ನೇಸರಗಿ: ‘ಕಾರ್ಗಿಲ್ ಯುದ್ದದಲ್ಲಿ ಭಾರತಕ್ಕೆ ವಿಜಯ ತಂದುಕೊಟ್ಟ ಯೋಧರ ಶೌರ್ಯ ಸದಾ ಸ್ಮರಣೀಯ. 26ನೇ ವರ್ಷದ ವಿಜಯೋತ್ಸವ ಅಂಗವಾಗಿ ಸೇನೆಯ ಅಧಿಕಾರಿಗಳೇ ಹುತಾತ್ಮ ಯೋಧರ ಮನೆಗೆ ತೆರಳಿ ಗೌರವ ಸಲ್ಲಿಸುತ್ತಿರುವುದು ಪ್ರಶಂಸಾರ್ಹ ಕಾರ್ಯ’ ಎಂದು ನಿವೃತ್ತ ಪಿಎಸ್ಐ ವೈ.ಎಲ್.ಶೀಗಿಹಳ್ಳಿ ಹೇಳಿದರು.
ಸಮೀಪದ ಮೇಕಲಮರಡಿ ಗ್ರಾಮದಲ್ಲಿ ಶನಿವಾರ ನಡೆದ 26ನೇ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಹುತಾತ್ಮ ಯೋಧ ಯಶವಂತ ಕೋಲಕಾರ ಅವರ ಮೂರ್ತಿಗೆ ಪೂಜೆ ನೆರವೇರಿಸಿ ಮಾತನಾಡಿದರು.
‘1999ರಲ್ಲಿ ಭಾರತ ಪಾಕಿಸ್ತಾನ್ ಯುದ್ಧದಲ್ಲಿ ನಾವು ಜಯಶಾಲಿಯಾದೆವು. ಅದಕ್ಕಾಗಿ ದೇಶದ ಅನೇಕ ಸೈನಿಕರು ಪ್ರಾಣ ತ್ಯಾಗ ಮಾಡಿದರು. ಅಂಥ ಯೋಧರನ್ನ ಸದಾಕಾಲ ಸ್ಮರಿಸಬೇಕಿದೆ’ ಎಂದರು.
ರೈತ ಮುಖಂಡ ಮಹಾಂತೇಶ ಹಿರೇಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಪ್ಪ ಅರಿಕೇರಿ, ಹೈದರಾಬಾದ್ ರಿಜಿಮೆಂಟಿನ ಅಧಿಕಾರಿಗಳಾದ ನಾಯಕ ಸುಬೇದಾರ್ ತಿಲಕ್ ಸಿ.ಎಲ್., ಆರ್.ಎಚ್.ಎಂ. ರಾಜೇಶ, ಹವಾಲ್ದಾರ ಲಕ್ಷ್ಮಣ, ಹವಾಲ್ದಾರ ಸಾಯೋಜ, ಹವಾಲ್ದಾರ ಸಂದೀಪ ಅವರು ಹುತಾತ್ಮ ಯೋಧ ಯಶವಂತ ಕೋಲಕಾರ ಅವರ ಪುತ್ಥಳಿಗೆ ಪೂಜೆ ಸಲ್ಲಿಸಿದರು. ಯೋಧನ ಪತ್ನಿ ಸಾವಿತ್ರಿದೇವಿ ಯಶವಂತ ಕೋಲಕಾರ ಅವರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ತಿಗಡಿ, ಉಪಾಧ್ಯಕ್ಷ ಕಾಸಿಮ್ ಜಮಾದಾರ, ನೇಸರಗಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಸೋಮಣ್ಣವರ, ಮಂಜುನಾಥ ಹುಲಮನಿ, ಬಾಬು ಹೊಸಮನಿ, ಶಂಕರ ಬಡಿಗೇರ, ಶಿಕ್ಷಕರು, ವಿದ್ಯಾರ್ಥಿಗಳು, ನೇಸರಗಿ, ಇಂಚಲ, ಯರಗಟ್ಟಿ ಸೇರಿದಂತೆ ಅನೇಕ ಮಾಜಿ ಸೈನಿಕರ ಸಂಘದ ಸದಸ್ಯರು ಕೂಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.