ADVERTISEMENT

ರೈತ ಹೋರಾಟಕ್ಕೆ ಮುಚಳಂಬಿ ಕೊಡುಗೆ ಅಪಾರ: ಈರಣ್ಣ ಕಡಾಡಿ

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 14:28 IST
Last Updated 17 ಅಕ್ಟೋಬರ್ 2021, 14:28 IST
ಬೆಳಗಾವಿಯಲ್ಲಿ ಭಾನುವಾರ ನಡೆದ ರೈತ ಹೋರಾಟಗಾರ ಕಲ್ಯಾಣರಾವ ಮುಚಳಂಬಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಉದ್ಘಾಟಿಸಿದರು. ವಿವಿಧ ಸಂಘಟನೆಗಳ ಮುಖಂಡರು ಇದ್ದಾರೆ
ಬೆಳಗಾವಿಯಲ್ಲಿ ಭಾನುವಾರ ನಡೆದ ರೈತ ಹೋರಾಟಗಾರ ಕಲ್ಯಾಣರಾವ ಮುಚಳಂಬಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಉದ್ಘಾಟಿಸಿದರು. ವಿವಿಧ ಸಂಘಟನೆಗಳ ಮುಖಂಡರು ಇದ್ದಾರೆ   

ಬೆಳಗಾವಿ: ‘ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಪತ್ರಕರ್ತ, ರೈತ ಹೋರಾಟಗಾರ ಕಲ್ಯಾಣರಾವ ಮುಚಳಂಬಿ ಸದಾ ರೈತರ ಬಗ್ಗೆ ಚಿಂತಿಸುತ್ತಿದ್ದರು. ರೈತ ಚಳವಳಿಗೆ ಅವರ ಕೊಡುಗೆ ಅಪಾರ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸ್ಮರಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಕಲ್ಯಾಣರಾವ ಮುಚಳಂಬಿ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರೈತ ಕುಟುಂಬದಿಂದ ಬಂದ ಮುಚಳಂಬಿ ಅವರು ಕೃಷಿಕರ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸುವ ಉದ್ದೇಶದಿಂದ ‘ಹಸಿರುಕ್ರಾಂತಿ’ ಪತ್ರಿಕೆ ಆರಂಭಿಸಿದರು. ಪರಿಹಾರ ನೀಡುವಲ್ಲಿ ಸದಾ ಹೋರಾಡಿ ಶ್ರಮಿಸುತ್ತಿದ್ದರು. ಹಲವು ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಅದರ ಮೂಲಕ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ವಚನ ಸಾಹಿತ್ಯ, ನಾಡಹಬ್ಬ ಮೊದಲಾದ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೂ ತಮ್ಮ ಕೊಡುಗೆ ನೀಡಿದ್ದಾರೆ’ ಎಂದರು.

ADVERTISEMENT

ಆದರ್ಶ ಅಳವಡಿಸಿಕೊಳ್ಳಬೇಕು:

‘ಅವರು ವ್ಯಕ್ತಿಯಾಗದೆ ಸಮಾಜದ ಶಕ್ತಿಯಾಗಿದ್ದರು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಕಾರ್ಯಗಳನ್ನು ಮಾಡಬೇಕು’ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಶಶಿಕಾಂತ ನಾಯಿಕ, ‘ಸರಳ ಸಜ್ಜನಿಕೆಯ ಮುಚಳಂಬಿ ಅವರು ರೈತ ಹೋರಾಟದ ಮುಂಚೂಣಿ ನಾಯಕರಾಗಿದ್ದರು. ಅದು ಅವಿಸ್ಮರಣೀಯವಾದುದು’ ಎಂದು ಸ್ಮರಿಸಿದರು.

‘ರೈತರು ಬದುಕಿದರೆ ಮಾತ್ರ ಈ ದೇಶ ಬದುಕುತ್ತದೆ. ಹೀಗಾಗಿ, ಅವರನ್ನು ಗಟ್ಟಿಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಯೋಜನೆಗಳನ್ನು ನೀಡುತ್ತಿದ್ದಾರೆ. ಈಗಿರುವ ಕೆಲವೊಂದಿಷ್ಟು ತೊಂದರೆಗಳನ್ನು ಸರಿಪಡಿಸಿ ಕೃಷಿಕರನ್ನು ಗಟ್ಟಿಗೊಳಿಸಬೇಕಿದೆ’ ಎಂದು ತಿಳಿಸಿದರು.

ಮುಖಂಡ ಅಶೋಕ ಪೂಜಾರಿ, ‘ಮುಚಳಂಬಿ ಅವರು ಪತ್ರಕರ್ತರಾಗಿ, ರೈತ ಹೋರಾಟಗಾರರಾಗಿ ಮತ್ತು ಸಮಾಜದ ಹಿತ ಬಯಸುವ ಚಿಂತಕರಾಗಿ ವಿವಿಧ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಶ್ರಮಿಸುತ್ತಿದ್ದರು’ ಎಂದು ನೆನೆದರು.

ಶ್ಲಾಘನೀಯ ಕಾರ್ಯ:

ಮುಖಂಡ ರಾಮಣ್ಣ ಹುಕ್ಕೇರಿ, ‘ನಾನು ಶಾಲೆ ಅರಂಭಿಸಲು ಪ್ರೇರಣೆಯಾದರು. ಈಗ ಹಿರಿಯರ ಆರ್ಶೀವದೊಂದಿಗೆ ಆ ಶಾಲೆಯಲ್ಲಿ 4ಸಾವಿರ ವಿದ್ಯಾರ್ಥಿಗಳು
ವ್ಯಾಸಂಗ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

ಸಾಹಿತಿ ಯ.ರು. ಪಾಟೀಲ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸಂಚಾಲಕ ಚೂನಪ್ಪ ಪೂಜಾರಿ, ರೈತ ಮುಖಂಡರಾದ ಮಲ್ಲಿಕಾರ್ಜುನ ವಾಲಿ, ಸಿದ್ದಗೌಡ ಪಾಟೀಲ, ಶಿವಪುತ್ರ ಜಕಬಾಳ, ಯಲ್ಲಪ್ಪ ಕಪ್ಪಲಗುದ್ದಿ, ಶ್ರೀಕಾಂತ ಶಿರಹಟ್ಟಿ, ಎಸ್.ಪಿ. ಮತ್ತಿಕೊಪ್ಪ,ಶೀಗಿಹಳ್ಳಿ, ಪತ್ರಕರ್ತೆ ಸರೋಜಿನಿ ಅರಗೆ, ಎನ್.ಆರ್. ಲಾತೂರ ಮಾತನಾಡಿದರು.

ಶಿವಾಪೂರ ಕಾಡಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿಕ್ಷಕ ಬಸವರಾಜ ಸುಣಗಾರ, ಅಪ್ಪಾಸಾಬ ದೇಸಾಯಿ, ವಿಜಯಕುಮಾರ ಪಾಟೀಲ, ಪತ್ರಕರ್ತ ಮಹಾಂತೇಶ ರೇಶ್ಮಿ, ಬಿ.ಎಚ್. ಹೊಂಗಲ, ಶ್ರೀಕಾಂತ ಶಿರಹಟ್ಟಿ, ಈಶ್ವರ ನಾಗನೂರ, ನೇಮಿನಾಥ ಸೊಲ್ಲಾಪೂರೆ, ಗೀತಾ ಶರಣ್ಣವರ, ಶಿವಲೀಲಾ ಮಿಸಾಳೆ, ವಿಜಯಲಕ್ಷ್ಮಿ ಪುತ್ತೂರ ಇದ್ದರು.

ರೈತ ಮುಖಂಡ ಸಿದಗೌಡ ದ್ದಗೌಡ ಮೋದಗಿ ಸ್ವಾಗತಿಸಿದರು.

ದಾರಿದೀಪವಾಗಲಿ

ರೈತರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಕಲ್ಯಾಣರಾವ ಅವರ ಹೋರಾಟ ಮತ್ತು ಕಾರ್ಯ ಶ್ಲಾಘನೀಯ. ಅವರ ಆದರ್ಶ ಎಲ್ಲರಿಗೂ ದಾರಿದೀಪವಾಗಲಿ.

–ಮಲ್ಲಿಕಾರ್ಜುನ ವಾಲಿ, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.