ADVERTISEMENT

ಲೇಖಕ, ಪತ್ರಕರ್ತ ಭೀಮಸೇನ ತೊರಗಲ್ಲ ಇನ್ನಿಲ್ಲ; ವಿಧಿ-ವಿಧಾನಗಳಿಲ್ಲದೆ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 7:40 IST
Last Updated 7 ಫೆಬ್ರುವರಿ 2022, 7:40 IST
ಭೀಮಸೇನ ತೊರಗಲ್ಲ
ಭೀಮಸೇನ ತೊರಗಲ್ಲ   

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ನಗರದ ನಿವಾಸಿ, ಪತ್ರಕರ್ತ ಹಾಗೂ ಲೇಖಕರಾಗಿದ್ದ ಭೀಮಸೇನ ತೊರಗಲ್ಲ (82) ವಯೋಸಹಜ ಅನಾರೋಗ್ಯದಿಂದ ಸೋಮವಾರ ನಿಧನರಾದರು.

ಅವರಿಗೆ ಪತ್ನಿ, ಪುತ್ರಿ ಹಾಗೂ ಪುತ್ರ ಇದ್ದಾರೆ.

ಶಹಾಪುರದ ರುದ್ರಭೂಮಿಯಲ್ಲಿ ಯಾವುದೇ ವಿಧಿ-ವಿಧಾನಗಳಿಲ್ಲದೆ ಅಂತ್ಯಕ್ರಿಯೆ ನೆರವೇರಿತು.

ADVERTISEMENT

‘ನಾನು ನಿಧನರಾದ 2 ಗಂಟೆಯೊಳಗೆ ಬ್ರಾಹ್ಮಣ ಸಂಪ್ರದಾಯದ ಯಾವುದೇ ವಿಧಿ–ವಿಧಾನಗಳನ್ನು ಅನುಸರಿಸದೆ ಅಂತ್ಯಕ್ರಿಯೆ ನಡೆಸಬೇಕೆಂದು ಅವರು ಎರಡು ದಶಕಗಳ ಹಿಂದೆಯೇ ತಮ್ಮ ಆಪ್ತರುಮತ್ತು ಕುಟುಂಬದವರಿಗೆ ತಿಳಿಸಿದ್ದರು. ಅದನ್ನು ಕುಟುಂಬದವರು ಪಾಲಿಸಿದರು’ ಎಂದು ಅವರ ಒಡನಾಡಿಯಾಗಿದ್ದ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ತಿಳಿಸಿದರು.

80ರ ದಶಕದ ಆರಂಭದಲ್ಲಿ ‘ಸಮತೋಲ’ ಎಂಬ ಸಂಜೆ ದಿನಪತ್ರಿಕೆಯನ್ನು ಆರಂಭಿಸಿದ್ದ ಅವರು ಮಹಾಭಾರತ ಮಹಾಕಾವ್ಯವನ್ನು ತಮ್ಮದೆ ದೃಷ್ಟಿಕೋನದಿಂದ ವ್ಯಾಖ್ಯಾನಿಸಿ ‘ಸಂಚು’ ಎನ್ನುವ ಕಾದಂಬರಿ ಬರೆದಿದ್ದರು. ಬೆಳಗಾವಿಯ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ವಿಶಿಷ್ಟ ಬರವಣಿಗೆ ಮೂಲಕ ಹೆಸರು ಮಾಡಿದ್ದರು. ನಾಡಿನ ಸಾರಸ್ವತ ಲೋಕದ ಗಣ್ಯರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

ಬೆಳಗಾವಿಯ ಕನ್ನಡ, ಮರಾಠಿ ಪತ್ರಿಕೆಗಳು ಹಳೆಯ ಕಾಲದ ಮೊಳೆ ಜೋಡಿಸಿ ಮುದ್ರಿಸುವ ಟ್ರೆಡಲ್ ಮುದ್ರಣ ಯಂತ್ರ ಹೊಂದಿದ್ದ ಕಾಲದಲ್ಲೇ ಮೊಟ್ಟ ಮೊದಲ ಬಾರಿಗೆ ಕಂಪ್ಯೂಟರ್‌ಗಳನ್ನು ತಮ್ಮ ಪತ್ರಿಕಾಲಯದಲ್ಲಿ ಅಳವಡಿಸಿ ಸುಧಾರಿತ ತಂತ್ರಜ್ಞಾನಕ್ಕೆ ತೆರೆದುಕೊಂಡಿದ್ದರು.

‘ಅವರು ನಂಬಿದ ತತ್ವ– ಸಿದ್ಧಾಂತಗಳೊಂದಿಗೆ ಯಾವಾಗಲೂ ಅಂಟಿಕೊಂಡಿದ್ದರು. ತಮಗೆ ಪತ್ರಿಕೆಯನ್ನು ನಡೆಸುವುದು ಸಾಧ್ಯವಿಲ್ಲವೆಂದು ಎನಿಸಿದಾಗ ದಿ.ಕಲ್ಯಾಣರಾವ ಮುಚಳಂಬಿ ಅವರಿಗೆ ಹಸ್ತಾಂತರಿಸಿದ್ದರು’ ಎಂದು ಚಂದರಗಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.