ಹುಕ್ಕೇರಿ: ಯುವಜನತೆ ವಿವಿಧ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆ, ಪ್ರೇಮ ಪ್ರಕರಣದ ಹೆಚ್ಚಳ, ಪೊಕ್ಸೋ ಪ್ರಕರಣಗಳು ಯುವಜನತೆಯನ್ನು ದಾರಿತಪ್ಪಿಸುತ್ತಿವೆ ಎಂದು ಶಕ್ತಿಸದನ ಮಹಿಳಾ ಪುನರ್ವಸತಿ ಕೇಂದ್ರದ ಯೋಜನಾ ನಿರ್ದೇಶಕಿ ಸುರೇಖಾ ಪಾಟೀಲ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಉಳ್ಳಾಗಡ್ಡಿ ಖಾನಾಪೂರದ ಡಿ.ಬಿ.ಹೆಬ್ಬಾಳಿ ಸರ್ಕಾರಿ ಪದವಿ ಪೂರ್ವ ಕಾಲೇಜನಲ್ಲಿ ಕಿಶೋರಿಯರಿಗಾಗಿ ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಕಲ್ಯಾಣ ಸಂಸ್ಥೆ, ಹಾಗೂ ವಿಹಾನ ಸಂಸ್ಥೆಯಿಂದ ಬುಧವಾರ ಆಯೋಜಿಸಿದ್ದ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಕಿಶೋರಿಯರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳ್ಳಸಾಗಾಣಿಕೆ, ಬಿಕ್ಷಾಟಣೆಗಾಗಿ ಮುಗ್ಧ ಹೆಣ್ಣು ಮಕ್ಕಳನ್ನು ಮಾರಾಟ ಮಾಡುವ ಪ್ರಕರಣಗಳು ತಡೆಯುವ ನಿಟ್ಟಿನಲ್ಲಿ ಕಿಶೋರಿಯರು ಎಚ್ಚರದಿಂದರಬೇಕು. ಲೈಂಗಿಕ ಶೋಷಣೆ, ಅಂಗಾಂಗ ವ್ಯಾಪಾರ ತಡೆಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಮಹಿಳೆಯರು ಆಮಿಷಗಳಿಗೆ ಬಲಿಯಾಗಿ ಮೋಸ ಹೋಗುವುದನ್ನು ತಡೆಯಬೇಕು ಎಂದರು.
ಯಮಕನಮರಡಿ ಠಾಣೆಯ ಪಿ.ಎಸ್.ಐ. ಎಂ.ಕೆ.ಮುಗಳಿ ಮಾತನಾಡಿ, ಇಲಾಖೆಯ ಮೂಲಕ ಮಹಿಳೆಯರ ಸುರಕ್ಷತೆ, ಸೈಬರ್ ಅಪರಾಧಗಳು, ಡಿಜಿಟಲ್ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ನಿರಂತರ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚುತ್ತಿವೆ. ಯುವಜನರು ಹೆಚ್ಚಿನ ಕಾಳಜಿವಹಿಸಿ ಸುರಕ್ಷಿತವಾಗಿರಬೇಕು ಎಂದು ಸಲಹೆ ನೀಡಿದರು.
ಎಸಿಡಿಪಿಒ ಮಹಾದೇವ ಕೋಳಿ ಮಾತನಾಡಿ, ಬಾಲ್ಯವಿವಾಹ ಪ್ರಕರಣ ತಡೆಯುವಲ್ಲಿ ಸರ್ವರ ಸಹಕಾರ ಅಗತ್ಯ. ಸ್ವಯಂ ಸೇವಾ ಸಂಸ್ಥೆಗಳು, ಸರ್ಕಾರ, ಚುನಾಯಿತ ಪ್ರತಿನಿಧಿಗಳ ಸಹಕಾರದಿಂದ ಸಮಸ್ಯೆ ಬಗೆಹರಿಸಬೇಕಾಗಿದೆ ಎಂದರು.
ಪ್ರಾಚಾರ್ಯ ಎಂ.ಎಂ.ಮಗದುಮ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ಮಹಾವೀರ ಪಣಕಿ, ಸುಭಾಷ ಹೆಬ್ಬಾಳಿ, ವೈಜಯಂತಿ ಚೌಗಲಾ, ರೇಖಾ ಬೇನವಾಡ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.
ಉಪನ್ಯಾಸಕಿ ದಾನಮ್ಮ ಕೊಣ್ಣೂರ್ ಸ್ವಾಗತಿಸಿ ನಿರೂಪಿಸಿದರು. ಶಿವಾನಂದ ಮಠಪತಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.