ಅಥಣಿ: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸಿಲಿಂಡರ್ ದರ ಏರಿಕೆ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಇಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
‘ಹೋದ ವರ್ಷ ಮತ್ತು ಈ ಬಾರಿ ಕೋವಿಡ್ ಲಾಕ್ಡೌನ್ನಿಂದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಿರುವಾಗ, ತೈಲ ದರ ನಿರಂತರವಾಗಿ ಏರಿಕೆ ಆಗುತ್ತಿರುವುದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿರುವುದರಿಂದ ತೀವ್ರ ತೊಂದರೆ ಆಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಇದಕ್ಕೆ ಕಾರಣವಾಗಿದೆ’ ಎಂದು ಮುಖಂಡ ಗಿರೀಶ ಬುಟಾಳಿ ಹೇಳಿದರು.
‘ಕೋವಿಡ್-19ನಿಂದ ಮೃತಪಟ್ಟವರ ಕುಟುಂಬದರಿಗೆ ₹ 5 ಲಕ್ಷ ಪರಿಹಾರ ಕೊಡಬೇಕು’ ಎಂದು ಒತ್ತಾಯಿಸಿದರು.
ಜೆಡಿಎಸ್ ಅಥಣಿ ಬ್ಲಾಕ್ ಅಧ್ಯಕ್ಷ ಅಣ್ಣಾರಾಯ ಹಾಲಳ್ಳಿ ಮಾತನಾಡಿದರು. ಮುಖಂಡರಾದ ಅಯಾಜ್ ಮಾಸ್ಟರ್, ಶಿವಾನಂದ ಐಗಳಿ, ಮುರುಗೇಶ ನಾಯಿಕ, ಬಾಳಪ್ಪ ಬಕಾರಿ, ಅಣ್ಣಪ್ಪ ನಡುವಿನಮನಿ, ಮಹಾಂತೇಶ ಅವಟಿ, ಎಸ್.ಎಸ್. ಢವಳೇಶ್ವರ, ಎಸ್.ಎಂ. ಐಗಳಿ, ಎ.ಎಲ್. ಪೂಜಾರಿ, ರವಿ ಹಂಜಿ, ರಮೇಶ ಪಾಟೀಲ, ಬಾಬು ಬಕಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.