ಗೋಕಾಕ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರನ್ನು ವೈರಸ್ ಎಂದು ನಿಂಧಿಸಿರುವ ನಾಡ ವಿರೋಧಿ ಎಂ.ಇ.ಎಸ್. ‘ಗೂಂಡಾ ಶುಭಂ ಶಿಳಕೆʼನನ್ನು ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿ ಕರವೇ ತಾಲ್ಲೂಕು ಘಟಕ ಅಧ್ಯಕ್ಷ ಬಸವರಾಜ ಖಾನಪ್ಪನವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಮಹರ್ಷಿ ಶ್ರೀ ವಾಲ್ಮೀಕಿ ವೃತ್ತದಲ್ಲಿ ಹಮ್ಮಿಕೊಂಡ ಮಂಗಳವಾರ ಪ್ರತಿಭಟನೆಯಲ್ಲಿ ಶುಭಂ ಶಿಳಕೆ ಭಾವಚಿತ್ರ ದಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕನ್ನಡ ಮತ್ತು ಕನ್ನಡಿಗರ ಬಗ್ಗೆ ನಾಡ ವಿರೋಧಿ ಶಿಳಕೆ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ನಾರಾಯಣಗೌಡರನ್ನು ಟೀಕಿಸುವ ಮೊದಲು ತಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬುದರ ಬಗ್ಗೆ ಯೋಚನೆ ಮಾಡಿ ಮಾತನಾಡಬೇಕು. ನಾರಾಯಣ ಗೌಡರ ಕಾಲಿನ ಧೂಳಿಗೂ ಸಮನಾಗದ ನಾಡ ವಿರೋಧಿ ಶಿಳಕೆ. ದೊಡ್ಡ ನಾಯಕನಲ್ಲ. ಇವನಿಗೆ ಬುದ್ದಿ ಕಲಿಸಲು ಕರವೇಯ ಮಹಿಳಾ ಕಾರ್ಯಕರ್ತರೇ ಸಾಕು’ ಎಂದರು.
‘ಮುಂದೆ ಇವನಿಗೆ ಜಿಲ್ಲೆಯಲ್ಲಿ ಮಹಿಳಾ ಕಾರ್ಯಕರ್ತರಿಂದ ಚಪ್ಪಲಿ ಸೇವೆ ಮಾಡಲಾಗುವುದು. ಕರ್ನಾಟಕ ರಾಜ್ಯೋತ್ಸವ ಸಂಭ್ರಮದಲ್ಲಿರುವ ಬೆಳಗಾವಿಯಲ್ಲಿ ಮರಾಠಿ ಮತ್ತು ಕನ್ನಡಿಗರ ಮಧ್ಯೆ ವಿಷಬೀಜ ಬಿತ್ತುವ ಹೇಳಿಕೆ ನೀಡಿರುವ ಗೂಂಡಾ ಶಿಳಕೆʼನನ್ನು ಜಿಲ್ಲಾಡಳಿತ ಈ ಕೂಡಲೇ ಗಡೀಪಾರು ಮಾಡಬೇಕು’ ಎಂದು ಒತ್ತಾಯಿಸಿದರು.
ಕರವೇ ಕಾರ್ಯಕರ್ತರಾದ ಮಲ್ಲು ಸಂಪರ್, ನಿಜಾಮ ನದಾಫ್ ಮಹಾದೇವ ಮಕ್ಕಳಗೇರಿ, ಜಗದೀಶ್ ಪೂಜೇರಿ, ವಜ್ರಕಾಂತ್ ಜೋತಾವರ, ಮಲ್ಲಪ್ಪ ಅಂಬಿ, ಕೆಂಪಣ್ಣ ಕಡಕೋಳ ಕರೆಪ್ಪ ಹೊರಟ್ಟಿ, ಬಸವರಾಜ ಗಾಡಿವಡ್ಡರ, ಸೈಯದ ಮುಲ್ಲಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.