ADVERTISEMENT

ಹಾರೂಗೇರಿ | ಜೈನ ನಿಗಮ ಸ್ಥಾಪನೆ ಚರ್ಚೆ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 2:24 IST
Last Updated 22 ಜುಲೈ 2025, 2:24 IST
<div class="paragraphs"><p>ಹಾರೂಗೇರಿಯಲ್ಲಿ ಸೋಮವಾರ ದಕ್ಷಿಣ ಭಾರತ ಜೈನ ಸಭಾ ಅಧಿವೇಶನವನ್ನು ಸಚಿವ ಡಿ.ಸುಧಾಕರ ಉದ್ಘಾಟಿಸಿದರು</p></div>

ಹಾರೂಗೇರಿಯಲ್ಲಿ ಸೋಮವಾರ ದಕ್ಷಿಣ ಭಾರತ ಜೈನ ಸಭಾ ಅಧಿವೇಶನವನ್ನು ಸಚಿವ ಡಿ.ಸುಧಾಕರ ಉದ್ಘಾಟಿಸಿದರು

   

ಹಾರೂಗೇರಿ: ‘ರಾಜ್ಯ ಸರ್ಕಾರವು ಜೈನ ಸಮಾಜದ ಬಗ್ಗೆ ಕಾಳಜಿ ಹೊಂದಿದ್ದು, ಜೈನ ನಿಗಮ ಸ್ಥಾಪನೆಗಾಗಿ ಮುಖ್ಯಮಂತ್ರಿ ಜೊತೆ ಚರ್ಚಿಸುವೆ’ ಎಂದು ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.

ರಾಯಬಾಗ ತಾಲ್ಲೂಕಿನ ಹಾರೂಗೇರಿ ಪಟ್ಟಣದಲ್ಲಿ ಸೋಮವಾರ ನಡೆದ ದಕ್ಷಿಣ ಭಾರತ ಜೈನ ಸಭೆಯ 103ನೇ ಸಮಾವೇಶದಲ್ಲಿ ಮಾತನಾಡಿದ ಅವರು, ‘ದಕ್ಷಿಣ ಭಾರತ ಜೈನ ಸಭೆಯು ಸಂಸ್ಕೃತಿ, ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮಾಡಿದ ಸಾಧನೆ ಗಮನಾರ್ಹ’ ಎಂದರು.

ADVERTISEMENT

ಸಚಿವ ಡಿ.ಸುಧಾಕರ್ ಮಾತನಾಡಿ, ‘ರಾಜ್ಯದಲ್ಲಿ ಜೈನರು ಅಲ್ಪಸಂಖ್ಯಾತರಾಗಿದ್ದಾರೆ. ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ನಿಗಮ ಅಗತ್ಯ. ಸರ್ಕಾರವು ಅದರ ಬಗ್ಗೆ ಸಕಾರಾತ್ಮಕವಾಗಿದೆ. ಸಮುದಾಯದ ಅಭಿವೃದ್ಧಿಗೆ ನಾವು ಅನುದಾನ ನೀಡಿ ನಿಗಮ ಸ್ಥಾಪಿಸಲು ಶೀಘ್ರವೇ ಪ್ರಯತ್ನಿಸುತ್ತೇವೆ’ ಎಂದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ‘ಸಮಾಜದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನ– ಮಾನ ದೊರಕಿಸಿ ಕೊಡುವ ನಿಟ್ಟಿನಲ್ಲಿ ದಕ್ಷಿಣ ಭಾರತ ಮಹಿಳಾ ಪರಿಷತ್ ಮತ್ತು ವೀರ ಮಹಿಳಾ ಪರಿಷತ್‌ಗಳನ್ನು ಸ್ಥಾಪಿಸಿದ, ದಕ್ಷಿಣ ಭಾರತ ಜೈನ ಸಭೆಯ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.

ನಾಂದಣಿಯ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹಾಗೂ ಕೊಲ್ಹಾಪುರದ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಶಾಸಕರಾದ ದುರ್ಯೋಧನ ಐಹೊಳೆ, ರಾಜೇಂದ್ರ ಪಾಟೀಲ (ಯಡ್ರಾವಕರ್), ಮಾಜಿ ಶಾಸಕರಾದ ವಿವೇಕರಾವ ಪಾಟೀಲ, ಶ್ರೀಮಂತ ಪಾಟೀಲ, ಮಹೇಶ ಕುಮಠೊಳ್ಳಿ, ಸುಭಾಷ ಜೋಶಿ, ಮಾಜಿ ಸಂಸದರಾದ ರಮೇಶ ಕತ್ತಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಸಚಿವ ವೀರಕುಮಾರ ಪಾಟೀಲ, ಕಾಂಗ್ರೆಸ್ ಯುವ ಮುಖಂಡರಾದ ಚಿದಾನಂದ ಸವದಿ, ಬಾಲಚಂದ್ರ ಪಾಟೀಲ ಇತರರು ವೇದಿಕೆ ಮೇಲಿದ್ದರು.

ಸಭೆಯ ಅಧ್ಯಕ್ಷ ಬಾಲಚಂದ್ರ ಪಾಟೀಲ ಪ್ರಗತಿಯ ನೋಟ ನೀಡಿದರು. ಸಮಾವೇಶದ ಸ್ವಾಗತ ಅಧ್ಯಕ್ಷ ಉತ್ತಮ ಪಾಟೀಲ ಸ್ವಾಗತಿಸಿದರು. ಧೂಳಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.

ಒಂದೇ ವೇದಿಕೆಯಲ್ಲಿ ಸತೀಶ– ರಮೇಶ

ಸತೀಶ ಜಾರಕಿಹೊಳಿ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಜೈನ ಸಮಾವೇಶದಲ್ಲಿ ಅಕ್ಕಪಕ್ಕದಲ್ಲೇ ಕುಳಿತು ಚರ್ಚಿಸಿ, ಗಮನ ಸೆಳೆದರು.

ಎರಡು ದಿನದ ಹಿಂದೆ ‘ಹುಕ್ಕೇರಿ ತಾಲ್ಲೂಕಿನಲ್ಲಿ ಹೊರಗಿನವರಿಗೆ ಆಡಳಿತ ನಡೆಸುವ ಅವಕಾಶ ನೀಡುವುದಿಲ್ಲ’ ಎಂದು ರಮೇಶ ಕತ್ತಿ ಸವಾಲು ಹಾಕಿದ್ದರು. ‘ಇದಕ್ಕೆ ಸಮಯ ಬಂದಾಗ ಉತ್ತರ ಕೊಡುತ್ತೇನೆ‌’ ಎಂದು ಸತೀಶ ಟಾಂಗ್‌ ಕೊಟ್ಟಿದ್ದರು.

ಸಮಾವೇಶದಲ್ಲಿ ಅಕ್ಕಪಕ್ಕದಲ್ಲೇ ಕುಳಿತು ಮಾತನಾಡುವ ಮೂಲಕ ವಿರಸ ಮರೆ ಮಾಚಲು ಯತ್ನಿಸಿದರು.

ಗಣ್ಯರಿಗೆ ವಿವಿಧ ಪ್ರಶಸ್ತಿ

ಭೀಮಗೊಂಡ ಕರ್ಣವಾಡ, ಸುರೇಶ ಬಹಿರಶೇಟ್‌, ವಿಜಯ ಕೋಗನೊಲೆ, ಅಮೋಲ್ ಪಾಟೀಲ, ಡಾ.ಸುರೇಖಾ ನಾರಡೆ, ಸಚಿನ ಕುಸನಾಳೆ, ಬಾಹುಬಲಿ ಪಾಟೀಲ, ಮಹಾವೀರ ವಿವಿಧೋದ್ದೇಶ ಕಂ.ಸಂಘ,, ಶಾಂತಿಸಾಗರ ಕ್ರೆಡಿಟ್ ಸೊಸೈಟಿ ಸಮಡೊಲಿ, ಪ್ರಕಾಶ ಪಾಟೀಲ, ಡಾ.ಅಲ್ಕಾ ಪ್ರಶಾಂತ, ದಯಾನಂದ ಮಾಂಗಲೆ, ಶಶಿಕಾಂತ ಖೋತ, ವಿದ್ಯಾ ಸಕಾಲಿ, ಸಾಗರ್ ಚೌಗುಲೆ, ಸುರೇಖಾ ಚೌಗುಲೆ, ಸುರೇಖಾ ಮುಂಜಾಪಾ, ಪ್ರೀತಿ ಪಾಟೀಲ, ರೂಪಾಲಿ ಶಾ, ನಿರ್ಮಲಾ ಐತವಾಡೆ, ರಾವಸಾಹೇಬ ಪಾಟೀಲ, ಅಭಯಕುಮಾರ ಭಾಗಾಜೆ ಅವರಿಗೆ ಪ್ರಶಸ್ತಿ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.