ತೆಲಸಂಗ: ‘ಕೋವಿಡ್–19 ನಿಯಮ ಪಾಲಿಸುವಲ್ಲಿ ದಕ್ಷತೆ ಮೆರೆದಿರುವ ಎಲ್ಲ ಉಪನ್ಯಾಸಕರು, ವಾರ್ಷಿಕ ಪರೀಕ್ಷೆ ತಯಾರಿಯಲ್ಲೂ ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡಬೇಕು’ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಯು ಮಹಾದೇವ ಎಂ. ಕಾಂಬಳೆ ತಿಳಿಸಿದರು.
ಗ್ರಾಮದ ಬಿವಿವಿ ಸಂಘದ ಪಿಯು ಕಾಲೇಜಿಗೆ ಶನಿವಾರ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.
‘ಕೋವಿಡ್ದಿಂದಾಗಿ ಮಕ್ಕಳ ಶಿಕ್ಷಣ ಬಹಳಷ್ಟು ಕುಂಠಿತವಾಗಿದೆ. ಸ್ಮಾರ್ಟ್ ಮೊಬೈಲ್ ಫೋನ್ ಖರೀದಿಸಲಾಗದ ಕೆಲ ಮಕ್ಕಳು ಆನ್ಲೈನ್ ತರಗತಿಗಳಿಗೂ ಹಾಜರಾಗಿಲ್ಲ. ಹೀಗಾಗಿ ಕಡಿಮೆ ಅವಧಿಯಲ್ಲಿ ಪರೀಕ್ಷೆಗೆ ಅವರನ್ನು ಸಜ್ಜುಗೊಳಿಸಬೇಕಾದ ಸವಾಲು ಉಪನ್ಯಾಸಕರ ಮುಂದಿದೆ. ಪರೀಕ್ಷಾ ಪದ್ಧತಿ ಬದಲಾಗಿರುವುದರಿಂದ ನೂತನ ಮಾದರಿ ಪತ್ರಿಕೆಯ ಪ್ರಕಾರ ಸಿದ್ಧತೆ ನಡೆಸಬೇಕು’ ಎಂದು ಸಲಹೆ ನೀಡಿದರು.
‘ಕೋವಿಡ್ ಬಗ್ಗೆ ನಿರ್ಲಕ್ಷ ವಹಿಸಬಾರದು. ಪುಸ್ತಕ ವಿತರಣೆ, ಲೆಕ್ಕಪತ್ರದ ಮಾಹಿತಿ ಬಗ್ಗೆ ಸ್ಪಷ್ಟ ದಾಖಲಾತಿಗಳು ನಿಯಮಾವಳಿ ಪ್ರಕಾರವೇ ಇರಬೇಕು. ಇಲ್ಲದಿದ್ದಲ್ಲಿ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರಾಚಾರ್ಯ ಡಿ.ಎಂ. ಘೋರ್ಪಡೆ, ಉಪನ್ಯಾಸಕರಾದ ಬಿ.ಜಿ. ಸಾರ್ವಾಡ, ಸುರೇಶ ಸನಗೊಂಡ, ಎಂ.ಎಸ್. ಯಚ್ಚಿ, ಎಸ್.ಡಿ. ಅರ್ದಾಊರ, ಮಲ್ಲು ಹೊನಕಾಂಬಳೆ, ಎಸ್.ಆರ್. ಮುಂಜಿ, ಪಿ.ಬಿ. ಸಾರ್ವಾಡ, ಆರಾಧನಾ, ಅಜಿಲ ಹಿರೇಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.