ಬೆಳಗಾವಿ: ಇಲ್ಲಿನ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ರಾಜಹಂಸಗಡ ಕೋಟೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಕನ್ನಡವನ್ನು ಕಡೆಗಣಿಸಿ, ಮರಾಠಿ ಪ್ರೇಮ ಮರೆದಿರುವುದಕ್ಕೆ ಕನ್ನಡ ಪರ ಹೋರಾಟಗಾರರಿಂದ ಖಂಡನೆ ವ್ಯಕ್ತವಾಗಿದೆ.
ರಾಜ್ಯ ಸರ್ಕಾರದ ಅನುದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಪೆಂಡಾಲ್ನಲ್ಲಿ ಹಾಕಿದ್ದ ಬ್ಯಾನರ್ಗಳಲ್ಲಿ ಕನ್ನಡ ಇರಲಿಲ್ಲ. ಅದರಲ್ಲಿ ಬೆಳಗಾವಿ ಬದಲಿಗೆ ‘ಬೆಳಗಾವ್’ ಎಂದು ಬರೆಯಲಾಗಿತ್ತು. ಶಾಸಕರು, ಮರಾಠಿಯಲ್ಲೇ ಮಾತನಾಡಿದರು ಎನ್ನುವುದು ಟೀಕೆಗೆ ಒಳಗಾಗಿದೆ. ಅವರ ನಡೆಯನ್ನು ಸಾಮಾಜಿಕ ಜಾಲತಾಣಗಳಲ್ಲೂ ಖಂಡಿಸಲಾಗುತ್ತಿದೆ. ಜಿಲ್ಲಾಧಿಕಾರಿ ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಮಹಾದೇವ ತಳವಾರ, ‘ಕನ್ನಡಿಗರ ತೆರಿಗೆ ಹಣದಲ್ಲಿ ಮಾಡಿದ ಕಾರ್ಯಕ್ರಮದಲ್ಲಿ ಕನ್ನಡ ಬಳಸಬೇಕು ಎನ್ನುವ ಸೌಜನ್ಯವೂ ಇಲ್ಲದ ನಿಮ್ಮಂತಹ ರಾಜಕಾರಣಿಗಳಿಗೆ ಧಿಕ್ಕಾರವಿರಲಿ. ‘ಬೆಳಗಾವಿ’ ಯನ್ನು ‘ಬೆಳಗಾವ್’ ಮಾಡಿದ್ದೀರಿ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ ಎನ್ನುವ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ)ನವರನ್ನು ಮನೆಗೆ ಕಳಿಸಿದ್ದೇವೆ. ಇನ್ನು ನೀವು ಯಾವ ಲೆಕ್ಕ?’ ಎಂದು ಫೇಸ್ಬುಕ್ ಪುಟದಲ್ಲಿ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.