ಬೆಳಗಾವಿ: ‘ಕರ್ನಾಟಕ ರೆಡ್ಡಿ ಜನಸಂಘದ ಶತಮಾನೋತ್ಸವ ಸಮಾರಂಭವನ್ನು ಬೆಂಗಳೂರಿನ ಗಾಯತ್ರಿ ವಿಹಾರದ ಅರಮನೆ ಮೈದಾನದಲ್ಲಿ ಸೆ.24ರಂದು ಬೆಳಿಗ್ಗೆ 10ಕ್ಕೆ ಆಯೋಜಿಸಲಾಗಿದೆ’ ಎಂದು ಎರೆಹೊಸಹಳ್ಳಿಯ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಹೇಳಿದರು.
ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ರೆಡ್ಡಿ ಜನಸಂಘ 100ನೇ ವಸಂತಕ್ಕೆ ಕಾಲಿಟ್ಟಿದೆ. ಈ ಸಂಭ್ರಮಕ್ಕಾಗಿ ಆಯೋಜಿಸಿದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರೆಡ್ಡಿ ಸಮಾಜದ ಶಾಸಕರು, ಮಾಜಿ ಶಾಸಕರು, ಮುಖಂಡರು ಮತ್ತು ಸ್ವಾಮೀಜಿಗಳು ಆಗಮಿಸುವರು’ ಎಂದು ತಿಳಿಸಿದರು.
‘ರಾಜ್ಯದಲ್ಲಿ ಐದಾರು ಪಂಗಡಗಳಿಂದ ಗುರುತಿಸಿಕೊಂಡ ರೆಡ್ಡಿ ಸಮುದಾಯದ ಜನಸಂಖ್ಯೆ 35 ಲಕ್ಷ ಇದೆ. ಆದರೆ, 7 ಲಕ್ಷ ಜನಸಂಖ್ಯೆ ಎಂದು ಕಾಂತರಾಜು ವರದಿ ತಿಳಿಸಿದೆ. ಈ ತಪ್ಪು ಮಾಹಿತಿಯಿಂದಾಗಿ ನಾವು ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಹಾಗಾಗಿ ಇದೇ 22ರಿಂದ ಆರಂಭವಾಗುವ ಸಮೀಕ್ಷೆಯಲ್ಲಿ ಯಾರೂ ಉಪ ಪಂಗಡಗಳ ಹೆಸರು ಬರೆಯಿಸಬಾರದು. ಧರ್ಮದ ಕಾಲಂನಲ್ಲಿ ಹಿಂದೂ ಮತ್ತು ಜಾತಿ ಕಾಲಂನಲ್ಲಿ ರೆಡ್ಡಿ ಎಂದೇ ಬರೆಯಿಸಬೇಕು. ಆಗ ನಿಖರವಾದ ಜನಸಂಖ್ಯೆ ಗೊತ್ತಾಗುತ್ತದೆ’ ಎಂದರು.
ಕರ್ನಾಟಕ ರೆಡ್ಡಿ ಜನಸಂಘದ ಉಪಾಧ್ಯಕ್ಷ ಲಕ್ಷ್ಮಣ ರೆಡ್ಡಿ, ನಿರ್ದೇಶಕ ಕೃಷ್ಣ ರೆಡ್ಡಿ, ಬಾಬುರೆಡ್ಡಿ ಭೈರತಿ,
ಪ್ರಭಾಕರ ರೆಡ್ಡಿ, ರಾಜು ರೆಡ್ಡಿ, ಐನಾಥ ರೆಡ್ಡಿ, ಅಚ್ಯುತಾನ ರೆಡ್ಡಿ, ಕಾಂತು ಜಾಲಿಬೇರಿ, ಮಂಜುನಾಥ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.