ಕೌಜಲಗಿ:
ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡಕೆರೆ ತುಂಬಿ
ಗುಡ್ಡಗಳೆಲ್ಲ ಹೈನಾಗಿ |ಜೋ| ಗೌಡರ
ಸೆಡ್ಡಿಯ ಮ್ಯಾಲೆ ಸಿರಿ ಬಂದು|ಜೋ|
ಜನಪದ ಮಳೆದೇವರು ಜೋಕುಮಾರನ ಹಾಡಿದು. ಈ ವರ್ಷ ಮತ್ತೆ ಗ್ರಾಮದಲ್ಲಿ ಜೋಕುಮಾರನ ಮೆರೆದಾಟ ಆರಂಭವಾಗಿದೆ. ಪ್ರತಿ ವರ್ಷವೂ ಸಂಪ್ರದಾಯದಂತೆ ಮಳೆಗಾಗಿ ಪ್ರಾರ್ಥಿಸಿ ಜೋಕುಮಾರನ ಮೆರವಣಿಗೆ ಮಾಡುವುದು ಜನಪದ ವಾಡಿಕೆ. ತಲೆತಲಾಂತರಗಳಿಂದಲೂ ಬೆಳೆದುಬಂದ ಈ ಪದ್ಧತಿ ಕೌಜಲಗಿಯಲ್ಲಿ ಈಗಲೂ ಜೀವಂತವಿದೆ. ಜನಪದರ ಗಟ್ಟಿಯಾದ ನಂಬಿಕೆಯ ಕಾರಣ ನೆಲದ ಸಂಪ್ರದಾಯ ಮುಂದುವರಿದಿದೆ.
ಇಲ್ಲಿನ ಬಾರ್ಕಿ ಮನೆತನದಲ್ಲಿ ಭಾದ್ರಪದ ಶುಕ್ಲದ ಅಷ್ಟಮಿ ದಿನದಂದು ಜನಿಸಿದ ಜೋಕುಮಾರ, ಪಟ್ಟಣದ ಪ್ರತಿಯೊಂದು ಓಣಿಯಲ್ಲಿ ಮೆರೆದಾಡುತ್ತಿದ್ದಾನೆ. ಬಾರ್ಕಿ ಮನೆತನದವರೊಂದಿಗೆ ಸುಣಗಾರ ಮನೆತನದ ಮಹಿಳೆಯರು ಬಿದಿರಿನ ಬುಟ್ಟಿಯಲ್ಲಿ ಜೋಕುಮಾರನ ಕೂಡಿಸಿ, ಕಣ್ಣರಳಿಸಿದ ದುಂಡು ಮುಖದ ದೊಡ್ಡ ಬಾಯಿಗೆ, ಬೆಣ್ಣೆ ಒರೆಸಿ, ತಲೆ ತುಂಬಾ ಹೂವು ಮುಡಿಸಿ, ಸುತ್ತಲೂ ಬೇವಿನ ತಪ್ಪಲಿನಿಂದ ಜೋಕುಮಾರನ ಮೂರ್ತಿಯನ್ನು ಮುಚ್ಚಿ, ಮುಖ ಮಾತ್ರ ಕಾಣುವಂತೆ ಮಾಡಿದ್ದಾರೆ. ಇದು ಜೋಕುಮಾರನ ಮೂಲ ಸ್ವರೂಪ ಕೂಡ ಆಗಿದೆ.
ಪ್ರತೀತಿ ಏನು?: ಜೋರಮುನಿ ಮತ್ತು ಜೇಷ್ಠಾದೇವಿಯ ಮಗನಾಗಿ ಹುಟ್ಟಿದ ಜೋಕುಮಾರ ಸಂಕಷ್ಟದ ಕಾಲದಲ್ಲಿ ಮಳೆ ತರಿಸಿ ಜನರಿಗೆ ನೆರವಾಗುತ್ತಾನೆ ಎಂಬುದು ಜನದರ ನಂಬಿಕೆ. ಅದರಂತೆ ಮಹಿಳೆಯರು ಅವರ ಮೂರ್ತಿ ಹೊತ್ತು ಓಣಿ ಓಣಿಗಳಲ್ಲ ಸುತ್ತಾಡಿಸುತ್ತಿದ್ದಾರೆ. ಹುಟ್ಟಿದ ಏಳು ದಿನ, ಕಂಡ ಕಂಡ ಮಹಿಳೆಯರಿಗೆ ಕಾಟ ಕೊಡುತ್ತ ಮೆರೆದಾಡುವ ಜೋಕುಮಾರ ಮನೆಯ ಬಾಗಿಲಿಗೆ ಬಂದಾಗ, ಊರಿನ ಮಹಿಳೆಯರು ಮೊರದ ತುಂಬಾ ದವಸ- ಧಾನ್ಯಗಳನ್ನು ತಂದು ಕೊಡುತ್ತಾರೆ. ಜತೆಗೆ, ಮನೆಯಲ್ಲಿರುವ ಸೊಳ್ಳೆ, ತಿಗಣೆಗಳು ಕ್ರಿಮಿಕೀಟಗಳು ಜೋಕುಮಾರನೊಂದಿಗೆ ಹೊರಟು ಹೋಗಲಿ ಎಂದು ಉಪ್ಪು, ಮೆಣಸಿನಕಾಯಿ, ಎಣ್ಣೆ-ಬೆಣ್ಣೆ, ಅಂಬಲಿ (ಹುಳಿನುಚ್ಚು) ನೀಡುವುದು ಸಂಪ್ರದಾಯ.
ಬಟ್ಟೆ ಒಗೆಯುವ ಕಲ್ಲು ಪಡಿಯ ಕೆಳಗೆ ಊರ ಮಹಿಳೆಯರಿಂದ ಹೊಡೆಸಿ, ಬಡಿಸಿಕೊಂಡು ಜೋಕುಮಾರ ಸಾವಪ್ಪುತ್ತಾನೆ. ಇಂದಿಗೂ ಕೌಜಲಗಿ ಪಟ್ಟಣದ ಅಗಸರು ಜೋಕುಮಾರನ ಸಾವಿನಿಂದ ಹಿಡಿದು ಅಂದರೆ; ಅನಂತನ ಹುಣ್ಣಿಮೆಯಿಂದ 4 ದಿನಗಳ ಕಾಲ ಬಟ್ಟೆ ಒಗೆಯಲು ಹೋಗುವುದಿಲ್ಲ. ಪೂರ್ವಕಾಲದಿಂದಲೂ ಅಗಸರು ಈ ನಿಯಮವನ್ನು ಅನುಸರಿಸಿಕೊಂಡು ಬಂದಿದ್ದಾರೆ.
ಹೀಗೆ ಸಾವು ಕಂಡ ಜೋಕುಮಾರ ಶಿವನ ಎದುರಿಗೆ ಪ್ರಾರ್ಥಿಸಿಕೊಳ್ಳುತ್ತಾನೆ. ಭೂಮಂಡಲದಲ್ಲಿ ರೈತರು ಮಳೆ ಇಲ್ಲದೆ ಬೆಳೆಯನ್ನು ಕಾಣದೆ ಕಂಗಾಲಾಗಿದ್ದಾರೆ. ಅವರಿಗೆ ಈ ಕ್ಷಣದಲ್ಲಿಯೇ ಮಳೆಯನ್ನು ಸುರಿಸು, ರೈತರು ಸಮೃದ್ಧವಾಗಿ ಬೆಳೆಯನ್ನು ಬೆಳೆದು ಸುಖವಾಗಲೆಂದು ಪ್ರಾರ್ಥಿಸುತ್ತಾನೆ ಎಂದು ಊರಿನ ಹಿರಿಯರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.