ಬೆಳಗಾವಿ: ‘ಶೀಘ್ರದಲ್ಲಿಯೇ ಬರಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು’ ಎಂದು ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ನಡೆದ ಪಕ್ಷದ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಪಕ್ಷವು ಒಂದು ವರ್ಷದಲ್ಲಿ ತನ್ನ ತತ್ವ, ಸಿದ್ಧಾಂತ ಮತ್ತು ಚುನಾವಣಾ ರಾಜಕಾರಣದ ಮೂಲಕ ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣದ ಚಾಪನ್ನು ಮೂಡಿಸುತ್ತಿದೆ. ಪ್ರಾಮಾಣಿಕ ಮತ್ತು ಅರ್ಹರು ಚುನಾವಣೆಗೆ ಸ್ಪರ್ಧಿಸಲು ಪ್ರೇರೇಪಣೆ ನೀಡುತ್ತಿದೆ’ ಎಂದು ಹೇಳಿದರು.
‘ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ಸ್ಪರ್ಧಿಸಿದ್ದರು. ಯಾವುದೇ ರೀತಿಯಲ್ಲಿ ಚುನಾವಣಾ ಅಕ್ರಮ ಮಾಡದೆ ಹಲವರು ಗೆದ್ದಿದ್ದಾರೆ. ಅದು ಪರಿಸ್ಥಿತಿ ಬದಲಾಗುತ್ತಿರುವುದಕ್ಕೆ ನಿದರ್ಶನವಾಗಿದೆ’ ಎಂದರು.
‘ಬೆಳಗಾವಿಯು ಸಾಕಷ್ಟು ಸಂಪನ್ಮೂಲ ಹೊಂದಿದ್ದರೂ, ಸಮಸ್ಯೆಗಳಿಂದ ಮತ್ತು ಹಲವು ರೀತಿಯ ಮಾಫಿಯಾಗಳಿಂದ ನರಳುತ್ತಿದೆ. ಭ್ರಷ್ಟ ಹಾಗೂ ಅಯೋಗ್ಯ ರಾಜಕಾರಣಿಗಳು ಜಿಲ್ಲೆಯಲ್ಲಿ ಹಣ–ಹೆಂಡ ಮತ್ತು ಆಮಿಷಗಳ ರಾಜಕಾರಣ ಮಾಡುವ ಮೂಲಕ ಪ್ರಜಾಪ್ರಭುತ್ವದ ಕತ್ತನ್ನು ಹಿಸುಕುತ್ತಿದ್ದಾರೆ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.