ADVERTISEMENT

ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ರೇಣುಕಾಚಾರ್ಯರು: ಹುಕ್ಕೇರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 7:31 IST
Last Updated 2 ಮಾರ್ಚ್ 2026, 7:31 IST
ಬೆಳಗಾವಿಯಲ್ಲಿ ರೇಣುಕಾಚಾರ್ಯರ ಜಯಂತಿ ಅಂಗವಾಗಿ ನಡೆದ ಮೆರವಣಿಗೆಗೆ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಗುರುಸಿದ್ಧ ಸ್ವಾಮೀಜಿ ಚಾಲನೆ ಕೊಟ್ಟರು
ಬೆಳಗಾವಿಯಲ್ಲಿ ರೇಣುಕಾಚಾರ್ಯರ ಜಯಂತಿ ಅಂಗವಾಗಿ ನಡೆದ ಮೆರವಣಿಗೆಗೆ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಗುರುಸಿದ್ಧ ಸ್ವಾಮೀಜಿ ಚಾಲನೆ ಕೊಟ್ಟರು   

ಬೆಳಗಾವಿ: ‘ಜಗದ್ಗುರು ರೇಣುಕಾಚಾರ್ಯರು ಒಂದೇ ಜಾತಿಗೆ ಸೀಮಿತರಾಗದೆ, ಎಲ್ಲ ಸಮುದಾಯದವರನ್ನು ಒಗ್ಗೂಡಿಸಿದರು. ಜಾತಿ, ವರ್ಣ ಭೇದವಿಲ್ಲದೆ, ಭಕ್ತಿಮಾರ್ಗ ಸಾರಿದ ಶ್ರೇಯ ಅವರಿಗೆ ಸಲ್ಲುತ್ತದೆ’ ಎಂದು ಹುಕ್ಕೇರಿಯ ಗುರುಶಾಂತೇಶ್ವರ ಸಂಸ್ಥಾನಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಹಿತಿ ಗುರುದೇವಿ ಹುಲೆಪ್ಪನವರಮಠ, ‘ರೇಣುಕಾಚಾರ್ಯರು ಎಲ್ಲ ಸಮುದಾಯದವರನ್ನು ಸೇರಿಸಿಕೊಂಡು, ಮಠಗಳನ್ನು ಸ್ಥಾಪಿಸಿದರು. ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದರು. ಅವರು ಉತ್ತಮವಾದ ಧಾರ್ಮಿಕ ಹೆಜ್ಜೆಗುರುತು ಇರಿಸಿಹೋಗಿದ್ದಾರೆ. ಅವರ ಹೆಜ್ಜೆಗಳನ್ನು ನಾವು ಅನುಸರಿಸುತ್ತ ಮುಂದೆಸಾಗಬೇಕಿದೆ’ ಎಂದು ತಿಳಿಸಿದರು.

ADVERTISEMENT

ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ‘ಹಿಂದಿನ ಕಾಲದಲ್ಲಿ ಮಹಾನ್‌ಪುರುಷರು ಸಮಾಜದ ಉನ್ನತಿಗಾಗಿ ಶ್ರಮಿಸಿದ್ದಾರೆ. ಸಮಾನತೆ, ಮನುಕುಲದ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಡಿ ಇರಿಸಿದ್ದಾರೆ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವು ಸಾಗಬೇಕಿದೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ರೇಣುಕಾಚಾರ್ಯರ ಜಯಂತಿ ಆಚರಣೆ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರಯ್ಯ ಸವಡಿ, ಮುಖಂಡರಾದ ರೋಹನ ಜುವಳಿ, ಶ್ರೀಶೈಲ ಮಠದ, ವಿ.ಜಿ.ನೀರಲಗಿಮಠ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ, ರಾಣಿ ಚನ್ನಮ್ಮನ ವೃತ್ತದಿಂದ ಕುಮಾರ ಗಂಧರ್ವ ರಂಗಮಂದಿರದವರೆಗೆ ನಡೆದ ಭವ್ಯ ಮೆರವಣಿಗೆಗೆ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೆಳಗಾವಿಯ ಕಾರಂಜಿಮಠದ ಗುರುಸಿದ್ಧ  ಸ್ವಾಮೀಜಿ ಚಾಲನೆ ಕೊಟ್ಟರು.

‘ಜಗದ್ಗುರು ರೇಣುಕಾಚಾರ್ಯ ಸದ್ಭಾವನಾ ಪ್ರಶಸ್ತಿ’ ಪ್ರದಾನ

ರೇಣುಕರು ಸ್ಥಾಪಿಸಿದ ವೀರಶೈವ ಧರ್ಮದ ತತ್ವಗಳು ಸಾರ್ವಕಾಲಿಕ. ವೀರಶೈವ ಧರ್ಮವು ಮಾನವನ ಕಲ್ಯಾಣಕ್ಕೆ ಶ್ರಮಿಸಿದ ಧರ್ಮ. ಹಾಗಾಗಿ ಮಾನವ ಸಂತತಿ ಇರುವವರೆಗೆ ಧರ್ಮಕ್ಕೆ ಅಳಿವಿಲ್ಲ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಪವನ್ ಕತ್ತಿ ಹೇಳಿದರು.

ಭಾನುವಾರ ತಾಲ್ಲೂಕು ಆಡಳಿತ ಮತ್ತು ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಿತಿ ಹಾಗು ತಾಲ್ಲೂಕು ವೀರಶೈವ ಸಮಾಜದ ವತಿಯಿಂದ ಹಮ್ಮಿಕೊಂಡ ರೇಣುಕಾಚಾರ್ಯ ಜಯಂತಿಯಂದು ಶ್ರೀರಂಗಪಟ್ಟಣದ ಚಂದ್ರವಣ ಆಶ್ರಮದ (ಬೇಬಿ ಮಠ) ಡಾ.ತ್ರೀನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅವರಿಗೆ ‘ಜಗದ್ಗುರು ರೇಣುಕಾಚಾರ್ಯ ಸದ್ಭಾವಣಾ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ತ್ರೀನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಸಂಸ್ಕಾರ ಕೊಟ್ಟದ್ದು ವೀರಶೈವ ಧರ್ಮ. ಲಿಂಗ ಕಟ್ಟಿಕೊಂಡು ಎಲ್ಲಿಬೇಕಲ್ಲಿ ಸ್ವತಂತ್ರದಿಂದ ನಿರ್ಭಯವಾಗಿ ತಿರುಗಾಡಲು ಮನುಷ್ಯರಿಗೆ ಅವಕಾಶ ಕೊಟ್ಟಿದ್ದೆ ನಮ್ಮ ಧರ್ಮ ಎಂದರು.

ಮಠಾಧ್ಯಕ್ಷ ಚಂದ್ರಶೇಖರ್ ಸ್ವಾಮೀಜಿ ಮಾತನಾಡಿ, ‘ಜಲಯೋಗದಲ್ಲಿ ವಿಶ್ವದಾಖಲೆ ಬರೆದ’ಪೂಜ್ಯರಿಗೆ ಪ್ರಶಸ್ತಿ ಪ್ರದಾನ ಮಠದಿಂದ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ತಹಶೀಲ್ದಾರ್ ಬಲರಾಮ ಕಟ್ಟಿಮನಿ ರೇಣುಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಬಿಇಒ ಪ್ರಭಾವತಿ ಪಾಟೀಲ್, ಕೋಚರಿಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸೂರ್ಯಕಾಂತ ನಾಯಿಕ ಮಾತನಾಡಿದರು.ಯರನಾಳದ ಗುರು ಬ್ರಹ್ಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸತ್ಕಾರ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತುಮಕೂರು ಜಿಲ್ಲಾ ಶಿರಾ ತಾಲ್ಲೂಕಿನ ಯಲಿಯೂರಿನ ಬಸವರಾಜ ಗುರೂಜಿ, ವೈದಿಕ ಪಾಠಶಾಲೆ ಪ್ರಾಚಾರ್ಯ ಸಂಪತ್ ಕುಮಾರ ಶಾಸ್ತ್ರೀಜಿ, ಯರನಾಳದ ಮುಕುಂದ ಮಠದ ಮತ್ತು ಕೋಚರಿಯ ಗೀತಾಂಜಲಿ ಸೂರ್ಯಕಾಂತ ನಾಯಿಕ ದಂಪತಿತಯನ್ನು  ಸತ್ಕರಿಸಲಾಯಿತು.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಸಮಾಜದ ಮುಖಂಡರಾದ ಶೀತಲ್ ಬ್ಯಾಳಿ, ಪ್ರಭುಗೌಡ ವಂಟಮೂರಿ, ಸುಭಾಸ ನಾಯಿಕ, ಬಸವರಾಜ ಗಂಗನ್ನವರ, ಸುರೇಶ್ ಜಿನರಾಳಿ, ಚನ್ನಪ್ಪ ಗಜಬರ್, ಸಿದ್ಧಲಿಂಗಯ್ಯ ಹಿರೇಮಠ, ಶಿವಮೊಗ್ಗಿಮಠ, ಸಿಡಿಪಿಒ ಹೊಳೆಪ್ಪ ಎಚ್, ಉಪತಹಶೀಲ್ದಾರ್ ಎನ್.ಆರ್.ಪಾಟೀಲ್ ಸೇರಿದಂತೆ ಗಣ್ಯರು, ವೇದಪಟುಗಳು ಭಾಗವಹಿಸಿದ್ದರು. ಶಿಕ್ಷಕಿ ಶಿವಲೀಲಾ ಗವಿಮಠ ಸ್ವಾಗತಿಸಿ ನಿರೂಪಿಸಿದರು. ಸುರೇಶ್ ಜಿನರಾಳ ವಂದಿಸಿದರು.

ಭಾವಚಿತ್ರಕ್ಕೆ ಪೂಜೆ

ಮೂಡಲಗಿ ತಾಲ್ಲೂಕಿನ ಕಾಮನಕಟ್ಟಿ ಗ್ರಾಮ ಪಂಚಾಯತಿಯಲ್ಲಿ ರೇಣುಕಾಚಾರ್ಯರ ಜಯಂತಿ ಆಚರಿಸಿದರು.

ರೇಣುಕಾಚಾರ್ಯರ ಸಮಾಜ ಸೇವಾ ಸಂಘ ಅಧ್ಯಕ್ಷ ನಿಂಗಯ್ಯ ಹಿರೇಮಠ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದದರು. ಪಂಚಾಯಿತಿ ಸಿಬ್ಬಂದಿ ಆನಂದ ಕೋಟಗಿ, ಕಲ್ಲೋಳೆಪ್ಪ ಭಜಂತ್ರಿ, ಮಧುಮತಿ ಉದಪುಡಿ, ಜಂಗಮ ಸಮಾಜದ ಅಶೋಕ ಮಹಾಲಿಂಗಪೂರ, ಚರಂತಯ್ಯ ಮಳ್ಳಿಮಠ, ಗುರುಪಾದಯ್ಯ ತುಪ್ಪದ, ರಾಜು ಚಟ್ಟಿಮಠ ,ಮಲ್ಲಯ್ಯ ಅಂಬಲಿಮಠ, ರೆವಯ್ಯ ಕಂಬಾಳಿಮಠ, ನಿಂಗಯ್ಯ ಹಿರೇಮಠ, ಬಸಯ್ಯ ಹಿರೇಮಠ, ಗುರುಬಸಯ್ಯ ತುಪ್ಪದ, ಈರಯ್ಯ ಇಭೂತಿ, ಮಂಜು ಗೋಡಚಿ, ಶಿವು ಗಣಾಚಾರಿ, ಬಸವರಾಜ ಶಹಾಪುರಮಠ ಇದ್ದರು.

‘ಅಪರೂಪದ ಶಿವಯೋಗಿ’

ಬೈಲಹೊಂಗಲ: 'ರೇಣುಕಾಚಾರ್ಯರು ಜಾತಿ ಧರ್ಮ ಭೇದವಿಲ್ಲದೆ ಸಮಾಜ ಸೇವೆ ಸಲ್ಲಿಸಿದ ಅಪರೂಪದ ಶಿವಯೋಗಿಗಳು. ಅವರು ಬೋಧಿಸಿದ ಷಟಸ್ಥಳ ತತ್ವ ಅಷ್ಟಾವರ್ಣ ಪಂಚಾಚಾರಗಳ ಅರ್ಥವನ್ನು ತಿಳಿದು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ' ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಭಾನುವಾರ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಜಗದ್ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಮೂರುಸಾವಿರಮಠದ ಪೀಠಾಧಿಪತಿ‌ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದರು. ಈ ವೇಳೆ ಜಗದ್ಗುರು ರೇಣುಕಾಚಾರ್ಯರ ಮಂದಿರ ನಿರ್ಮಾಣಕ್ಕೆ ಸಮಾಜ ಭಾಂದವರು ಬೇಡಿಕೆ ಸಲ್ಲಿಸಿದರು. ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಡಾ. ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಪೂಜೆ ನೆರವೇರಿಸಿಕೊಟ್ಟರು. ಮಾಜಿ ಶಾಸಕ ಮಹಾಂತೇಶ ದೊಡಗೌಡರ ಡಿವೈಎಸ್‌ಪಿ ಡಾ. ವೀರಯ್ಯ ಹಿರೇಮಠ ತಹಶೀಲ್ದಾರ ಎಚ್.ಎನ್. ಶಿರಹಟ್ಟಿ ಜಂಗಮ ಸಮಾಜ ತಾಲ್ಲೂಕು ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಮುಖಂಡರಾದ ಸುನೀಲ ಸೊಪ್ಪಿಮಠ ಸೋಮನಾಥ ಸೊಪ್ಪಿಮಠ ಮಹಾಂತೇಶ ಮತ್ತಿಕೊಪ್ಪ ನಾನಾಸಾಹೇಬ ಪಾಟೀಲ ಗುರು ಮೆಟಗುಡ್ಡ ಬಿ.ಬಿ.ಗಣಾಚಾರಿ ಉಮೇಶ ಹಿರೇಮಠ ಶ್ರೀಶೈಲ ಯಡಳ್ಳಿ ಮಡಿವಾಳಪ್ಪ ಹೋಟಿ ಸೇರಿದಂತೆ ಸಮಾಜದ ಭಾಂದವರು ಇದ್ದರು. ಕಾರ್ಯಕ್ರಮ ಅಂಗವಾಗಿ ಸಾರ್ವಜನಿಕರಿಗೆ ಅಲ್ಪೋಪಹಾರ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.