ADVERTISEMENT

ಸಂವಿಧಾನ ಅವಮಾನಿಸಿದ ಭೈರಪ್ಪ: ರವೀಂದ್ರ ನಾಯ್ಕರ

ಬೆಳಗಾವಿಯಲ್ಲಿ ಕಾರ್ಮಿಕರ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 1 ಮೇ 2019, 14:30 IST
Last Updated 1 ಮೇ 2019, 14:30 IST
ಬೆಳಗಾವಿಯಲ್ಲಿ ಬುಧವಾರ ನಡೆದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಾದ ಗೋಪಾಲ ಹೂವನ್ನವರ ಮತ್ತು ಪರುಶರಾಮ ಹೂವನ್ನವರ ಅವರನ್ನು ಗೌರವಿಸಲಾಯಿತು
ಬೆಳಗಾವಿಯಲ್ಲಿ ಬುಧವಾರ ನಡೆದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಾದ ಗೋಪಾಲ ಹೂವನ್ನವರ ಮತ್ತು ಪರುಶರಾಮ ಹೂವನ್ನವರ ಅವರನ್ನು ಗೌರವಿಸಲಾಯಿತು   

ಬೆಳಗಾವಿ: ‘ಸಂವಿಧಾನದಲ್ಲಿ ಭಾರತದ ಪರಂಪರೆ ಕಡೆಗಣಿಸಲಾಗಿದೆ. ಧರ್ಮಶಾಸ್ತ್ರಗಳೇ ನಮ್ಮ ಸಂವಿಧಾನ ಎಂದು ಕಾದಂಬರಿಕಾರಿ ಎಸ್.ಎಲ್. ಭೈರಪ್ಪ ಅವರು ಹೇಳಿಕೆ ನೀಡುವ ಮೂಲಕ ನಮ್ಮ ಪವಿತ್ರ ಸಂವಿಧಾನವನ್ನೇ ಅವಮಾನಿಸಿದ್ದಾರೆ’ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ ದೂರಿದರು.

ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಘಟಕದಿಂದ ಇಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಪೌರಕಾರ್ಮಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ನಮ್ಮ ದೇಶದ ಕುಲಗೆಟ್ಟ ಪರಂಪರೆಯನ್ನು ಹೊಡೆದು ಹಾಕಲು ಹುಟ್ಟಿಕೊಂಡಿದ್ದೇ ಬಂಡಾಯ ಸಾಹಿತ್ಯ. ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶದ ಎಲ್ಲಾ ನಾಗರಿಕರ ಉನ್ನತಿಯನ್ನು ಆಧರಿಸಿ ಸಂವಿಧಾನ ರಚಿಸಿದ್ದಾರೆ. ಆದರೆ, ಭೈರಪ್ಪ ಅವರು ಒಳ್ಳೆಯ ಜ್ಞಾನಗಳಾಗಿ ಸಂವಿಧಾನಕ್ಕೆ ಅವಮಾನಿಸುವ ರೀತಿ ಮಾತಾಡಿದ್ದು ತಪ್ಪು. ಅವರ ದೃಷ್ಟಿಯಲ್ಲಿ ದೇವದಾಸಿಯರ ಮಕ್ಕಳು ದೇವದಾಸಿಗಳೇ ಆಗಬೇಕೇ? ತುಳಿತಕ್ಕೊಳಗಾದ ಸಮುದಾಯ ನಿರಂತರವಾಗಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ’ ಎಂದರು.

ADVERTISEMENT

ಬಂಡಾಯ ಸಂಘಟನೆ ರಾಜ್ಯ ಸಂಚಾಲಕ ಯಲ್ಲಪ್ಪ ಬಿ. ಹಿಮ್ಮಡಿ ಮಾತನಾಡಿ, ‘ಕಾಯಕದಲ್ಲಿ ಮೇಲು–ಕೀಳು ಎನ್ನುವುದಿಲ್ಲ. ಅದಕ್ಕೆ 12ನೇ ಶತಮಾನದಲ್ಲಿ ಬಸವಣ್ಣನವರು ಕಡಿವಾಣ ಹಾಕಿದ್ದಾರೆ’ ಎಂದು ಹೇಳಿದರು.

ಸಂತೋಷ ನಾಯಕ, ನಿಖಿತಾ ಭರಮನ್ನವರ, ಲಕುಷಾ ಭರಮನ್ನವರ ಕ್ರಾಂತಿಗೀತೆ ಹಾಡಿದರು. ಮುಖಂಡರಾದ ಮಹಾಂತೇಶ ರಣಗಟ್ಟಿಮಠ, ಅತೀಶ ಢಾಲೆ, ಗಜಾನನ ಸಂಗೋಟೆ, ಶಂಕರ ಕೊಡಲೆ, ರಮೇಶ ಕೋಲಕಾರ, ಅಡಿವೆಪ್ಪ ಇಟಗಿ, ರಾಜು ಸನದಿ, ನೀಲಕಂಠ ಭೂಮನ್ನವರ, ರಮೇಶ ಹುಲ್ಲೂರು ಇದ್ದರು.

ಶಂಕರ ಬಾಗೇವಾಡಿ ನಿರೂಪಿಸಿದರು. ಬಾಲಕೃಷ್ಣ ನಾಯಕ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.