ಬೆಳಗಾವಿ: ಐಎಂಎ (ಐ ಮಾನಿಟರಿ ಅಡ್ವೆಸರಿ) ಕಂಪನಿಯಲ್ಲಿ ಹೂಡಿಕೆ ಮಾಡಿ ವಂಚನೆಗೊಳಗಾಗಿರುವ ಇಲ್ಲಿನ ಗ್ರಾಹಕರು ತಮಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಶುಕ್ರವಾರ ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ಕುಮಾರ್ ಅವರನ್ನು ಭೇಟಿಯಾದರು. ‘ಬೆಂಗಳೂರಿನಲ್ಲಿ ವಂಚನೆಗೆ ಒಳಗಾದವರಿಂದ ದೂರು ಸ್ವೀಕರಿಸುತ್ತಿರುವ ಅರ್ಜಿ ನಮೂನೆಯನ್ನು ಇಲ್ಲಿಯೂ ಸಿದ್ಧಪಡಿಸಲಾಗುವುದು. ಆ ನಮೂನೆಯಲ್ಲಿ ಜೂನ್ 15ರಿಂದ ದೂರು ಪಡೆಯಲಾಗುವುದು’ ಎಂದು ಆಯುಕ್ತರು ತಿಳಿಸಿದರು.
‘ತಮಗೂ ಐಎಂಎನಿಂದ ವಂಚನೆಯಾಗಿದೆ 30ಕ್ಕೂ ಹೆಚ್ಚು ಮಂದಿಗೆ ನನ್ನನ್ನು ಭೇಟಿಯಾಗಿದ್ದರು. ಅವರಿಂದ ಏಕರೂಪದ ನಮೂನೆಯಲ್ಲಿ ದೂರು ಸ್ವೀಕರಿಸಲಾಗುವುದು. ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ಆಯುಕ್ತರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಚಿನ್ನಾಭರಣದ ಜೊತೆಗೆ ಹೆಚ್ಚಿನ ಬಡ್ಡಿಯ ಆಸೆ ತೋರಿಸಿದ್ದ ಐಎಂಎ ಕಂಪನಿಯ ಮಾಲೀಕ ಮನ್ಸೂರ್ ನೂರಾರು ಕೋಟಿ ಹಣವನ್ನು ಸಂಗ್ರಹಿಸಿದ್ದರು. ಆರಂಭದಲ್ಲಿ ಶೇ 4ರಷ್ಟು ಬಡ್ಡಿ ನೀಡಿದ್ದರು. ಕ್ರಮೇಣ ಈ ಪ್ರಮಾಣ ಶೇ 3, ಶೇ 2 ಹಾಗೂ ಶೇ 1ಕ್ಕೆ ಇಳಿದಿತ್ತು. ಈಚೆಗೆ ಮೊಬೈಲ್ ಫೋನ್ಗಳಿಗೆ ಸಂದೇಶ ಬಂದಿತ್ತಾದರೂ ಹಣ ಸಂದಾಯವಾಗಿರಲಿಲ್ಲ. ಹಣ ಹೂಡಿಕೆ ಮಾಡುವಂತೆ ಮೌಲ್ವಿಗಳಿಂದ ನಮಗೆ ಹೇಳಿಸಿದ್ದ ಮನ್ಸೂರ್, ಈಗ ಪರಾರಿಯಾಗಿದ್ದಾರೆ. ಇದರಿಂದ ನಮಗೆ ವಂಚನೆಯಾಗಿದೆ’ ಎಂದು ಗ್ರಾಹಕರು ಆಯುಕ್ತರ ಎದುರು ಅಳಲು ತೋಡಿಕೊಂಡರು.
‘ಹೀಗೆ ಇಲ್ಲಿಯೂ ನೂರಾರು ಮಂದಿ ಹೂಡಿಕೆ ಮಾಡಿದ್ದಾರೆ. ಬಹುತೇಕರು ಮುಸ್ಲಿಮರೇ ಆಗಿದ್ದೇವೆ. ಕಷ್ಟಪಟ್ಟು ದುಡಿದ ಹಣವನ್ನು ಅಲ್ಲಿ ಹೂಡಿಕೆ ಮಾಡಿದ್ದೆವು. ಹಣ ಸಿಗದೇ ಕಂಗಾಲಾಗಿದ್ದೇವೆ’ ಎಂದು ತಿಳಿಸಿದರು.
ಇದಕ್ಕೂ ಮುನ್ನ, ಇಲ್ಲಿನ ಅಂಜುಮನ್ ಸಭಾಂಗಣದಲ್ಲಿ ಸಭೆ ಸೇರಿದ ಈ ಗ್ರಾಹಕರು ಚರ್ಚಿಸಿದರು. 300ಕ್ಕೂ ಹೆಚ್ಚು ಜನರು ಮಾಡಿದ್ದು, ₹1ಲಕ್ಷದಿಂದ ₹10 ಲಕ್ಷದವರೆಗೂ ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಎಷ್ಟು ಮಂದಿ ವಂಚನೆಗೆ ಒಳಗಾಗಿದ್ದಾರೆ ಎನ್ನುವುದು,ಪೊಲೀಸರು ದೂರು ಸ್ವೀಕಾರ ಪ್ರಕ್ರಿಯೆ ಆರಂಭಿಸಿದ ನಂತರವಷ್ಟೇ ಗೊತ್ತಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.