ಕಾಲೊನಿ, ಚೌಗಲೆವಾಡಿ, ಕನಕದಾಸ ಕಾಲೊನಿ, ಅಂಬೇಡ್ಕರ್‌ ನಗರ, ಜೇರಿ ಗಲ್ಲಿ, ಮಾರುತಿ ಗಲ್ಲಿ, ವಡ್ಡರ ಗಲ್ಲಿ, ಭಜಂತ್ರಿ ಗಲ್ಲಿ, ಕುರುಬರ ಗಲ್ಲಿ, ಕಾಮತ್ ಗಲ್ಲಿ, ಕಸಾಯಿ ಗಲ್ಲಿ, ಶಿವಾಜಿನಗರ ಅಸದ್‌ಖಾನ್ ಸೊಸೈಟಿ, ವೀರಭದ್ರನಗರ, ಪಂಜಿಬಾಬಾ ವೃತ್ತ ಮೊದಲಾದ ಪ್ರದೇಶಗಳು ಜಲಾವೃತಗೊಂಡಿವೆ. ಇದರಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಸಂತ್ರಸ್ತರಾದವರಿಗಾಗಿ ನಗರಪಾಲಿಕೆಯು ಇದೇ ಮೊದಲ ಬಾರಿಗೆ 8 ಕಡೆಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆದಿದೆ.

ರಸ್ತೆ ಬಂದ್:ಹೊರವಲಯದ ಬಸವನಕುಡಚಿ ಬಳಿ ಬೆಳಗಾವಿ–ಬಾಗಲಕೋಟೆ ರಸ್ತೆ ಬಳ್ಳಾರಿ ನಾಲೆ ನೀರಿನಿಂದ ಮುಳುಗಿತ್ತು. ಆ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ನೀರಿನ ಪ್ರಮಾಣ ಕಡಿಮೆ ಆಗುವವರೆಗೂ ಆ ರಸ್ತೆಯಲ್ಲಿ ಸಂಚರಿಸದಿರುವುದು ಒಳಿತು ಎಂದು ತಿಳಿಸಲಾಗಿದೆ.

ADVERTISEMENT

ಜಕ್ಕೇರಿಹೊಂಡದಲ್ಲಿ ಜಲಾವೃತಗೊಂಡಿದ್ದ ಮನೆಗಳಲ್ಲಿ ಸಿಲುಕಿದ್ದ 45 ಮಂದಿಯನ್ನು ಅಗ್ನಿಶಾಮಕ ದಳದವರು ರಕ್ಷಿಸಿದರು. ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬಲೂ‌ನ್ ಬೋಟ್‌ಗಳಲ್ಲಿ 17 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು.

ನ್ಯೂ ಗೂಡ್ಸ್‌ಶೆಡ್ ರಸ್ತೆ ಕಾಲುವೆಯಂತಾಗಿದೆ. ಕಾಂಗ್ರೆಸ್‌ ರಸ್ತೆಯ ಬಹುತೇಕ ಮನೆಗಳ ಸುತ್ತಲೂ ಮೂರ್ನಾಲ್ಕು ಅಡಿಗಳಷ್ಟು ನೀರು ನುಗ್ಗಿದೆ. ಇದರಿಂದಾಗಿ, ಅಲ್ಲಿನವರು ಹೊರಗಡೆ ಬರಲಾಗದೇ ಪರದಾಡುತ್ತಿದ್ದಾರೆ.

ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹಾಗೂ ಬಿಜೆಪಿ ಕಾರ್ಯಕರ್ತರು ಜಲಾವೃತವಾಗಿದ್ದ ಮನೆಗಳಲ್ಲಿದ್ದವರನ್ನು ಬಲೂನು ಬೋಟ್‌ಗಳ ಮೂಲಕ ಸ್ಥಳಾಂತರಿಸಿದರು

ಹಣ್ಣಿನ ಮಾರುಕಟ್ಟೆ ಜಲಾವೃತ:ವಿಶ್ವೇಶ್ವರಯ್ಯನಗರ ಜಿಲ್ಲಾಧಿಕಾರಿ ನಿವಾಸದ ಸಮೀಪ ಮರವೊಂದು ವಿದ್ಯುತ್ ಮಾರ್ಗದ ಮೇಲೆ ಬಿದ್ದಿದೆ. ಇದರಿಂದ 5 ವಿದ್ಯುತ್‌ ಕಂಬಗಳು ತುಂಡಾಗಿದ್ದು, ಆ ಪ್ರದೇಶದಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು. ಹೆಸ್ಕಾಂ ಸಿಬ್ಬಂದಿ ಮರವನ್ನು ತೆರವುಗೊಳಿಸಿ, ವಿದ್ಯುತ್‌ ಮಾರ್ಗ ದುರಸ್ತಿಪಡಿಸುವ ಕಾರ್ಯಾಚರಣೆ ಕೈಗೊಂಡರು.

ಫ್ರೂಟ್‌ ಮಾರ್ಕೆಟ್‌ನಲ್ಲಿರುವ ಮಳಿಗೆಗೆಳು ಮುಳುಗಿ ಹೋಗಿವೆ. ಧಾರವಾಡ-ಬೆಳಗಾವಿ ಬಸ್ ಸಂಚಾರ ಇದೆ. ಸರ್ವೀಸ್ ರಸ್ತೆಯಲ್ಲಿ ನೀರು ನಿಂತಿರುವುದರಿಂದ ಎಂ.ಕೆ. ಹುಬ್ಬಳ್ಳಿ, ಇಟಗಿ ಕ್ರಾಸ್, ಹಿರೇಬಾಗೇವಾಡಿ ಪ್ರಯಾಣಿಕರನ್ನು ಹೆದ್ದಾರಿಯಲ್ಲೇ ಇಳಿಸಲಾಗುತ್ತಿದೆ. ಈ ಬಸ್‌ಗಳು ಸರ್ವಿಸ್‌ ರಸ್ತೆಗಳ ಮೂಲಕ ಸಾಗಿ ಬಸ್ ನಿಲ್ದಾಣಗಳಿಗೆ ಹೋಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.