ಬೆಳಗಾವಿ: ಸತೀಶ ಶುಗರ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ ವಾಡೆನ್ನವರ ರಚಿಸಿರುವ ‘ಕರ್ನಾಟಕ ಪಾಲಿಟಿಕ್ಸ್’ ಹಾಗೂ ‘ಸತ್ಯ ಎಲ್ಲಿದೆ?’ ಪುಸ್ತಕಗಳನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಭಾನುವಾರ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, ‘ಪುಸ್ತಕ ನಿಜವಾದ ಸ್ನೇಹಿತ ಎನ್ನುವ ಮಾತಿದೆ. ಒಳ್ಳೆಯ ಪುಸ್ತಕಗಳು ಸಂಗಾತಿಗಳಾದರೆ ಒಳ್ಳೆಯ ಚಿಂತನೆಗಳು ಬರುತ್ತವೆ. ಬದುಕಿಗೆ ಹತ್ತಿರವಾದ ಬರವಣಿಗೆ ಬರಬೇಕು. ಆಗ ಬರೆದದ್ದಕ್ಕೂ ಸಾರ್ಥಕತೆ ಮೂಡುತ್ತದೆ’ ಎಂದರು.
‘ವಾಡೆನ್ನವರು ಈ ಪುಸ್ತಕಗಳ ಮೂಲಕ ನಿಜವನ್ನು ಪ್ರತಿಪಾದಿಸಿದ್ದಾರೆ. ಲೇಖನಗಳು ಸತ್ಯಕ್ಕೆ ಸಮೀಪದಲ್ಲಿವೆ ಹಾಗೂ ಸತ್ಯವನ್ನೇ ಆವರಿಸಿಕೊಂಡಿವೆ. ಪುಸ್ತಕಗಳಲ್ಲಿ ಒಳ್ಳೆಯ ಸಂಗತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಭೂಮಿಯ ಮೇಲೆ ಹಾಗೂ ದೇಹದಲ್ಲಿ ಶೇ 75ರಷ್ಟು ನೀರಿನ ಅಂಶ ಇರುತ್ತದೆ ಎನ್ನುತ್ತಾರೆ. ನಾವು ನೀರಿನಂತೆಯೇ ಸಿಹಿಯಾಗಿರಬೇಕು. ಮಾನವೀಯತೆಯ ವಿರುದ್ಧ ಇರುವುದನ್ನು ಎತ್ತಿ ತೋರಿಸಬೇಕು. ಇದಕ್ಕಾಗಿ ಬರವಣಿಗೆಯನ್ನು ಬಳಸಿಕೊಳ್ಳುತ್ತಿದ್ದೇನೆ’ ಎಂದು ಹೇಳಿದರು.
‘ಅಧ್ಯಾತ್ಮ ಹಾಗೂ ಧಾರ್ಮಿಕ ಪುಸ್ತಕಗಳನ್ನು ಓದುತ್ತಿದ್ದೆ. ಆ ಕುರಿತು ಬರೆಯುತ್ತಿದ್ದೆ. ಅದು, ಈಗ ರಾಜಕೀಯ ವಿಶ್ಲೇಷಣೆಗೂ ವಿಸ್ತರಿಸಿದೆ. ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು ಎಂಬ ಹಂಬಲದಿಂದ ಸಾಹಿತ್ಯ ರಚನೆ ಮಾಡುತ್ತಿದ್ದೇನೆ. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ, ಗೆದ್ದವರ ಮಾಹಿತಿ ಎಲ್ಲ ಜಿಲ್ಲೆಗಳವರಿಗೂ ಒಂದೇ ಕಡೆ ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ‘ಕರ್ನಾಟಕ ಪಾಲಿಟಿಕ್ಸ್’ ಪುಸ್ತಕದಲ್ಲಿ ವಿವರಗಳನ್ನು ದಾಖಲಿಸಿದ್ದೇನೆ’ ಎಂದರು.
ಜಿ.ಎಸ್. ಮಾಳಗಿ ಪುಸ್ತಕ ಪರಿಚಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.