ಬೆಳಗಾವಿ: ‘ಯಾವುದೇ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಸಂಘಟನೆಗಳು ಕಾರ್ಯೋನ್ಮುಖವಾಗಬೇಕು’ ಭರತೇಶ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಹಾಗೂ ಜೈನ ಸಮಾಜದ ಮುಖಂಡ ವಿನೋದ ದೊಡ್ಡಣ್ಣವರ ಹೇಳಿದರು.
ಇಲ್ಲಿನ ಭರತೇಶ ಶಿಕ್ಷಣ ಸಂಸ್ಥೆಯಲ್ಲಿ ಅಖಿಲ ಕರ್ನಾಟಕ ಜೈನ ಅಲ್ಪಸಂಖ್ಯಾತ ನೌಕರರ ಸಂಘದ ಪ್ರಥಮ ಸಮಾವೇಶ ನಡೆಸುವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಸಂಘಟನೆಯಿಂದ ಸಮಾಜ ಬೆಳೆಯುತ್ತದೆ. ವ್ಯಕ್ತಿಗಳು ಹಾಗೂ ಇಲಾಖೆಗಳ ಪರಿಚಯ, ಸರ್ಕಾರದ ಯೋಜನೆಗಳು, ಸಮಾಜದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳು, ಬೆಳವಣಿಗೆ ಮೊದಲಾದವುಗಳನ್ನು ಹಂಚಿಕೊಳ್ಳಬಹುದು. ಸಂಘಟನೆ ಸಮಾಜದ ಶಕ್ತಿಯಾಗಿರುತ್ತದೆ’ ಎಂದರು.
ಸಂಘದ ಅಧ್ಯಕ್ಷ ಅಜಿತಕುಮಾರ ಮುರುಗುಂಡೆ ಮಾತನಾಡಿ, ‘ಜೈನ ಸಮಾಜ ಚಿಕ್ಕದಾಗಿದ್ದು, ಎಲ್ಲ ಕಡೆ ವಿಸ್ತರಿಸಿಕೊಂಡಿದೆ. ಜೈನ ಸಮಾಜ ಒಗ್ಗೂಡಿಸಲು ಮತ್ತು ವಿವಿಧ ಘಟಕಗಳನ್ನು ಒಂದೇ ವೇದಿಕೆಯಡಿ ತರುವ ನಿಟ್ಟಿನಲ್ಲಿ ಸಂಘ ಹುಟ್ಟು ಹಾಕಲಾಗುತ್ತಿದೆ. ಸಮಾಜದ ಕೃಷಿಕರು, ವಿದ್ಯಾರ್ಥಿಗಳು, ಮಹಿಳೆಯರು, ಧಾರ್ಮಿಕ ಚಟುವಟಿಕೆಗಳು, ಶಿಕ್ಷಣ, ಸಾಹಿತ್ಯ, ಕಲೆ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ’ ಎಂದು ಮಾಹಿತಿ ನೀಡಿದರು.
‘2 ವರ್ಷಗಳಿಂದ ಈ ಸಂಘಟನೆ ಪ್ರಾರಂಭಿಸಲು ಪ್ರಯತ್ನಿಸಲಾಗುತ್ತಿತ್ತು. ಶ್ರವಣಬೆಳಗೊಳದ ಮಸ್ತಕಾಭಿಷೇಕ ಮತ್ತು ಚುನಾವಣೆಗಳು ಬಂದ ಹಿನ್ನೆಲೆಯಲ್ಲಿ ಕಾರ್ಯಾರಂಭ ತಡವಾಗಿದೆ. ಆ. 11ರಂದು ಧರ್ಮನಾಥ ಭವನದಲ್ಲಿ ಪ್ರಥಮ ಸಮಾವೇಶ ನಡೆಸಲಾಗುವುದು. ಇದಕ್ಕೆ ಸಮಾಜದವರು ನೆರವಾಗಬೇಕು. ಸದಸ್ಯರಾಗಲು ಬಯಸುವವರು ಮೊ: 9986135406 ಸಂಪರ್ಕಿಸಬಹುದು’ ಎಂದು ತಿಳಿಸಿದರು.
ಜೈನ ಶಿಕ್ಷಕರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಸಾತಪ್ಪ ಗೊಂಗಡಿ, ಮುಖಂಡರಾದ ಡಾ.ಎ.ಆರ್. ರೊಟ್ಟಿ, ನಾಗರಾಜ ಮರೆಣ್ಣವರ, ಅನಿಲ ಇರಾಜೆ, ಕುಂತಿನಾಥ ಕಲಮನಿ ಮಾತನಾಡಿದರು. ಡಾ.ಭರತ ಅಲಸಂದಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.