ಬೆಳಗಾವಿ: ‘ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಸೇರಿದಂತೆ ಇಲ್ಲಿನ ಜನಪ್ರತಿನಿಧಿಗಳಿಗೆ ನಿಜವಾಗಿಯೂ ತಾಕತ್ತಿದ್ದರೆ ಪೀರನವಾಡಿಯಲ್ಲಿ ನಾವು ಪ್ರತಿಷ್ಠಾಪಿಸಿರುವ ಸಂಗೊಳ್ಳಿರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಲಿ’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯ ಸಂಚಾಲಕ ಮಹಾದೇವ ತಳವಾರ ಸವಾಲು ಹಾಕಿದರು.
ಪೀರನವಾಡಿ ಗ್ರಾಮದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
‘ಗ್ರಾಮದಲ್ಲಿ ರಾಯಣ್ಣನ ಅಭಿಮಾನಿಗಳ ಬಹುದಿನಗಳ ಕನಸಿನಂತೆ ರಾತ್ರಿ ಅನಿವಾರ್ಯವಾಗಿ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದೇವೆ. ಅದನ್ನು ತೆರವುಗೊಳಿಸಲು ಕೆಲವರು ಹುನ್ನಾರ ನಡೆಸಿದ್ದಾರೆ. ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ ಹಾಗೂ ಯಾವುದಕ್ಕೂ ಮಣಿಯುವುದಿಲ್ಲ. ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು, ಪ್ರತಿಮೆ ತೆರವಿಗೆ ಅವಕಾಶ ಕೊಡುವುದಿಲ್ಲ ಎಂಬ ಹೇಳಿಕೆ ಕೊಡಬೇಕು’ ಎಂದು ಒತ್ತಾಯಿಸಿದರು.
‘ವೇದಿಕೆಯಲ್ಲಿ ಕುಳಿತು ರಾಯಣ್ಣ ನಮ್ಮವ, ಚನ್ನಮ್ಮ ನಮ್ಮವರು ಎನ್ನುವುದು ಕೇವಲ ಹೇಡಿತನದ ಮಾತಾಗುತ್ತದೆ. ರಾಜಕಾರಣಿಗಳ ಆ ಧೋರಣೆಗೆ ನಮ್ಮ ಧಿಕ್ಕಾರವಿದೆ’ ಎಂದರು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ‘ಪೀರನವಾಡಿಯಲ್ಲಿ ರಾಯಣ್ಣ ಪ್ರತಿಮೆ ವಿವಾದ ಬೇರೆ ದಾರಿಯಲ್ಲಿ ಸಾಗುತ್ತಿತ್ತು ಹಾಗೂ ರಾಜಕೀಯ ಸೇರಿಕೊಳ್ಳುತ್ತಿತ್ತು. ಹೀಗಾಗಿ ಕರವೇಯವರು, ರಾಯಣ್ಣನ ಅಭಿಮಾನಿಗಳು, ಸ್ಥಳೀಯರು ಸೇರಿ ಪ್ರತಿಮೆ ಸ್ಥಾಪನೆ ಮಾಡಿದ್ದೇವೆ. ಇದರೊಂದಿಗೆ ವಿವಾದ ಬಗೆಹರಿದಿದೆ. ರಾಜ್ಯದಾದ್ಯಂತ ರಾಯಣ್ಣನ ಅಭಿಮಾನಿಗಳು ಹಾಗೂ ಕರವೇ ಕಾರ್ಯಕರ್ತರು ವಿಜಯೋತ್ಸವ ಆಚರಿಸಬೇಕು’ ಎಂದು ಹೇಳಿದರು.
ಸ್ಥಳದಿಂದ ಕಳುಹಿಸಿದರು:ರಾಯಣ್ಣ ಪ್ರತಿಮೆ ಬಳಿ ಇದ್ದ ಕನ್ನಡ ಹೋರಾಟಗಾರರನ್ನು ಪೊಲೀಸರು ಅಲ್ಲಿಂದ ಕಳುಹಿಸಿದರು.
ಸಂಭ್ರಮಾಚರಣೆ:ಪೀರನವಾಡಿಯಲ್ಲಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ ಕನ್ನಡಪರ ಹೋರಾಟಗಾರರು ಬಳಿಕ ನಗರದ ಹೃದಯ ಭಾಗವಾದ ರಾಣಿ ಚನ್ನಮ್ಮ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.
ರಾಯಣ್ಣ ಹಾಗೂ ಕಿತ್ತೂರು ರಾಣಿ ಚನ್ನಮ್ಮಗೆ ಜೈಕಾರ ಹಾಕಿದರು. ಪಟಾಕಿಗಳನ್ನು ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು.
ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ, ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಮುಖಂಡರಾದ ಸುರೇಶ ಗವನ್ನವರ, ತೋಳಿ ಭರಮಣ್ಣ, ವಿನಾಯಕ ಬ್ಯಾಳೇರಿ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.